ಫರೀದಾಬಾದ (ಹರಿಯಾಣ) ಇಲ್ಲಿ ಪಾಕಿಸ್ತಾನದ ಗೂಢಚಾರನ ಬಂಧನ

  • ಪೆಟ್ರೋಲ್ ಪಂಪ್‌ ನಲ್ಲಿ ವಾಹನ ದುರಸ್ತಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಏಜೆಂಟ್ ನೌಶಾದ್

  • ಸೂಕ್ಷ್ಮ ಪ್ರದೇಶಗಳ ಪ್ರತಿಯೊಂದು ಛಾಯಾಚಿತ್ರ ಕಳುಹಿಸಿ 6 ಸಾವಿರ ರೂಪಾಯಿ ಪಡೆಯುತ್ತಿದ್ದ

ಫರೀದಾಬಾದ (ಹರಿಯಾಣ) – ಇಲ್ಲಿ ಪಾಕಿಸ್ತಾನಕ್ಕಾಗಿ ಗೂಢಚಾರ ಮಾಡುತ್ತಿದ್ದ ನೌಶಾದ್ ಅಲಿ ಉರ್ಫ್ ಲಾಲು ಎಂಬಾತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ನೌಶಾದ್ ಪೆಟ್ರೋಲ್ ಪಂಪ್‌ ಗೆ ಬರುವ ವಾಹನಗಳ ಚಕ್ರಗಳ ಪಂಕ್ಚರ್ ತೆಗೆಯುವ ಕೆಲಸ ಮಾಡುತ್ತಿದ್ದನು. ಈತ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡುವ ಗುಂಪಿನ ಸದಸ್ಯನಾಗಿದ್ದು, ಸೂಕ್ಷ್ಮ ಪ್ರದೇಶಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ.

೧. ಗೂಢಚಾರ ಗುಂಪಿನ ಮುಖ್ಯಸ್ಥನಾಗಿದ್ದ ಉತ್ತರ ಪ್ರದೇಶದ ಮೀರತ್ ನಿವಾಸಿ ಸುಹೇಲ್ ಸೇರಿದಂತೆ ೨೨ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖಾ ಸಂಸ್ಥೆಗಳು ಈ ಜಾಲದ ಮೂಲವನ್ನು ಪತ್ತೆ ಹಚ್ಚುತ್ತಿವೆ. ನೌಶಾದ್ ಅಲಿ ಮುಜಾಫರಪುರ ಜಿಲ್ಲೆಯ ಹರಚಂದಾ ಗ್ರಾಮದ ನಿವಾಸಿಯಾಗಿದ್ದಾನೆ. ೩ ತಿಂಗಳ ಹಿಂದೆ ಈತ ಫರೀದಾಬಾದನ ನಚೌಲಿ ಗ್ರಾಮದ ಪೆಟ್ರೋಲ್ ಪಂಪ್‌ ನಲ್ಲಿ ಪಂಕ್ಚರ್ ಅಂಗಡಿ ಆರಂಭಿಸಿದ್ದನು.

೨. ಪೊಲೀಸರು ನಡೆಸಿದ ತನಿಖೆಯಲ್ಲಿ ನೌಶಾದ್ ರೈಲ್ವೆ ನಿಲ್ದಾಣಗಳು ಮತ್ತು ಭದ್ರತಾ ಪಡೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶಗಳ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ತಯಾರಿಸಿ ‘ವಾಟ್ಸಾಪ್’ ಗುಂಪುಗಳ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು ಎಂಬುದು ಬಹಿರಂಗವಾಗಿದೆ. ಪ್ರತಿ ಛಾಯಾಚಿತ್ರಕ್ಕಾಗಿ ಆತನಿಗೆ ೪ ರಿಂದ ೬ ಸಾವಿರ ರೂಪಾಯಿಗಳು ಸಿಗುತ್ತಿದ್ದವು.

೩. ವಾಟ್ಸಾಪ್ ಗುಂಪಿನ ಸದಸ್ಯರು ಸೂಕ್ಷ್ಮ ಪ್ರದೇಶಗಳ ನೇರ ಪ್ರಸಾರವನ್ನು (ಲೈವ್ ವಿಡಿಯೋ) ಸಹ ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಕಳುಹಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

೪. ಪೆಟ್ರೋಲ್ ಪಂಪ್‌ ನ ಮಾಜಿ ವ್ಯವಸ್ಥಾಪಕ ರವೀಂದ್ರ ಎಂಬಾತ ನೌಶಾದ್‌ ಗೆ ಇಲ್ಲಿ ಅಂಗಡಿ ಆರಂಭಿಸಲು ಸಹಾಯ ಮಾಡಿದ್ದನು. ಮೇವ್ಲಾ ಮಹಾರಾಜಪುರದ ಮುಮ್ತಾಜ್ ಎಂಬ ವ್ಯಕ್ತಿಯ ಮೂಲಕ ನೌಶಾದ್‌ ನನ್ನು ಕೋಲಕಾತಾದಿಂದ ಕರೆಯಿಸಿಕೊಳ್ಳಲಾಗಿತ್ತು.
ಪ್ರಸ್ತುತ ಉತ್ತರ ಪ್ರದೇಶ ಪೊಲೀಸರು, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ, ದೆಹಲಿ ಪೊಲೀಸರು ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ಈ ಸಂಪೂರ್ಣ ಜಾಲದ ತನಿಖೆ ನಡೆಸುತ್ತಿದ್ದಾರೆ.

ದೇಶಾದ್ಯಂತ ೫೦ ಸೌರ ಕ್ಯಾಮೆರಾಗಳನ್ನು ಅಳವಡಿಸಲು ಪಾಕ್ ಗೂಢಚಾರರ ಯೋಜನೆ!

ಪಾಕಿಸ್ತಾನದ ಗೂಢಚಾರರು ದೇಶಾದ್ಯಂತ ೫೦ ಸೌರ (ಸೋಲಾರ್) ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಿದ್ದರು. ಅವುಗಳಲ್ಲಿ ಕೆಲವು ಕ್ಯಾಮೆರಾಗಳನ್ನು ದೆಹಲಿ, ಸೋನಿಪತ್ ಮತ್ತು ಇತರ ರೈಲ್ವೆ ನಿಲ್ದಾಣಗಳ ಪರಿಸರದಲ್ಲಿ ಈಗಾಗಲೇ ಅಳವಡಿಸಲಾಗಿತ್ತು. ಈ ಕ್ಯಾಮೆರಾಗಳ ಮೂಲಕ ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ರೈಲ್ವೆ ನಿಲ್ದಾಣಗಳ ಚಟುವಟಿಕೆಗಳ ನೇರ ಪ್ರಸಾರವನ್ನು ವೀಕ್ಷಿಸಲು ಸಾಧ್ಯವಾಗುತ್ತಿತ್ತು. ಪೊಲೀಸರು ಈ ಕ್ಯಾಮೆರಾಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ (ಫೋರೆನ್ಸಿಕ್) ತಪಾಸಣೆಗೆ ಕಳುಹಿಸಿದ್ದಾರೆ.

೪೫೦ಕ್ಕೂ ಹೆಚ್ಚು ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗಿದೆ!

ಪೊಲೀಸರ ಮಾಹಿತಿಯ ಪ್ರಕಾರ, ಇದುವರೆಗೆ ೪೫೦ಕ್ಕೂ ಹೆಚ್ಚು ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಪ್ರತಿಯೊಂದು ಕ್ಯಾಮೆರಾ ಅಳವಡಿಸಲು ಆರೋಪಿಗಳಿಗೆ ೧೦ ರಿಂದ ೧೫ ಸಾವಿರ ರೂಪಾಯಿ ಸಿಗುತ್ತಿತ್ತು. ದೆಹಲಿ ಕಂಟೋನ್ಮೆಂಟ್ ಪ್ರದೇಶ ಮತ್ತು ಸೋನಿಪತ್ ರೈಲ್ವೆ ನಿಲ್ದಾಣದ ಬಳಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ಈಗ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾರ್ಚ್ ೧೪ ರಂದು ಮಾಹಿತಿ ಲಭಿಸಿತ್ತು.

ಸಂಪಾದಕೀಯ ನಿಲುವು

ದೇಶದಲ್ಲಿ ನಿರಂತರವಾಗಿ ಭಯೋತ್ಪಾದಕರು, ಅವರ ಸಹಚರರು ಮತ್ತು ಗೂಢಚಾರರನ್ನು ಬಂಧಿಸಲಾಗುತ್ತಿದೆ. ಇದರಿಂದ ದೇಶದ್ರೋಹಿ ಶಕ್ತಿಗಳು ದೇಶವನ್ನು ಎಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿವೆ ಎಂಬುದು ತಿಳಿಯುತ್ತದೆ! ಸರಕಾರವು ಇಂತವರಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಪ್ರಕರಣಗಳು ನಿಲ್ಲಲು ಸಾಧ್ಯ!