ವಿಧಾನಮಂಡಲದಲ್ಲಿ ಶಿರಡಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಆಮ್ಲ ದಾಳಿಯ ಪ್ರತಿಧ್ವನಿ!

ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು! – ಉಸ್ತುವಾರಿ ಸಚಿವ ರಾಧಾಕೃಷ್ಣ ವಿಖೆ-ಪಾಟೀಲ್ ಭರವಸೆ

ಮುಂಬಯಿ, ಮಾರ್ಚ್ ೧೮ (ಸುದ್ದಿ) – ಶಿರಡಿ ಸಮೀಪದ ಲೋಣಿಯಲ್ಲಿ ೧೩ ವರ್ಷದ ಶಾಲಾ ವಿದ್ಯಾರ್ಥಿನಿಯ ಮುಖದ ಮೇಲೆ ಆಮ್ಲ (ಆಸಿಡ್) ಎರಚಿ ಅವಳನ್ನು ವಿರೂಪಗೊಳಿಸಲು ಯತ್ನಿಸಿದ ಸಂತಾಪಜನಕ ಘಟನೆ ನಡೆದಿದೆ. ಈ ಅಮಾನುಷ ಕೃತ್ಯದ ಪ್ರತಿಧ್ವನಿ ಮಾರ್ಚ್ ೧೮ ರಂದು ವಿಧಾನಮಂಡಲದಲ್ಲಿ ತೀವ್ರವಾಗಿ ಕೇಳಿಬಂದಿತು. ‘ಈ ಪ್ರಕರಣದ ದೋಷಿಯನ್ನು ಯಾವುದೇ ಪರಿಸ್ಥಿತಿಯಲ್ಲೂ ಬಿಡುವುದಿಲ್ಲ. ಅವನಿಗೆ ಕಠಿಣ ಶಿಕ್ಷೆ ನೀಡಲಾಗುವುದು’, ಎಂದು ಅಹಲ್ಯಾನಗರದ ಉಸ್ತುವಾರಿ ಸಚಿವ ರಾಧಾಕೃಷ್ಣ ವಿಖೆ-ಪಾಟೀಲ್ ಭರವಸೆ ನೀಡಿದರು.

ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾರ್ವಜನಿಕ ರಸ್ತೆಯಲ್ಲಿ ಆಮ್ಲ ಎರಚಿ ಆರೋಪಿ ಪರಾರಿಯಾಗಿದ್ದಾನೆ. ಈ ಘಟನೆಯಿಂದ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಗ್ರಾಮೀಣ ಭಾಗವಾಗಿರುವುದರಿಂದ ಘಟನಾ ಸ್ಥಳದಲ್ಲಿ ‘ಸಿಸಿಟಿವಿ’ ಕ್ಯಾಮೆರಾಗಳಿಲ್ಲ; ಆದರೆ ಪ್ರಾಥಮಿಕ ಅಂದಾಜಿನ ಪ್ರಕಾರ ಆರೋಪಿ ಸ್ಥಳೀಯನೇ ಇರಬಹುದೆಂದು ಶಂಕಿಸಲಾಗಿದೆ. ಪೊಲೀಸರ ತಂಡಗಳು ಆ ನರಾಧಮನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಅವನನ್ನು ಬಂಧಿಸಲಾಗುವುದು ಎಂದು ಆಡಳಿತ ತಿಳಿಸಿದೆ.

ಕಠಿಣ ಕ್ರಮ ಕೈಗೊಳ್ಳಲೇಬೇಕು! – ಉಸ್ತುವಾರಿ ಸಚಿವ ವಿಖೆ-ಪಾಟೀಲ್

ಉಸ್ತುವಾರಿ ಸಚಿವ ವಿಖೆ-ಪಾಟೀಲ್ ಈ ಬಗ್ಗೆ ಮಾತನಾಡಿ, ಈ ಘಟನೆಯು ಅತ್ಯಂತ ಖಂಡನೀಯವಾಗಿದೆ. ಇಂತಹ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ ಎಂದರು.

‘ಮನೋಧೈರ್ಯ’ ಯೋಜನೆಯಡಿ ಸಂತ್ರಸ್ತೆಗೆ ತಕ್ಷಣದ ಆರ್ಥಿಕ ನೆರವು ನೀಡಲಾಗುವುದು! – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತಟಕರೆ ಮಾತನಾಡಿ, ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂತ್ರಸ್ತ ಬಾಲಕಿ ಮತ್ತು ಅವಳ ಕುಟುಂಬದವರು ಸದ್ಯ ದೊಡ್ಡ ಆಘಾತದಲ್ಲಿದ್ದಾರೆ. ಪ್ರಸ್ತುತ ಬಾಲಕಿಗೆ ಲೋಣಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾದ ನಂತರ ಅವಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಸರಕಾರದ ‘ಮನೋಧೈರ್ಯ’ ಯೋಜನೆಯಡಿ ಆಕೆಗೆ ತಕ್ಷಣ ಆರ್ಥಿಕ ನೆರವು ನೀಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.