ಕರ್ಣಾವತಿ ಏರ್ ಇಂಡಿಯಾ ಅಪಘಾತ: ಲಿಥಿಯಂ ಬ್ಯಾಟರಿ ವೈಫಲ್ಯವೇ ಕಾರಣ

​ನವ ದೆಹಲಿ – ೧೨ ಜೂನ್ ೨೦೨೫ ರಂದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುಜರಾತ್‌ನ ಕರ್ಣಾವತಿಯಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು. ಈ ಪ್ರಕರಣದ ಸರಕಾರಿ ವರದಿಯು ಪೈಲೆಟ್ ಇದಕ್ಕೆ ನೇರ ಹೊಣೆಗಾರ ಎಂದು ಹೇಳಿತ್ತು. ಈ ವರದಿಯನ್ನು ಪೈಲಟ್‌ಗಳ ಸಂಘ ವಿರೋಧಿಸಿತ್ತು. ಈಗ ‘ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್’, ಸರಕಾರಕ್ಕೆ ೨೧ ಪುಟಗಳ ವಿವರವಾದ ಪತ್ರವನ್ನು ಬರೆದಿದೆ. ‘ಈ ಅಪಘಾತವು ಪೈಲಟ್‌ಗಳ ತಪ್ಪಿನಿಂದ ಸಂಭವಿಸಿದ್ದಲ್ಲ, ಬದಲಾಗಿ ವಿಮಾನದಲ್ಲಿ ಅಳವಡಿಸಲಾಗಿದ್ದ ಲಿಥಿಯಂ ಬ್ಯಾಟರಿಯಲ್ಲಾದ ತಾಂತ್ರಿಕ ದೋಷದಿಂದ ಸಂಭವಿಸಿದೆ’ ಎಂದು ಈ ಪತ್ರದಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

​ಲಿಥಿಯಂ ಬ್ಯಾಟರಿಯಲ್ಲಿ ‘ಶಾರ್ಟ್ ಸರ್ಕ್ಯೂಟ್’ ನಿಂದಾಗಿ ಇಂಧನ ಪೂರೈಕೆ ಸ್ಥಗಿತ!

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಪೈಲೆಟ್ ಸಂಘಟನೆಯು ಈ ವಿಷಯಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಲ್ಲಿಸಿದೆ. ಅವರ ಪ್ರಕಾರ, ವಿಮಾನದ ಲಿಥಿಯಂ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತ್ತು. ಈ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಿಮಾನದ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ ಎರಡೂ ಇಂಜಿನ್‌ಗಳ ‘ಫ್ಯೂಯಲ್ ಸ್ವಿಚ್’ (ಇಂಧನ ಪೂರೈಕೆ ಮಾಡುವ ಬಟನ್) ತಾನಾಗಿಯೇ ಆಫ್ ಆಗಿವೆ. ಆಘಾತಕಾರಿ ವಿಷಯವೆಂದರೆ, ಪೈಲಟ್‌ಗಳು ಯಾವುದೇ ಚಲನವಲನ ಮಾಡದಿದ್ದರೂ ಅಥವಾ ಬಟನ್ ಒತ್ತದಿದ್ದರೂ ಸಹ ಇಂಧನ ಪೂರೈಕೆ ಸ್ಥಗಿತಗೊಂಡಿತು ಮತ್ತು ವಿಮಾನ ಪತನಗೊಂಡಿತು.

ಈ ೨೧ ಪುಟಗಳ ಪತ್ರದಲ್ಲಿ ಈ ತಾಂತ್ರಿಕ ದೋಷದ ಸಂಪೂರ್ಣ ವಿಶ್ಲೇಷಣೆ ಮಾಡಲಾಗಿದೆ. ವಿಮಾನದಲ್ಲಿನ ತಾಂತ್ರಿಕ ನ್ಯೂನತೆಗಳು ಹೇಗೆ ವಿಮಾನವನ್ನು ಸಾವಿನ ಬಲೆಗೆ ರೂಪಾಂತರಿಸಬಲ್ಲವು? ಎಂಬುದು ಇದರಲ್ಲಿ ಸ್ಪಷ್ಟಪಡಿಸಲಾಗಿದೆ. ಬ್ಯಾಟರಿಯಲ್ಲಿನ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಂಜಿನ್ ಮೇಲಿನ ನಿಯಂತ್ರಣ ತಪ್ಪುವುದು, ವಿಮಾನಯಾನ ಕ್ಷೇತ್ರದಲ್ಲಿ ಒಂದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ವಿಷಯವೆಂದು ಪರಿಗಣಿಸಲಾಗಿದೆ.