ಕೇವಲ ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇವೆ – ರಕ್ಷಣಾ ಸಚಿವ ರಾಜನಾಥ್ ಸಿಂಗ್

  • ಬ್ಯಾಲಿಸ್ಟಿಕ್ ಕ್ಷಿಪಣಿ ಸಜ್ಜಿತ ಭಾರತದ ಮೂರನೇ ಪರಮಾಣು ಜಲಾಂತರ್ಗಾಮಿ ನೌಕಾಪಡೆಗೆ ಸೇರ್ಪಡೆ

  • ‘ಐ.ಎನ್.ಎಸ್. ತಾರಾಗಿರಿ’ ಯುದ್ಧನೌಕೆಯ ಜಲಾವತರಣ

ವಿಶಾಖಪಟ್ಟಣಂ (ಆಂಧ್ರಪ್ರದೇಶ) – ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೊಳಗೊಂಡ ‘ಐ.ಎನ್.ಎಸ್. ಅರಿದಮನ್’ ಎಂಬ ಮೂರನೇ ಪರಮಾಣು ಜಲಾಂತರ್ಗಾಮಿಯನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ವಿನ್ಯಾಸದ ‘ಐ.ಎನ್.ಎಸ್. ತಾರಾಗಿರಿ’ ಯುದ್ಧನೌಕೆಯ ಜಲಾವತರಣವೂ ನಡೆಯಿತು. ಈ ಸಂದರ್ಭದಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ರಮುಖವಾಗಿ ಉಪಸ್ಥಿತರಿದ್ದರು. ‘ಕೇವಲ ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇವೆ’ ಎಂಬ ಆಶಯದ ಲೇಖನವನ್ನು ರಾಜನಾಥ ಸಿಂಗ್ ಅವರು ಈ ಕಾರ್ಯಕ್ರಮಕ್ಕೂ ಮುನ್ನ ಪ್ರಸಾರ ಮಾಡಿದ್ದರು.

೧. ‘ಐ.ಎನ್.ಎಸ್. ಅರಿದಮನ್’ ಸೇರ್ಪಡೆಯಿಂದಾಗಿ ಭಾರತದ ನೌಕಾಪಡೆಯಲ್ಲಿ ಈಗ ಬ್ಯಾಲಿಸ್ಟಿಕ್ ಕ್ಷಿಪಣಿ ಸಜ್ಜಿತ ೩ ಪರಮಾಣು ಜಲಾಂತರ್ಗಾಮಿಗಳು ಆದಂತಾಯಿತು. ಈ ಹಿಂದೆ ‘ಐ.ಎನ್.ಎಸ್. ಅರಿಹಂತ್’ ಮತ್ತು ‘ಐ.ಎನ್.ಎಸ್. ಅರಿಘಾತ್’ ಎಂಬ ದೀರ್ಘ ವ್ಯಾಪ್ತಿಯ ಪರಮಾಣು ಅಸ್ತ್ರವಾಹಕ ಜಲಾಂತರ್ಗಾಮಿಗಳು ನೌಕಾಪಡೆಗೆ ಸೇರ್ಪಡೆಗೊಂಡಿವೆ. ಇದರ ನಂತರ ನಾಲ್ಕನೇ ಜಲಾಂತರ್ಗಾಮಿಯೂ ಶೀಘ್ರದಲ್ಲೇ ನೌಕಾಪಡೆಗೆ ಸೇರಲಿದೆ ಎಂದು ಸರಕಾರ ತಿಳಿಸಿದೆ.

೨. ‘ಐ.ಎನ್.ಎಸ್. ತಾರಾಗಿರಿ’ಯು ಆಕಾಶ, ಸಮುದ್ರ ಮತ್ತು ಜಲದೊಳಗಿನ ಶತ್ರುಗಳಿಗೆ ಏಕಕಾಲದಲ್ಲಿ ಪ್ರತ್ಯುತ್ತರ ನೀಡುವ ಅತ್ಯಂತ ಪ್ರಬಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ‘ಸ್ಟೆಲ್ತ್’ ತಂತ್ರಜ್ಞಾನದಿಂದಾಗಿ ಶತ್ರುಗಳ ‘ರಾಡಾರ್’ ಕಣ್ಣಿಗೆ ಮಣ್ಣೆರಚಿ ನಿಖರವಾದ ದಾಳಿ ನಡೆಸುವುದು ಈ ಯುದ್ಧನೌಕೆಗೆ ಸಾಧ್ಯವಾಗಲಿದೆ. ಈ ನೌಕೆಯಿಂದಾಗಿ ಭಾರತದ ಸಮುದ್ರ ಸಾಮರ್ಥ್ಯವು ಮತ್ತಷ್ಟು ವೃದ್ಧಿಸಿದೆ.

೩. ರಾಷ್ಟ್ರದ ಸುರಕ್ಷತೆಗಾಗಿ ಸ್ವದೇಶಿ ಶಸ್ತ್ರಾಸ್ತ್ರ ನಿರ್ಮಾಣ ಮತ್ತು ಬಲಿಷ್ಠ ನೌಕಾಪಡೆಯ ಪ್ರತೀಕವಾಗಿ ‘ಐ.ಎನ್.ಎಸ್. ತಾರಾಗಿರಿ’ ಹೊರಹೊಮ್ಮಿದೆ. ೨೦೨೬ ರ ವೇಳೆಗೆ ಈ ಯೋಜನೆಯ ಉಳಿದ ಯುದ್ಧನೌಕೆಗಳೂ ನೌಕಾಪಡೆಗೆ ಭರ್ತಿಯಾಗಲಿದ್ದು, ಇದರಿಂದ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವ ಇನ್ನಷ್ಟು ಹೆಚ್ಚಾಗಲಿದೆ.

೪. ಮುಂಬಯಿಯ ಮಾಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಈ ‘ತಾರಾಗಿರಿ’ಯನ್ನು ನಿರ್ಮಿಸಿದ್ದು, ಇದರ ಉದ್ದ ೧೪೯ ಮೀಟರ್ ಮತ್ತು ಅಗಲ ೧೭.೮ ಮೀಟರ್ ಆಗಿದೆ. ಇದರ ಒಟ್ಟು ತೂಕ ೬,೬೭೦ ಟನ್ ಆಗಿದ್ದು, ವೇಗವು ೩೨ ನಾಟ್ (ಸಮುದ್ರ ಮೈಲಿ) ಗಂಟೆಗೆ ೫೨ ರಿಂದ ೫೯ ಕಿ.ಮೀ. ಆಗಿದೆ.

೫. ಇದರಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳು, ಎಂ.ಎಫ್.- ಸ್ಟಾರ್ ರಾಡಾರ್, ಮಧ್ಯಮ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ, ೭೬ ಮಿ.ಮೀ. ಫಿರಂಗಿ, ಟಾರ್ಪಿಡೊ ಮತ್ತು ಜಲಾಂತರ್ಗಾಮಿ ವಿರೋಧಿ ರಾಕೆಟ್ ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ. ಈ ಮೂಲಕ ಭಾರತದ ಸರಕಾರವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯ ದೊಡ್ಡ ಹೆಜ್ಜೆಯನ್ನಿಟ್ಟಿದೆ.