ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಟಿಕೆಟ್ ನೀಡಿ ಬಸ್ ನಿರ್ವಾಹಕರಿಂದ ಹಣ ಲೂಟಿ!

೫ ನಿರ್ವಾಹಕರ ಅಮಾನತು!

ಬೆಂಗಳೂರು – ರಾಜ್ಯದ ಚಿಕ್ಕಮಗಳೂರಿನಲ್ಲಿ ನಿರ್ವಾಹಕರೊಬ್ಬರು ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಪ್ರಯಾಣದ, ಅಂದರೆ ‘ಶಕ್ತಿ ಯೋಜನೆ’ಯ ಟಿಕೆಟ್ ನೀಡಿ ಅವರಿಂದ ಹಣ ಸುಲಿಗೆ ಮಾಡಿರುವ ಘಟನೆ ಈ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಬೆಂಗಳೂರಿನಲ್ಲೂ ಪುರುಷರಿಗೆ ಈ ರೀತಿ ಟಿಕೆಟ್ ನೀಡಿ ಅವರಿಂದ ಹಣ ಪಡೆದು ‘ಬಿಎಂಟಿಸಿ’ಗೆ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ವಂಚನೆ ಮಾಡಿರುವ ೫ ಬಸ್ ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಸೂರ್ಯನಾರಾಯಣ, ಬೊಮ್ಮಲಿಂಗೇಶ್, ಬ್ರಿಜೇಶ್ ಬಾಬು, ಮೋಹನ್ ಮತ್ತು ಎನ್. ಪ್ರಕಾಶ್ ಅಮಾನತಾದವರಾಗಿದ್ದಾರೆ.

ತನಿಖೆಯ ವೇಳೆ, ಬಸ್ ನಿರ್ವಾಹಕರು ಕನ್ನಡ ಓದಲು ಬಾರದ ಪುರುಷ ಪ್ರಯಾಣಿಕರಿಗೆ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ ‘ಕ್ಯೂಆರ್ ಕೋಡ್’ (QR Code) ನೀಡಿ, ಅದಕ್ಕೆ ಪ್ರಯಾಣ ದರದ ಹಣವನ್ನು ಕಳುಹಿಸುವಂತೆ ಹೇಳುತ್ತಿದ್ದರು ಹಾಗೂ ಅದಕ್ಕೆ ಪ್ರತಿಯಾಗಿ ಪ್ರಯಾಣಿಕರಿಗೆ ‘ಶಕ್ತಿ ಯೋಜನೆ’ಯ ಶೂನ್ಯ ದರದ ಟಿಕೆಟ್ ನೀಡುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಮೂಲಕ ನಿರ್ವಾಹಕರು ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ.

‘ಶಕ್ತಿ ಯೋಜನೆ’ ಎಂದರೇನು?

ರಾಜ್ಯ ಸರಕಾರದ ‘ಶಕ್ತಿ ಯೋಜನೆ’ಯು ರಾಜ್ಯದ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವ ೫ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿದೆ. ಜೂನ್ ೧೧, ೨೦೨೩ ರಿಂದ ಜಾರಿಗೆ ಬಂದಿರುವ ಈ ಯೋಜನೆಯು, ಎಲ್ಲಾ ರಾಜ್ಯಮಟ್ಟದ ಸಾರಿಗೆ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ (ವೇಗದೂತ ಸೇರಿದಂತೆ) ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ನೀಡುತ್ತದೆ.

ಸಂಪಾದಕೀಯ ನಿಲುವು

ಮೂಲತಃ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿ ಅವರ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಕಾಂಗ್ರೆಸ್ ಸರಕಾರವೇ ಅತ್ಯಂತ ಭ್ರಷ್ಟವಾಗಿದೆ. ಈ ಟಿಕೆಟ್ ನಿರ್ವಾಹಕರ ಜೊತೆಗೆ ಕಾಂಗ್ರೆಸ್ಸಿಗರ ಮೇಲೂ ಕ್ರಮ ಕೈಗೊಳ್ಳಬೇಕು!