ಭಾರತದಿಂದ ಕಳ್ಳತನ ಮಾಡಿದ್ದ ೬೫೭ ಪ್ರಾಚೀನ ಮೂರ್ತಿಗಳನ್ನು ಹಸ್ತಾಂತರಿಸಿದ ಅಮೆರಿಕಾ

ನವ ದೆಹಲಿ – ಭಾರತೀಯ ಮೂಲದ ೬೫೭ ಅಪರೂಪದ ಮತ್ತು ಪ್ರಾಚೀನ ಮೂರ್ತಿಗಳನ್ನು ಅಮೆರಿಕಾ ಭಾರತಕ್ಕೆ ಮರಳಿ ನೀಡಿದೆ. ಈ ಮೂರ್ತಿಗಳ ಮೌಲ್ಯವು ಅಂದಾಜು ೧೨೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಕಳೆದ ಅನೇಕ ವರ್ಷಗಳಲ್ಲಿ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆದಾರರ ತಂಡಗಳು ಈ ಮೂರ್ತಿಗಳನ್ನು ಕಳ್ಳಸಾಗಣೆ ಮಾಡಿ ಅಮೆರಿಕಾಕ್ಕೆ ಸಾಗಿಸಿದ್ದವು. ಮ್ಯಾನ್‌ ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯು ಕಳ್ಳಸಾಗಣೆಯ ತನಿಖೆಯ ನಂತರ ಈ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ನೀಡುವ ಘೋಷಣೆ ಮಾಡಿದೆ. ಈ ಮೂರ್ತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದರಿಂದ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆ ಜಾಲಕ್ಕೆ ಸಂಬಂಧಿಸಿದ ಒಂದು ದೊಡ್ಡ ‘ಸಾಂಸ್ಕೃತಿಕ ಕಳ್ಳತನ’ದ ರಹಸ್ಯ ಬಯಲಾಗಿದೆ. ಕಳ್ಳಸಾಗಾಣಿಕೆ ಮಾಡುವ ಸುಭಾಷ ಕಪೂರ್ ಮತ್ತು ನ್ಯಾನ್ಸಿ ವಿನರ್ ಅವರ ಕ್ರಿಮಿನಲ್ ತಂಡಗಳ ಕುರಿತು ನಡೆದ ತನಿಖೆಯ ವೇಳೆ ಅಮೆರಿಕಾದ ಅಧಿಕಾರಿಗಳು ಈ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದರು. ಕಳ್ಳತನವಾಗಿದ್ದ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ತರಲು ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ ಎಂದು ಮಹಾವಾಣಿಜ್ಯ ಆಯುಕ್ತರು ಹೇಳಿದ್ದಾರೆ. ಅಮೆರಿಕಾದಿಂದ ಭಾರತಕ್ಕೆ ಮರಳಿ ದೊರೆತ ಈ ಕಲಾಕೃತಿಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಪೋಸ್ಟ್ ಮಾಡಿದ್ದಾರೆ.

ಕಳುವಾದ ಮೂರ್ತಿಗಳು ಯಾವವು?

೧. ಅವಲೋಕಿತೇಶ್ವರನ ಒಂದು ಕಂಚಿನ ಪ್ರತಿಮೆ: ಈ ಪ್ರತಿಮೆಯನ್ನು ರಾಯಪುರದ ಮಹಂತ ಘಾಸಿದಾಸ ಸ್ಮಾರಕ ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ೧೯೮೨ ರಲ್ಲಿ ಇದನ್ನು ಕದ್ದು ಅಮೆರಿಕಾಕ್ಕೆ ಸಾಗಿಸಲಾಗಿತ್ತು. ೨೦೨೫ ರಲ್ಲಿ ನ್ಯೂಯಾರ್ಕ್‌ನ ಒಂದು ಖಾಸಗಿ ಸಂಗ್ರಹದಿಂದ ಇದನ್ನು ವಶಪಡಿಸಿಕೊಳ್ಳಲಾಗಿದೆ.

೨. ಕೆಂಪು ಮರಳುಗಲ್ಲಿನ ಬುದ್ಧನ ಮೂರ್ತಿ: ಕಳ್ಳಸಾಗಾಣಿಕೆದಾರ ಸುಭಾಷ ಕಪೂರ್ ನ ಕಳ್ಳಸಾಗಾಣಿಕೆ ಜಾಲದ ಮೂಲಕ ಈ ಮೂರ್ತಿಯನ್ನು ನ್ಯೂಯಾರ್ಕ್‌ಗೆ ಸಾಗಿಸಲಾಗಿತ್ತು.

೩. ಮಧ್ಯಪ್ರದೇಶದ ಒಂದು ದೇವಸ್ಥಾನದಿಂದ ೨೦೦೦ ರಲ್ಲಿ ಲೂಟಿ ಮಾಡಲಾಗಿದ್ದ ಮರಳುಗಲ್ಲಿನ ನೃತ್ಯ ಗಣೇಶನ ಮೂರ್ತಿಯನ್ನು ಸಹ ಮರಳಿ ಪಡೆಯಲಾಗಿದೆ.