ಉತ್ತರಪ್ರದೇಶ: ಕೋಟ್ಯಂತರ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸುತ್ತಿದ್ದ ಮಹಫೂಜ ಆಲಂನ ಬಂಧನ

ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕನಿಂದ ಆಶ್ರಯ

ಕಾನಪುರ (ಉತ್ತರಪ್ರದೇಶ) – ಇಲ್ಲಿ ೬೮ ಬ್ಯಾಂಕ್ ಖಾತೆಗಳ ಮೂಲಕ ೧,೬೦೦ ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸುತ್ತಿದ್ದ ಗುಂಪೊಂದರ ಕಿಂಗ್‌ ಪಿನ್ ಮಹಫೂಜ ಆಲಂ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ ತಿಂಗಳಿನಿಂದ ಆತ ಕೋಲಕಾತಾಕ್ಕೆ ಓಡಿಹೋಗಿದ್ದನು. ಅಲ್ಲಿ ತೃಣಮೂಲ ಕಾಂಗ್ರೆಸ್ಸಿನ ಓರ್ವ ನಾಯಕ ಆತನಿಗೆ ಆಶ್ರಯ ನೀಡಿದ್ದನು. ಬಂಗಾಳದ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್ ಪರಾಜಯಗೊಂಡಾಗ, ಕೆಲವು ಮಧ್ಯವರ್ತಿಗಳ ಸಹಾಯದಿಂದ ‘ಸಂಧಾನ’ ಮಾಡಿಕೊಳ್ಳಲು ಆಲಂ ಕಾನಪೂರ ನಗರಕ್ಕೆ ಬಂದಿದ್ದನು. ಅಲ್ಲಿಯೇ ಪೊಲೀಸರು ಆತನನ್ನು ಸೆರೆಹಿಡಿದರು. ಇದಕ್ಕೂ ಮೊದಲು ಪೊಲೀಸರು ಮಹಫೂಜನ ಭಾವ ಮೆಹತಾಬ್ ಮತ್ತು ಆತನ ಮಗ ಮಾಸೂಮ್ ನನ್ನು ಮೇ ೪ ರಂದು ಬಂಧಿಸಿದ್ದರು. ಈಗ ಮುಖ್ಯ ಸೂತ್ರಧಾರ ಮಹಫೂಜನ ಬಂಧನದಿಂದಾಗಿ ಈ ದೊಡ್ಡ ಆರ್ಥಿಕ ಹಗರಣದ ಇನ್ನಷ್ಟು ಆಯಾಮಗಳು ಹೊರಬರುವ ಸಾಧ್ಯತೆಯಿದೆ.

ಪ್ರಕರಣ ಬಯಲಿಗೆ ಬಂದಿದ್ದು ಹೀಗೆ

ಫೆಬ್ರವರಿ ೧೬ ರಂದು ಯಶೋದಾನಗರದ ನಿವಾಸಿಗಳಾದ ವಾಸಿದ್ ಮತ್ತು ಆತನ ಸಹಚರ ಅರ್ಶದ್ ಅವರು ‘ಅಪರಿಚಿತ ವ್ಯಕ್ತಿಯು ಗನ್ ತೋರಿಸಿ ನಮ್ಮ ೮ ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾನೆ’ ಎಂದು ದೂರು ನೀಡಿದ್ದರು. ಆಗ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಇಬ್ಬರೂ ಲೂಟಿ ನಡೆದಿಲ್ಲವೆಂದು ತಿಳಿಸಿದರು. ಪದೇ ಪದೇ ಬದಲಾಗುತ್ತಿದ್ದ ಹೇಳಿಕೆಗಳಿಂದ ಪೊಲೀಸರಿಗೆ ಸಂಶಯ ಬಂದಿತು. ತನಿಖೆಯಲ್ಲಿ ತಿಳಿದುಬಂದ ವಿಷಯವೇನೆಂದರೆ, ಈ ಇಬ್ಬರೂ ಜಾಜಮವೂ ಇಲ್ಲಿನ ಗುಜರಿ ವ್ಯಾಪಾರಿ ಮಹಫೂಜ ಆಲಂ (ಉರ್ಫ್ ಪಪ್ಪು ಸುರಿವಾಲಾ) ಎಂಬುವವನಿಗಾಗಿ ಕೆಲಸ ಮಾಡುತ್ತಿದ್ದರು. ಅಂದು ಮಹಫೂಜನ ಸೂಚನೆಯ ಮೇರೆಗೆ ‘ಶಿವಾಂಶ ಟ್ಯಾನರಿ’ ಹೆಸರಿನಲ್ಲಿ ಐಡಿಬಿಐ ಬ್ಯಾಂಕ್‌ ನಿಂದ ೩ ಕೋಟಿ ೨೦ ಲಕ್ಷ ರೂಪಾಯಿಗಳನ್ನು ಹಿಂಪಡೆಯಲಾಗಿತ್ತು. ಅದರಲ್ಲಿ ೨ ಕೋಟಿ ೯೫ ಲಕ್ಷ ರೂಪಾಯಿಗಳನ್ನು ಮಹಫೂಜನ ಮಗ ಫೈಜ್, ಭಾವ ಮೆಹತಾಬ್ ಮತ್ತು ಇತರ ಸಂಬಂಧಿಕರಿಗೆ ನೀಡಲಾಗಿತ್ತು, ಉಳಿದ ೨೫ ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಅವರು ಮಹಫೂಜನ ಮನೆಗೆ ಹೋಗುತ್ತಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಮಹಫೂಜ, ಆತನ ಕುಟುಂಬ ಮತ್ತು ಸಂಬಂಧಿಕರ ಹೆಸರಿನಲ್ಲಿ ೧೨ ಬ್ಯಾಂಕುಗಳಲ್ಲಿ ಒಟ್ಟು ೬೮ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ. ಕಳೆದ ಎರಡೂಕಾಲು ವರ್ಷಗಳಲ್ಲಿ ಈ ಖಾತೆಗಳಲ್ಲಿ ೧,೬೦೦ ಕೋಟಿ ರೂಪಾಯಿಗಳ ವ್ಯವಹಾರ ನಡೆದಿರುವುದು ಬಯಲಾಗಿದೆ.

ಸಂಪಾದಕೀಯ ನಿಲುವು

ಬಂಗಾಳದ ತೃಣಮೂಲ ಕಾಂಗ್ರೆಸ್ ಆಡಳಿತ ಗೂಂಡಾಗಿರಿ, ಭ್ರಷ್ಟಾಚಾರಿಗಳು, ಅನಾಚಾರಿಗಳು, ಮತಾಂಧರು ಮುಂತಾದವರಿಂದ ತುಂಬಿತ್ತು! ಈಗ ಆಡಳಿತಾರೂಢ ಭಾಜಪದ ಮೇಲೆ ಇವರೆಲ್ಲರಿಗೂ ಶಿಕ್ಷೆ ನೀಡಿ ಸಂತ್ರಸ್ತ ನಾಗರಿಕರಿಗೆ ನ್ಯಾಯ ನೀಡುವ ದೊಡ್ಡ ಜವಾಬ್ದಾರಿಯಿದೆ!