ಕೇರಳಮ್ ನ ಕಾಂಗ್ರೆಸ್ ನಾಯಕನಿಂದ ಮಹಿಳಾ ಕಾರ್ಯಕರ್ತೆಯರಿಗೆ “ನಿಮ್ಮ ರವಿಕೆಯನ್ನು ನೀವೇ ಹರಿದುಕೊಂಡು ವಿರೋಧಿಗಳನ್ನು ಸಿಲುಕಿಸಿ” ಎಂಬ ನಾಚಿಕೆಗೇಡಿನ ಕರೆ

ತಿರುವನಂತಪುರಂ (ಕೇರಳಮ್) – ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಇಡುಕ್ಕಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ. ಮ್ಯಾಥ್ಯೂರವರ ವಿಡಿಯೋವೊಂದು ಪ್ರಸಾರವಾಗಿದೆ. ಅದರಲ್ಲಿ ಮ್ಯಾಥ್ಯೂ, ‘ರಾಜಕೀಯ ಸಂಘರ್ಷದ ಸಮಯ ಬಂದರೆ, ಮಹಿಳಾ ಕಾರ್ಯಕರ್ತೆಯರು ತಮ್ಮ ರವಿಕೆಯನ್ನು ತಾವೇ ಹರಿದುಕೊಂಡು ವಿರೋಧಿಗಳ ವಿರುದ್ಧ ಕಿರುಕುಳದ ದೂರು ದಾಖಲಿಸಬೇಕು’ ಎಂದು ಹೇಳಿದ್ದಾರೆ. ಚುನಾವಣಾ ಸಭೆಯೊಂದರಲ್ಲಿ ಮ್ಯಾಥ್ಯೂ ಈ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ.

೧. ವಿಡಿಯೋದಲ್ಲಿ ಸಿ.ಪಿ. ಮ್ಯಾಥ್ಯೂರವರು, ವಿರೋಧಿಗಳನ್ನು ಕಾನೂನಾತ್ಮಕವಾಗಿ ದುರ್ಬಲಗೊಳಿಸಲು ಮಹಿಳೆಯರನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಮಹಿಳಾ ಕಾರ್ಯಕರ್ತೆಯರು ತಮ್ಮ ಬಟ್ಟೆಗಳನ್ನು ತಾವೇ ಹರಿದುಕೊಂಡು ಪೊಲೀಸರಿಗೆ ದೂರು ನೀಡಬೇಕು, ಇದರಿಂದ ಪ್ರಕರಣವು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

೨. ‘ಇಂತಹ ಕೃತ್ಯ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನೂ ಇದರಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ದೌರ್ಜನ್ಯ ತಡೆ ಕಾಯ್ದೆಯಡಿ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಬಹುದು’ ಎಂದೂ ಮ್ಯಾಥ್ಯೂ ಹೇಳಿದ್ದಾರೆ.

೩. ಈ ವಿಡಿಯೋ ಪ್ರಸಾರವಾದ ನಂತರ ಸಿಪಿಐ(ಎಂ) ಕಾಂಗ್ರೆಸ್ ಅನ್ನು ಟೀಕಿಸಿದೆ. ಇದು ಕೇವಲ ಕಾನೂನಿನ ಅಣಕವಷ್ಟೇ ಅಲ್ಲ, ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೂ ಬಿದ್ದಿರುವ ಪೆಟ್ಟು ಎಂದು ಪಕ್ಷ ಹೇಳಿದೆ.

ವೇದಿಕೆಯಲ್ಲಿದ್ದ ನಾಯಕರು ಮೌನ ವಹಿಸಿದ್ದರು!

ಮ್ಯಾಥ್ಯೂ ಈ ಹೇಳಿಕೆ ನೀಡುವಾಗ, ಕೇರಳಮ್ ಕಾಂಗ್ರೆಸ್ ಉಪಾಧ್ಯಕ್ಷ ಜೇಸನ್ ಜೋಸೆಫ್ ಸೇರಿದಂತೆ ಹಲವು ಹಿರಿಯ ನಾಯಕರು ವೇದಿಕೆಯಲ್ಲಿದ್ದರು. ವಿಡಿಯೋದಲ್ಲಿ ಯಾವುದೇ ನಾಯಕರು ಮ್ಯಾಥ್ಯೂ ಅವರನ್ನು ತಡೆಯುವ ಅಥವಾ ವಿರೋಧಿಸುವ ಪ್ರಯತ್ನ ಮಾಡಿದ್ದು ಕಂಡುಬಂದಿಲ್ಲ. (ಇದರಿಂದ ಕಾಂಗ್ರೆಸ್‌ನ ಎಲ್ಲ ನಾಯಕರ ಸ್ತ್ರೀ-ವಿರೋಧಿ ಧೋರಣೆ ಕಂಡುಬರುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಇತರ ಸಮಯಗಳಲ್ಲಿ ಸ್ತ್ರೀ-ಪುರುಷ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರ ಸ್ತ್ರೀದ್ರೋಹಿ ಸ್ವರೂಪವು ಇದರಿಂದ ಬಯಲಾಗುತ್ತದೆ. ಇಂಥವರ ಆಡಳಿತದಲ್ಲಿ ಮಹಿಳೆಯರ ಅಸ್ತಿತ್ವವೇ ಅಪಾಯದಲ್ಲಿದೆ !