ಬಾಂಗ್ಲಾದೇಶದ ನಂತರ ಈಗ ಶ್ರೀಲಂಕಾಗೆ ಭಾರತದ ನೆರವು!

೩೮ ಸಾವಿರ ಮೆಟ್ರಿಕ್ ಟನ್ ತೈಲ ಪೂರೈಕೆ!

ನವದೆಹಲಿ – ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿರುವುದರಿಂದ ಇಡೀ ಜಗತ್ತು ಇಂಧನ ಸಂಕಟವನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ, ಭಾರತವು ಬಾಂಗ್ಲಾದೇಶದ ಬೆನ್ನಲ್ಲೇ ಈಗ ಶ್ರೀಲಂಕಾಗೂ ತೈಲವನ್ನು ಪೂರೈಸಿದೆ. ಭಾರತವು ಶ್ರೀಲಂಕಾಗೆ ಒಟ್ಟು ೩೮ ಸಾವಿರ ಮೆಟ್ರಿಕ್ ಟನ್ ತೈಲವನ್ನು ನೀಡಿದ್ದು, ಇದರಲ್ಲಿ ೨೦ ಸಾವಿರ ಮೆಟ್ರಿಕ್ ಟನ್ ಡೀಸೆಲ್ ಮತ್ತು ೧೮ ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಸೇರಿದೆ. ಭಾರತದ ಈ ಸಹಾಯಕ್ಕಾಗಿ ಶ್ರೀಲಂಕಾ ಕೃತಜ್ಞತೆ ಸಲ್ಲಿಸಿದೆ.

ಸಂಕಷ್ಟದ ಸಮಯದಲ್ಲಿ ಚೀನಾ ಶ್ರೀಲಂಕಾಗೆ ಯಾವುದೇ ಸಹಾಯ ಮಾಡಲಿಲ್ಲ! – ವಿರೋಧ ಪಕ್ಷದ ನಾಯಕ ಪ್ರೇಮದಾಸಾ

ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸಾರವರು ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. “ನಿಜವಾದ ಸಂಬಂಧದ ಗುರುತು ಸಂಕಷ್ಟದ ಕಾಲದಲ್ಲೇ ಆಗುತ್ತದೆ ಮತ್ತು ಈ ಕಠಿಣ ಸಮಯದಲ್ಲಿ ಭಾರತವು ಶ್ರೀಲಂಕಾವನ್ನುಅ ಬೆಂಬಲಿಸುವ ಮೂಲಕ ಅದನ್ನು ಸಾಬೀತುಪಡಿಸಿದೆ” ಎಂದು ಅವರು ಹೇಳಿದರು. ವಿಶೇಷವೆಂದರೆ, ಇದೇ ವರ್ಷದ ಜನವರಿಯಲ್ಲಿ ಶ್ರೀಲಂಕಾವು ಚೀನಾದ ನಿಯಂತ್ರಣದಲ್ಲಿರುವ ಹಂಬಂತೋಟ ಬಂದರಿನ ಬಳಿ ೨ ಲಕ್ಷ ಬ್ಯಾರೆಲ್ ಸಾಮರ್ಥ್ಯದ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಚೀನಾದ ಸರಕಾರಿ ಇಂಧನ ಸಂಸ್ಥೆ ‘ಸಿನೋಪೆಕ್’ ಜೊತೆಗೆ ೩.೭ ಶತಕೋಟಿ ಡಾಲರ್ (೩೪ ಸಾವಿರದ ೭೮೦ ಕೋಟಿ ರೂಪಾಯಿಗಳ) ಒಪ್ಪಂದ ಮಾಡಿಕೊಂಡಿತ್ತು. ಹೀಗಿದ್ದೂ, ಈ ಸಂಕಷ್ಟದ ಸಮಯದಲ್ಲಿ ಚೀನಾದಿಂದ ಶ್ರೀಲಂಕಾಗೆ ಯಾವುದೇ ಸಹಾಯ ಲಭಿಸಲಿಲ್ಲ. (ಪ್ರೇಮದಾಸಾರವರು ಈಗ ತಮ್ಮ ದೇಶವು ಚೀನಾದಿಂದ ದೂರವಿದ್ದು, ಭಾರತವನ್ನು ‘ದೊಡ್ಡಣ್ಣ’ ಎಂದು ಪರಿಗಣಿಸಿ, ಭಾರತದ ಭದ್ರತೆಗೆ ಯಾವುದೇ ಧಕ್ಕೆ ಬರದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !- ಸಂಪಾದಕರು)

ಪ್ರೇಮದಾಸಾರವರ ಈ ‘ಎಕ್ಸ್’ (X) ಪೋಸ್ಟ್ ಚೀನಾದ ಮೇಲಿನ ಪರೋಕ್ಷ ಟೀಕೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಇಂತಹ ಉದಾರತೆಯನ್ನು ತೋರಿಸುವುದರಲ್ಲಿ ತಪ್ಪೇನಿಲ್ಲ; ಆದರೆ ಪ್ರತಿಯಾಗಿ ಆ ದೇಶಗಳಲ್ಲಿನ ಹಿಂದೂಗಳು ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಯದಂತೆ ಭಾರತವು ಖಾತರಿಪಡಿಸಿಕೊಳ್ಳಬೇಕು ಎಂಬುದು ಹಿಂದೂಗಳ ಆಶಯವಾಗಿದೆ!