ಗೌತಮ್ ಖಟ್ಟರ್ ಅವರಿಗೆ ಜಾಮೀನು ಮಂಜೂರು

ಗೋವಾದಲ್ಲಿ ಫ್ರಾನ್ಸಿಸ್ ಕ್ಸೇವಿಯರ್ ಅವರ ಕಥಿತ ಅವಮಾನದ ಪ್ರಕರಣ

ಪಣಜಿ – ವಾಸ್ಕೋದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಫ್ರಾನ್ಸಿಸ್ ಕ್ಸೇವಿಯರ್ ಅವರಿಗೆ ಕಥಿತವಾಗಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ಕೋ ಪ್ರಥಮ ದರ್ಜೆ ನ್ಯಾಯಾಲಯವು ಮೇ 2 ರಂದು ಗೌತಮ್ ಖಟ್ಟರ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 30 ರಂದು ಪ್ರತಿವಾದಿ ಮತ್ತು ಪೊಲೀಸರ ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ, ಗೌತಮ್ ಖಟ್ಟರ್ ಅವರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಾಲಯವು ಮೇ 2, 2026 ರಂದು ಬೆಳಿಗ್ಗೆ 10 ಗಂಟೆಯವರೆಗೆ ಕಾಯ್ದಿರಿಸಿತ್ತು. ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು 15 ಸಾವಿರ ರೂಪಾಯಿಗಳ ವೈಯಕ್ತಿಕ ಜಾಮೀನು (ಪರ್ಸನಲ್ ಬಾಂಡ್) ಮತ್ತು ಇಬ್ಬರು ಶೂರಿಟಿಗಳನ್ನು ಹಾಜರುಪಡಿಸುವುದು, ಇಂತಹ ಅಪರಾಧವನ್ನು ಮಾಡಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಹೋಗಬಾರದು, ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಹಾಗೂ ಮುಂದಿನ ವಿಚಾರಣೆಗೆ ಅಗತ್ಯಕ್ಕೆ ಅನುಗುಣವಾಗಿ ಹಾಜರಿರಬೇಕು ಎಂಬ ಪ್ರಮುಖ ಷರತ್ತುಗಳನ್ನು ವಿಧಿಸಿದೆ. ನ್ಯಾಯಾಲಯದ ತೀರ್ಪು ಕೇಳಲು ನ್ಯಾಯಾಲಯದಲ್ಲಿ ಎರಡೂ ಕಡೆಯ ಜನರು ಜನಸಂದಣಿ ಮಾಡಿದ್ದರು. ಈ ಪ್ರಕರಣದಲ್ಲಿ ಹಸ್ತಕ್ಷೇಪ ಅರ್ಜಿಯನ್ನೂ ಸಲ್ಲಿಸಲಾಗಿತ್ತು; ಆದರೆ ನ್ಯಾಯಾಲಯವು ಗೌತಮ್ ಖಟ್ಟರ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಗೌತಮ್ ಖಟ್ಟರ್ ಅವರಿಗೆ ಏಪ್ರಿಲ್ 28 ರಿಂದ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದೂ ಸಹ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯವಾದಿ ನಾಗೇಶ್ ಜೋಶಿ, ನ್ಯಾಯವಾದಿ ಅಮೇಯ ಪ್ರಭುದೇಸಾಯಿ, ಮುಂಬಯಿನ ನ್ಯಾಯವಾದಿ ಘನಶ್ಯಾಮ್ ಉಪಾಧ್ಯಾಯ ಮತ್ತು ನ್ಯಾಯವಾದಿ ಯೋಗೇಶ ದೇಶಪಾಂಡೆ ಅವರು ಈ ಪ್ರಕರಣದಲ್ಲಿ ಗೌತಮ್ ಖಟ್ಟರ್ ಅವರ ಪರವಾಗಿ ವಾದ ಮಂಡಿಸಿದರು.

ಈ ಪ್ರಕರಣದ ಕುರಿತು ನ್ಯಾಯವಾದಿ ಸಂಜೀವ ಪುನಾಳೇಕರ್ ಮಾತನಾಡಿ, ನ್ಯಾಯವಾದಿ ಅಮೇಯ ಪ್ರಭುದೇಸಾಯಿ, ನ್ಯಾಯವಾದಿ ನಾಗೇಶ್ ಜೋಶಿ, ಮುಂಬಯಿನ ನ್ಯಾಯವಾದಿ ಘನಶ್ಯಾಮ್ ಉಪಾಧ್ಯಾಯ ಮತ್ತು ನ್ಯಾಯವಾದಿ ಯೋಗೇಶ್ ದೇಶಪಾಂಡೆ ಅವರನ್ನು ನಾನು ಅಭಿನಂದಿಸುತ್ತೇನೆ. ಇದು ಧರ್ಮದ ಜಯವಾಗಿದೆ. ಈ ಪ್ರಕರಣದಲ್ಲಿ ಗೌತಮ್ ಖಟ್ಟರ್ ಅವರಿಗೆ ಪೂರ್ಣ ಬೆಂಬಲ ನೀಡಿದ ಹಿಂದೂಗಳನ್ನೂ ನಾನು ಅಭಿನಂದಿಸುತ್ತೇನೆ’ ಎಂದು ಹೇಳಿದರು.