ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!

ಮುಖ್ಯಮಂತ್ರಿಗಳನ್ನು ಸನ್ಮಾನಿಸುತ್ತಿರುವ ಸಮಸ್ತ ಹಿಂದುತ್ವನಿಷ್ಠರು

ರಾಯ್‌ಪುರ (ಛತ್ತೀಸ್‌ಗಢ) – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯದಲ್ಲಿ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಮತ್ತು ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸುವ ಐತಿಹಾಸಿಕ ಸಾಧನೆಗಾಗಿ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕರ ಜಂಟಿ ನಿಯೋಗವು ಅಭಿನಂದಿಸಿತು. ದಶಕಗಳಿಂದ ರಾಜ್ಯವನ್ನು ಕಾಡುತ್ತಿದ್ದ ನಕ್ಸಲಿಸಂ ಅನ್ನು ಕೊನೆಗಾಣಿಸುವುದು, ಹಾಗೆಯೇ ರಾಜ್ಯದಲ್ಲಿ ‘ಲವ್ ಜಿಹಾದ್’ ಮತ್ತು ಮತಾಂತರದಂತಹ ದೇಶ ವಿರೋಧಿ ಅಪರಾಧಗಳನ್ನು ನಿಯಂತ್ರಿಸಲು ಕಾನೂನು ಜಾರಿಗೆ ತಂದಿರುವುದನ್ನು ಹಿಂದೂ ಸಮಾಜವು ಸ್ವಾಗತಿಸುತ್ತದೆ ಎಂದು ನಿಯೋಗವು ಹರ್ಷ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಛತ್ತೀಸ್‌ಗಢ ಬಿಜೆಪಿಯ ಉಪಾಧ್ಯಕ್ಷ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಕೂಡ ಮುಖ್ಯಮಂತ್ರಿಗಳನ್ನು ಗೌರವಿಸಿದರು. ನಿಯೋಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸಂಘಟಕರಾದ ಸುನೀಲ್ ಘನವಟ್, ಮಂದಿರ ಮಹಾಸಂಘದ ರಾಯ್‌ಪುರ ಸಂಯೋಜಕ ಮದನಮೋಹನ್ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ಛತ್ತೀಸ್‌ಗಢ ಸಂಯೋಜಕ ಹೇಮಂತ್ ಕಾನಸ್ಕರ್, ಆಶಿಶ್ ಪರಿದಾ, ರೋಹಿತ್ ತಿರಂಗಾ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕರ ನಿಯೋಗವು ಮುಖ್ಯಮಂತ್ರಿಗಳಿಗೆ ಈ ಕೆಳಗಿನ ಬೇಡಿಕೆಗಳ ಮನವಿಯನ್ನು ಸಲ್ಲಿಸಿತು:

1. ‘ಲವ್ ಜಿಹಾದ್’ ಮತ್ತು ಮತಾಂತರ ವಿರೋಧಿ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

2. ಗೋರಕ್ಷಕರ ಮೇಲೆ ನಡೆಯುವ ಪ್ರಾಣಾಂತಿಕ ದಾಳಿಗಳನ್ನು ತಡೆಯಲು ವಿಶೇಷ ಭದ್ರತೆ ಮತ್ತು ಕಾನೂನು ನೆರವು ನೀಡಬೇಕು. ಹೊಸ ಗೋ ಸೇವಕರಿಗೆ ‘ಕೃತಕ ಗರ್ಭಧಾರಣೆ’ಯ ಉನ್ನತ ಮಟ್ಟದ ತರಬೇತಿ ನೀಡಿ ಅವರನ್ನು ಪಶುಸಂಗೋಪನಾ ಇಲಾಖೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.

3. ರಾಜ್ಯದ ಪ್ರಾಚೀನ ದೇವಸ್ಥಾನಗಳ ಭೂಮಿ ಮತ್ತು ದೇವಸ್ಥಾನಗಳ ನಿರ್ವಹಣೆಯನ್ನು ಸುರಕ್ಷಿತವಾಗಿಡಲು ‘ಮಂದಿರ ಮಹಾಸಂಘ’ದ ಸಲಹೆಗಳ ಮೇಲೆ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು.

4. ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹಿಂದೂ ಮಹಿಳಾ ಉದ್ಯೋಗಿಗಳ ಸುರಕ್ಷತೆಗಾಗಿ ‘ಕಾರ್ಪೊರೇಟ್ ಜಿಹಾದ್’ ವಿರುದ್ಧ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು.

ಗೋರಕ್ಷಕರಿಗೆ ಮಾಸಿಕ ಗೌರವಧನ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು! – ಮುಖ್ಯಮಂತ್ರಿ

ಈ ಸಂದರ್ಭದಲ್ಲಿ ಹಿಂದುತ್ವನಿಷ್ಠರ ನಿಯೋಗವು ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ‘ಗೋರಕ್ಷಕರಿಗೆ ನಿಗದಿತ ಮಾಸಿಕ ಗೌರವಧನ ನೀಡಬೇಕು’ ಎಂದು ಆಗ್ರಹಿಸಿತು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, “ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಭರವಸೆ ನೀಡಿದರು.