ಮಲಕಾಜಗಿರಿ (ತೆಲಂಗಾಣ) ನಗರದ ಮಹಿಳೆಯರ ಅಸುರಕ್ಷಿತತೆಯನ್ನು ಬಿಂಬಿಸುವ ಭಯಾನಕ ವಾಸ್ತವ ಬಹಿರಂಗ!

ಸಾಮಾನ್ಯ ವೇಷದಲ್ಲಿ ನಿಂತಿದ್ದ ಮಹಿಳಾ ಪೊಲೀಸ್ ಆಯುಕ್ತರನ್ನು ೩ ಗಂಟೆಗಳಲ್ಲಿ ೪೦ ಪುರುಷರು ಚುಡಾಯಿಸಲು ಯತ್ನ !

ಭಾಗ್ಯನಗರ (ತೆಲಂಗಾಣ) – ಮಹಿಳೆಯರ ಸುರಕ್ಷತೆಯ ಕುರಿತಾದ ದಾವೆಗಳು ಪ್ರತ್ಯಕ್ಷವಾಗಿ ಎಷ್ಟು ನಿಜವಾಗಿವೆ ಎಂದು ಪರೀಕ್ಷಿಸಲು ಮಲಕಾಜಗಿರಿಯ ಪೊಲೀಸ್ ಆಯುಕ್ತ ಸುಮತಿ ಅವರು ಒಂದು ಅತ್ಯಂತ ವಿಭಿನ್ನ ಪ್ರಯೋಗವನ್ನು ಮಾಡಿದರು. ಅವರು ಸಾಮಾನ್ಯ ವೇಷದಲ್ಲಿ, ಯಾವುದೇ ಅಂಗರಕ್ಷಕರಿಲ್ಲದೆ ಮಧ್ಯರಾತ್ರಿ ೧೨.೩೦ ರಿಂದ ಮುಂಜಾನೆ ೩.೩೦ ರವರೆಗೆ ಬಸ್ ನಿಲ್ದಾಣವೊಂದರಲ್ಲಿ ಸಾಮಾನ್ಯ ಮಹಿಳೆಯಂತೆ ನಿಂತಿದ್ದರು. ಕೇವಲ ೩ ಗಂಟೆಗಳಲ್ಲಿ ೪೦ ಪುರುಷರು ಅವರನ್ನು ಚುಡಾಯಿಸಿದರು. ಈ ಘಟನೆಯಿಂದ ನಗರದಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬ ಭಯಾನಕ ವಾಸ್ತವವು ಮುನ್ನೆಲೆಗೆ ಬಂದಿದೆ.

ಚುಡಾಯಿಸಿದವರಲ್ಲಿ ವಿದ್ಯಾವಂತ ಯುವಕರು, ವಿದ್ಯಾರ್ಥಿಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳ ಉದ್ಯೋಗಿಗಳು!

ಈ ಪುರುಷರು ಕೇವಲ ಅಪರಾಧ ಪ್ರವೃತ್ತಿಯವರಷ್ಟೇ ಆಗಿರಲಿಲ್ಲ, ಬದಲಿಗೆ ಅವರಲ್ಲಿ ವಿದ್ಯಾವಂತ ಯುವಕರು, ವಿದ್ಯಾರ್ಥಿಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಸೇರಿದ್ದರು. ಇವರಲ್ಲಿ ಅನೇಕರು ಮದ್ಯದ ಅಮಲಿನಲ್ಲಿದ್ದರೆ, ಇನ್ನು ಕೆಲವರು ಮಾದಕ ದ್ರವ್ಯ ಸೇವಿಸಿರುವ ಶಂಕೆಯಿದೆ. ಎದುರು ನಿಂತಿರುವ ಮಹಿಳೆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ.

ಆರೋಪಿಗಳನ್ನು ಹಿಡಿದು ಕುಟುಂಬದವರ ಸಮ್ಮುಖದಲ್ಲಿ ಕಟುವಾದ ಶಬ್ದಗಳಲ್ಲಿ ಬುದ್ಧಿವಾದ !

ಈ ಕಾರ್ಯಾಚರಣೆಯ ನಂತರ ಪೊಲೀಸರು ಈ ಎಲ್ಲಾ ೪೦ ವ್ಯಕ್ತಿಗಳನ್ನು ಗುರುತಿಸಿ ವಶಕ್ಕೆ ಪಡೆದರು. ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಪೊಲೀಸ್ ಆಡಳಿತವು ಒಂದು ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿತು. ಇವರೆಲ್ಲರನ್ನು ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಕರೆಯಿಸಿ ಕಟುವಾದ ಶಬ್ದಗಳಲ್ಲಿ ಬುದ್ಧಿವಾದ ಹೇಳಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠ ಕಲಿಸಿ ಅವರಿಗೆ ಅಂತಿಮ ಎಚ್ಚರಿಕೆ ನೀಡಲಾಯಿತು.

ಸಂಪಾದಕೀಯ ನಿಲುವು

  • ಸಮಾಜದ ನೈತಿಕತೆ ಎಷ್ಟು ಕುಸಿದಿದೆ ಎಂಬುದು ಇದರಿಂದ ತಿಳಿಯುತ್ತದೆ. ಇದರಿಂದ ಸಮಾಜಕ್ಕೆ ಧರ್ಮಶಿಕ್ಷಣ ನೀಡುವ ಮಹತ್ವವನ್ನು ಇದು ಒತ್ತಿಹೇಳುತ್ತದೆ!
  • ಇಂತಹ ಪ್ರಯೋಗಗಳನ್ನು ದೇಶದ ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾಡುವುದು ಅಗತ್ಯವಾಗಿದೆ. ಅಂತಹ ಕ್ರಮಗಳಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ!