ಛತ್ರಪತಿ ಶಿವರಾಯರ ಅವಮಾನವನ್ನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ; ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ನಾಗಪುರ – ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಆದರ್ಶಪ್ರಾಯರು. ಅವರಿಂದಲೇ ಇಂದು ದೇಶದಲ್ಲಿ ಹಿಂದುತ್ವ ಜೀವಂತವಾಗಿದೆ. ಅಂತಹ ಶ್ರೇಷ್ಠ ಮಹಾಪುರುಷರ ಅವಮಾನ ಮಾಡುವ ವಿಚಾರವನ್ನು ನಾನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ. ಆದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅಂತಃಕರಣದಿಂದ ಕ್ಷಮೆ ಯಾಚಿಸುತ್ತೇನೆ ಎಂದು ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದ್ದಾರೆ. ಪ್ರವಚನವೊಂದರಲ್ಲಿ ಛತ್ರಪತಿ ಶಿವರಾಯರು ಮತ್ತು ಸಮರ್ಥ ರಾಮದಾಸ ಸ್ವಾಮಿಗಳ ಕುರಿತಾದ ಹೇಳಿಕೆಯಿಂದ ಉಂಟಾದ ವಿವಾದದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಪಂಡಿತ ಶಾಸ್ತ್ರಿ ಅವರು ಮುಂದೆ ಮಾತನಾಡುತ್ತಾ, ನಾನು ನನ್ನ ಮಾತುಗಳ ಮೂಲಕ ಮಹಾರಾಜರ ಬಗ್ಗೆ ನನಗಿರುವ ಗೌರವವನ್ನೇ ವ್ಯಕ್ತಪಡಿಸಿದೆ; ಆದರೆ ಕೆಲವು ಜನರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಯಾರ ಸ್ವರಾಜ್ಯದಿಂದ ಪ್ರೇರಣೆ ಪಡೆದು ನಾವು ‘ಹಿಂದೂ ರಾಷ್ಟ್ರ’ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆಯೋ, ಅವರ ನಿಂದನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಯಾರು ಶಿವರಾಯರನ್ನು ಗೌರವಿಸುತ್ತಾರೋ ಅವರೆಲ್ಲರೂ ನಮ್ಮವರೇ. ಇಂತಹ ವಿಷಯಗಳಿಗಾಗಿ ನಾವು ನಮ್ಮಲ್ಲೇ ಕಿತ್ತಾಡಿದರೆ ಅದರ ಲಾಭ ಕೇವಲ ಧರ್ಮದ್ರೋಹಿಗಳಿಗೆ ಮಾತ್ರ ಆಗುತ್ತದೆ. ‘ಪ್ರತಿಯೊಬ್ಬರೂ ಒಬ್ಬ ಮಗನನ್ನು ಸಂಘಕ್ಕೆ ನೀಡಬೇಕು’ ಎಂಬ ಹೇಳಿಕೆಯ ಅರ್ಥವೇನು? ಅಂದರೆ ಆ ಮಗನು ಕಟ್ಟಾ ರಾಷ್ಟ್ರಭಕ್ತ ಮತ್ತು ಸನಾತನ ವಿಚಾರಧಾರೆಯವನಾಗಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು. ಅವನು ಜಿಲ್ಲಾಧಿಕಾರಿಯಾಗಲಿ, ಶಿಕ್ಷಕನಾಗಲಿ ಅಥವಾ ಇನ್ನಾವುದೇ ವೃತ್ತಿಯಲ್ಲಿರಲಿ; ಅವನ ವಿಚಾರಗಳು ಮಾತ್ರ ಕಟ್ಟಾ ಸನಾತನವಾಗಿರಬೇಕು, ಎಂದರು.

ಏನಿದು ವಿವಾದ?

ನಾಗಪುರದ ಕಾರ್ಯಕ್ರಮವೊಂದರಲ್ಲಿ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ‘ಯುದ್ಧದಿಂದ ದಣಿದ ನಂತರ ಛತ್ರಪತಿ ಶಿವರಾಯರು ತಮ್ಮ ಮುಕುಟವನ್ನು ಸಮರ್ಥರ ಪಾದಗಳಿಗೆ ಅರ್ಪಿಸಿದ್ದರು’, ಎಂದು ಉಲ್ಲೇಖಿಸಿದ್ದರು. ಈ ಕಾರಣದಿಂದ ಕೆಲವು ಸಂಘಟನೆಗಳು ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಅವರ ಮೇಲೆ ಟೀಕೆ ಮಾಡಿದ್ದವು.

ಸಂಪಾದಕೀಯ ನಿಲುವು

  • ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಸತತವಾಗಿ ಹಿಂದೂ ರಾಷ್ಟ್ರ ಮತ್ತು ಸನಾತನ ಧರ್ಮದ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರ ಯಾವುದೋ ಒಂದು ಹೇಳಿಕೆಯನ್ನು ಆಧರಿಸಿ ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪಿತೂರಿಯನ್ನು ಧರ್ಮದ್ರೋಹಿಗಳು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ!
  • ಕ್ಷಮೆ ಕೇಳುವ ಮೂಲಕ ಅವರು ತಮ್ಮ ದೊಡ್ಡಗುಣವನ್ನು ಸಾಬೀತುಪಡಿಸಿದ್ದಾರೆ. ಈಗ ಇತರರೂ ಕೂಡ ಈ ವಿವಾದವನ್ನು ಎಳೆದಾಡದೆ ಹಿಂದೂ ಐಕ್ಯತೆಗಾಗಿ ಸಂಘಟಿತರಾಗುವುದು ಕಾಲದ ಅವಶ್ಯಕತೆಯಾಗಿದೆ!