​ಉತ್ತರ ಭಾರತದಲ್ಲಿ ಬಿರುಗಾಳಿ ಸಹಿತ ಮಳೆ: ಕೆಲವು ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ

೨ ರಿಂದ ೯ ಡಿಗ್ರಿಗಳವರೆಗೆ ಕುಸಿದ ತಾಪಮಾನ

ಶಿಮ್ಲಾ/ಡೆಹ್ರಾಡೂನ್/ಲಕ್ಷ್ಮಣಪುರಿ/ಭೋಪಾಲ್/ಕೋಹಿಮಾ – ಉತ್ತರ ಹಾಗೂ ಈಶಾನ್ಯ ಭಾರತದ ಹವಾಮಾನವು ಇದ್ದಕ್ಕಿದ್ದಂತೆ ಬದಲಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮಳೆಯೊಂದಿಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಎಲ್ಲೆಡೆ ದಟ್ಟವಾದ ಮೋಡಗಳು ಕವಿದಿವೆ. ಬೀಸುತ್ತಿರುವ ತಣ್ಣನೆಯ ಗಾಳಿಯಿಂದಾಗಿ ತಾಪಮಾನವು ೨ ರಿಂದ ೯ ಡಿಗ್ರಿಗಳವರೆಗೆ ಕೆಳಕ್ಕೆ ಇಳಿದಿದೆ. ಹರಿಯಾಣದ ರೇವಾರಿಯಲ್ಲಿ ಮಾರ್ಚ್ ೧೮ ರ ರಾತ್ರಿ ಭಾರೀ ಆಲಿಕಲ್ಲು ಮಳೆಯಾಗಿದೆ. ರಸ್ತೆಗಳ ಮೇಲೆ ನೀರು ನಿಂತಿದೆ.

ಹಿಮಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆ

ಹಿಮಾಚಲ ಪ್ರದೇಶದ ಚಂಬಾ, ಕಾಂಗಡಾ, ಕುಲ್ಲು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಸಿಡಿಲು, ಮಿಂಚು ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

ಉತ್ತರಾಖಂಡದಲ್ಲಿ ಹಿಮಪಾತ

ರಾಜ್ಯದ ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಪಿಥೋರಾಗಢದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ.

ಮಧ್ಯಪ್ರದೇಶದ ಪರಿಸ್ಥಿತಿ

ರಾಜ್ಯದ ಭೋಪಾಲ್, ಇಂದೋರ್, ಗ್ವಾಲಿಯರ್ ಸೇರಿದಂತೆ ೩೩ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ೩ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಮುಂದಿನ ೩ ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಗಂಟೆಗೆ ೩೦ ರಿಂದ ೫೦ ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ನಾಗಾಲ್ಯಾಂಡ್‌ನಲ್ಲಿ ಬಿರುಗಾಳಿ ಸಹಿತ ಮಳೆ

ನಾಗಾಲ್ಯಾಂಡ್ ರಾಜ್ಯದಲ್ಲಿ ಸಂಭವಿಸಿದ ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ೪೬ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಚುಮೌಕೆಡಿಮಾ ಮತ್ತು ಪೆರೆನ್ ಜಿಲ್ಲೆಗಳಲ್ಲಿ ಅನೇಕ ಮನೆಗಳು ಹಾಗೂ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಮೋನ್ ಜಿಲ್ಲೆಯ ಸರಕಾರಿ ಶಾಲೆಯೊಂದಕ್ಕೂ ಹಾನಿಯಾಗಿದೆ.

ಮುಂದಿನ ಎರಡು ದಿನ ಬಹುತೇಕ ಸ್ಥಳಗಳಲ್ಲಿ ಬಿರುಗಾಳಿ ಅಥವಾ ಮಳೆ

೨೦ ಮತ್ತು ೨೧ ಮಾರ್ಚ್ ರಂದು ಹವಾಮಾನ ಇಲಾಖೆಯು ರಾಜಧಾನಿ ದೆಹಲಿಯಲ್ಲಿ ಹಗುರ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲೂ ಬಿರುಗಾಳಿಯ ಎಚ್ಚರಿಕೆ ನೀಡಲಾಗಿದೆ.