ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಮತ್ತು ಸರಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯ ಬಂಧನ

ಆರೋಪಿ ಶ್ರೀನಿವಾಸ ಲೂಯಿಸ್ ಮಾನಸಿಕವಾಗಿ ಅಸ್ವಸ್ಥನಿರಬಹುದೆಂದು ಪೊಲೀಸರ ಶಂಕೆ

ನವ ದೆಹಲಿ – ದೇಶಾದ್ಯಂತದ ಶಾಲೆಗಳು, ನ್ಯಾಯಾಲಯಗಳು ಮತ್ತು ಸರಕಾರಿ ಕಚೇರಿಗಳನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಕಳೆದ ಕೆಲವು ತಿಂಗಳುಗಳಿಂದ ಬೆದರಿಕೆಗಳು ಬರುತ್ತಿದ್ದವು. ಪೊಲೀಸರ ತನಿಖೆಯ ಕಾರ್ಯಾಚರಣೆಯ ನಂತರ ಈ ಬೆದರಿಕೆಗಳು ಕೇವಲ ವದಂತಿ ಎಂದು ತಿಳಿದುಬರುತ್ತಿತ್ತು. ಈಗ ದೆಹಲಿ ಪೊಲೀಸರು ಈ ಬೆದರಿಕೆಗಳನ್ನು ಹಾಕುತ್ತಿದ್ದ ಆರೋಪಿಯನ್ನು ಕರ್ನಾಟಕದ ಮೈಸೂರಿನಿಂದ ಬಂಧಿಸಿದ್ದಾರೆ. ದೇಶಾದ್ಯಂತ ಸಾವಿರಾರು ಸ್ಥಳಗಳಲ್ಲಿ ಬೆದರಿಕೆ ಹಾಕಿ ದಿಗಿಲು ಹುಟ್ಟಿಸಿದ ಆರೋಪ ಇವನ ಮೇಲಿದ್ದು, ಇವನ ಹೆಸರು ಶ್ರೀನಿವಾಸ ಲೂಯಿಸ್ ಎಂದು ತಿಳಿದುಬಂದಿದೆ.

೧. ಶ್ರೀನಿವಾಸ ಲೂಯಿಸ್ ಮೈಸೂರಿನ ಬೃಂದಾವನ ಲೇಔಟ್, ಸೆಕೆಂಡ್ ಫೇಸ್, ಸಿಕ್ಸ್ತ್ ಕ್ರಾಸ್ ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದನು. ಇವನು ಬೆದರಿಕೆಯ ಇ-ಮೇಲ್ ಗಳನ್ನು ಕಳುಹಿಸುತ್ತಿದ್ದನು. ಪೊಲೀಸರು ಆರೋಪಿ ಶ್ರೀನಿವಾಸನ ಮನೆಯ ಮೇಲೆ ದಾಳಿ ಮಾಡಿದಾಗ ಅವನಿಂದ ಹಲವಾರು ಸಿಮ್ ಕಾರ್ಡ ಗಳು ಮತ್ತು ಒಂದು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.

೨. ಪೊಲೀಸರ ಪ್ರಕಾರ, ಶ್ರೀನಿವಾಸನು ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು. ಇವನು ಅವಿವಾಹಿತನಾಗಿದ್ದು, ಮೈಸೂರಿನ ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಇವನು ಸ್ನಾತಕೋತ್ತರ ಪದವೀಧರನಾಗಿದ್ದರೂ ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ. ಇವನ ತಾಯಿ ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ಅವರ ನಿವೃತ್ತಿ ವೇತನದಿಂದಲೇ ಇವರ ಜೀವನ ನಡೆಯುತ್ತಿದೆ.