ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು

  • ಧರ್ಮವನ್ನು ಮರೆಮಾಚಿ ಮದುವೆಯಾಗಿದ್ದರಿಂದ ಅದು ಅಸಿಂಧುವಾಗಿದ್ದರೂ, ಸಂತ್ರಸ್ತೆಗೆ ಜೀವನಾಂಶ ಪಡೆಯುವ ಹಕ್ಕಿದೆ!

  • ಸಂತ್ರಸ್ತೆಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ನೀಡುವಂತೆ ಆದೇಶ

ಇಂದೋರ್ (ಮಧ್ಯಪ್ರದೇಶ) – ಧಾರ್ಮಿಕ ಗುರುತನ್ನು ಮರೆಮಾಚಿ ಮದುವೆಯಾಗುವುದು ಮತ್ತು ತದನಂತರ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠವು ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಪತಿಯು ತನ್ನ ಹಿಂದೂ ಪತ್ನಿ ಮತ್ತು ಅಪ್ರಾಪ್ತ ಮಗಳ ಜೀವನಾಂಶಕ್ಕಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನು ನೀಡಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.

ಈ ಸಂದರ್ಭದಲ್ಲಿ ನ್ಯಾಯಾಲಯವು, ಕೇವಲ ಮದುವೆಯ ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಯಾವುದೇ ಮಹಿಳೆಯನ್ನು ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತಗೊಳಿಸಲು ಸಾಧ್ಯವಿಲ್ಲ, ವಿಶೇಷವಾಗಿ ಆ ದಾಂಪತ್ಯದಿಂದ ಮಗು ಜನಿಸಿದಾಗ ಇದು ಅನ್ವಯಿಸುತ್ತದೆ ಎಂದು ಹೇಳಿದೆ.

ಏನಿದು ಪ್ರಕರಣ?

ಸಂತ್ರಸ್ತೆಗೆ ಫೆಬ್ರವರಿ 23. 2020 ರಂದು ದೇವಸ್ಥಾನವೊಂದರಲ್ಲಿ, ತಾನು ಹಿಂದೂ ಎಂದು ಗುರುತಿಸಿಕೊಂಡಿದ್ದ ಮುಸ್ಲಿಂ ಯುವಕನೊಂದಿಗೆ ವಿವಾಹವಾಗಿತ್ತು. ಜೂನ್ 2020 ರಲ್ಲಿ ಗರ್ಭಿಣಿಯಾದ ನಂತರ, ಮಹಿಳೆಗೆ ಆ ಯುವಕನ ನಿಜವಾದ ಧಾರ್ಮಿಕ ಗುರುತಿನ ಬಗ್ಗೆ ತಿಳಿಯಿತು. ಅವಳು ಇದನ್ನು ವಿರೋಧಿಸಿದಾಗ, ಅವಳ ಮೇಲೆ ಹಲ್ಲೆ ಮತ್ತು ಬೆದರಿಕೆಗಳು ನೀಡಿದ, ಹಾಗೆಯೇ ಮತಾಂತರಕ್ಕಾಗಿ ಒತ್ತಡವನ್ನು ಹೇರಲಾಯಿತು. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು ಆಗಸ್ಟ್ 26, 2023 ರಂದು ನೀಡಿದ ಆದೇಶದಲ್ಲಿ, ಈ ಮಹಿಳೆಯನ್ನು ಕಾನೂನುಬದ್ಧ ಪತ್ನಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿ, ಅವಳ ಜೀವನಾಂಶದ ಹಕ್ಕನ್ನು ವಜಾಗೊಳಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮಹಿಳೆಯು ಉಚ್ಚ ನ್ಯಾಯಾಲಯದಲ್ಲಿ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜೇಂದ್ರ ಸಿಂಗ್ ಅವರು, ಧಾರ್ಮಿಕ ಗುರುತನ್ನು ಮರೆಮಾಚಿ ಮಹಿಳೆಯನ್ನು ವಿವಾಹವಾಗಿದ್ದರೆ ಮತ್ತು ಆ ಪುರುಷನಿಂದ ಅವಳಿಗೆ ಮಗುವಾಗಿದ್ದರೆ, ಕೇವಲ ಮದುವೆಯ ಸಿಂಧುತ್ವದ ಆಧಾರದ ಮೇಲೆ ಜೀವನಾಂಶವನ್ನು ನಿರಾಕರಿಸುವುದು ಆ ಮಹಿಳೆಯನ್ನು ಮತ್ತೆ ಸಂತ್ರಸ್ತೆಯನ್ನಾಗಿ ಮಾಡಿದಂತೆ ಎಂದು ಹೇಳಿದರು.