ವಾಸ್ತವ ತಿಳಿಸುವ ‘ಆಪ್ ಇಂಡಿಯಾ’ ವಿಡಿಯೋವನ್ನು ‘ಮೆಟಾ’ದಿಂದ ಡಿಲೀಟ್ !

  • ಕಾಶ್ಮೀರಿ ಮುಸ್ಲಿಂ ಮಹಿಳಾ ಪತ್ರಕರ್ತೆಗೆ ದೆಹಲಿಯಲ್ಲಿ ಬಾಡಿಗೆ ಮನೆ ಸಿಗದ ಹಿನ್ನೆಲೆ ‘ಬಿಬಿಸಿ’ಯಿಂದ ‘ಇಸ್ಲಾಮೋಫೋಬಿಯಾ’ ಆರೋಪ

  • ‘ಮೆಟಾ’ ಡಿಲೀಟ್ ಮಾಡಿದ ವಿಡಿಯೋವನ್ನು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದ ‘ಆಪ್ ಇಂಡಿಯಾ’!

(‘ಇಸ್ಲಾಮೋಫೋಬಿಯಾ’ ಎಂದರೆ ಇಸ್ಲಾಂ ದ್ವೇಷ)

ನವದೆಹಲಿ – ಕಾಶ್ಮೀರದ ಮುಸ್ಲಿಂ ಮಹಿಳಾ ಪತ್ರಕರ್ತೆ ಗಫೀರಾ ಖಾದಿರ್ ಅವರಿಗೆ ದೆಹಲಿಯಲ್ಲಿ ವಾಸಿಸಲು ಬಾಡಿಗೆ ಮನೆ ಸಿಗುತ್ತಿರಲಿಲ್ಲ. ಇದನ್ನು ಕಥಿತ ‘ಇಸ್ಲಾಮೋಫೋಬಿಯಾ’ (ಇಸ್ಲಾಂ ದ್ವೇಷ) ಎಂದು ಕರೆದು ಹಿಂದೂ-ವಿರೋಧಿ ಮತ್ತು ಭಾರತ-ವಿರೋಧಿ ‘ಬಿಬಿಸಿ’ ಈ ಬಗ್ಗೆ ಒಂದು ವಿಡಿಯೋ ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ತೋರಿಸಿರುವುದಕ್ಕಿಂತ ವಾಸ್ತವ ಸ್ಥಿತಿ ಭಿನ್ನವಾಗಿದೆ ಎಂಬ ಮಾಹಿತಿಯನ್ನು ನೀಡುವ ಮತ್ತೊಂದು ವಿಡಿಯೋವನ್ನು ‘ಆಪ್ ಇಂಡಿಯಾ’ ಎಂಬ ಹಿಂದುತ್ವವಾದಿ ಸುದ್ದಿ ಸಂಸ್ಥೆ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿತ್ತು. ಆದರೆ ಫೇಸ್‌ಬುಕ್ ಅನ್ನು ನಿರ್ವಹಿಸುವ ‘ಮೆಟಾ’ ಸಂಸ್ಥೆಯು, ‘ಆಪ್ ಇಂಡಿಯಾದ ವಿಡಿಯೋ ಹಿಂಸಾಚಾರವನ್ನು ಬೆಂಬಲಿಸುವಂತಿದೆ’ ಎಂಬ ಕಾರಣ ನೀಡಿ ಫೇಸ್‌ಬುಕ್‌ನಿಂದ ಡಿಲೀಟ್ ಮಾಡಿತು. ‘ಮೆಟಾ’ ತೆಗೆದುಹಾಕಿದ ಈ ವಿಡಿಯೋವನ್ನು ‘ಆಪ್ ಇಂಡಿಯಾ’ ಈಗ ‘ಎಕ್ಸ್’ (ಟ್ವಿಟರ್) ನಲ್ಲಿ ಪ್ರಸಾರ ಮಾಡಿದೆ.

‘ಬಿಬಿಸಿ’ಯ ವಿಡಿಯೋದಲ್ಲಿ ಏನಿದೆ?

‘ದೆಹಲಿಯಲ್ಲಿ ಕೆಲಸ ಮಾಡುವ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ದೆಹಲಿಯಲ್ಲಿ ಬಾಡಿಗೆ ಮನೆಗಳು ಸಿಗುತ್ತಿಲ್ಲ’ ಎಂದು ‘ಬಿಬಿಸಿ’ಯ ವಿಡಿಯೋದಲ್ಲಿ ಹೇಳಲಾಗಿದೆ. ಇದಕ್ಕೆ ‘ಇಸ್ಲಾಮೋಫೋಬಿಯಾ’ ಕಾರಣವೆಂದು ಹೇಳಲಾಗಿದೆ.

‘ಆಪ್ ಇಂಡಿಯಾ’ ವಿಡಿಯೋದಲ್ಲಿ ಏನಿದೆ?

‘ಖಾದಿರ್ ಅಥವಾ ಬಿಬಿಸಿ ‘ದೆಹಲಿಯ ಜನರು ಕೆಲವು ವ್ಯಕ್ತಿಗಳಿಗೆ ಫ್ಲಾಟ್‌ಗಳನ್ನು ಬಾಡಿಗೆಗೆ ನೀಡಲು ಏಕೆ ಹಿಂಜರಿಯುತ್ತಿದ್ದಾರೆ?’ ಎಂಬುದನ್ನು ತಿಳಿಯುವ ಪ್ರಯತ್ನ ಏಕೆ ಮಾಡಿಲ್ಲ?’ ಎಂದು ‘ಆಪ್ ಇಂಡಿಯಾ’ದ ವಿಡಿಯೋದಲ್ಲಿ ಕೇಳಲಾಗಿತ್ತು. ಕೆಲವು ತಿಂಗಳ ಹಿಂದೆ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯನೊಬ್ಬ ರಾಜಧಾನಿ ದೆಹಲಿಯ ಮಧ್ಯಭಾಗದಲ್ಲಿರುವ ಕೆಂಪುಕೋಟೆ ಬಳಿ ಆತ್ಮಾಹುತಿ ದಾಳಿ ನಡೆಸಿದ್ದ ಎಂಬುದನ್ನು ‘ಬಿಬಿಸಿ’ ಮರೆತಿದೆಯೇ? ಇದರಲ್ಲಿ ಡಜನ್‌ಗಟ್ಟಲೆ ಜನರು ಸಾವನ್ನಪ್ಪಿದ್ದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ರೀತಿಯ ಮತ್ತಷ್ಟು ದಾಳಿಗಳನ್ನು ಆತ ಮತ್ತು ಅವನ ಸಹಚರರು ಯೋಜಿಸಿದ್ದರು. ಬಾಂಬ್ ಸ್ಫೋಟ ನಡೆಸಿದವರು ಮತ್ತು ಸಂಚು ರೂಪಿಸಿದವರೆಲ್ಲರೂ ದೆಹಲಿಯಿಂದ ಸ್ವಲ್ಪ ದೂರದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ದೆಹಲಿಯ ಮನೆ ಮಾಲೀಕರು ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡುವಾಗ ಆತಂಕಪಡಲು ಕೆಲವು ಮಾನ್ಯವಾದ ಕಾರಣಗಳಿರಬಹುದು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿತ್ತು.

ಫೇಸ್‌ಬುಕ್ ಕೆಲವೇ ಸೆಕೆಂಡುಗಳಲ್ಲಿ ‘ಆಪ್ ಇಂಡಿಯಾ’ ವಿಡಿಯೋವನ್ನು ಡಿಲೀಟ್ ಮಾಡಿದೆ!

೧. ‘ಆಪ್ ಇಂಡಿಯಾ’ ಮಾರ್ಚ್ 9 ರಂದು ಬೆಳಿಗ್ಗೆ 10.30 ಕ್ಕೆ ಈ ವಿಡಿಯೋವನ್ನು ‘ಮೆಟಾ’ ಒಡೆತನದ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿತ್ತು; ಆದರೆ ಕೆಲವೇ ಸೆಕೆಂಡುಗಳಲ್ಲಿ ‘ಮೆಟಾ’ “ಈ ವಿಡಿಯೋವನ್ನು ನಿಷೇಧಿಸಲಾಗಿದೆ” ಎಂಬ ಸಂದೇಶವನ್ನು ಕಳುಹಿಸಿ ಅದನ್ನು ಡಿಲೀಟ್ ಮಾಡಿದೆ.

೨. “ಭಯೋತ್ಪಾದಕ ದಾಳಿಯನ್ನು ವೈಭವೀಕರಿಸುವುದು, ನಿರ್ದಿಷ್ಟ ಗುಂಪಿನ ಜನರ ವಿರುದ್ಧ ಹಿಂಸಾಚಾರವನ್ನು ಬೆಂಬಲಿಸುವುದು ಮತ್ತು ಮಾನವ ಕಳ್ಳಸಾಗಣೆಯಂತಹ ಹಾನಿಕಾರಕ ಅಪರಾಧ ಕೃತ್ಯಗಳನ್ನು ಬೆಂಬಲಿಸುವುದು ಅಥವಾ ಪ್ರೋತ್ಸಾಹಿಸುವುದನ್ನು ನಾವು ಅನುಮತಿಸುವುದಿಲ್ಲ” ಎಂದು ‘ಮೆಟಾ’ ಹೇಳಿದೆ. (‘ಮೆಟಾ’ಗೆ ‘ಆಪ್ ಇಂಡಿಯಾ’ದ ವಿಡಿಯೋದಲ್ಲಿ ಅಂತದ್ದು ಕಂಡಿದ್ದಾದರೂ ಏನು? ಇದು ಹಿಂದೂಗಳ ದನಿ ಹತ್ತಿಕ್ಕುವಿಕೆಯಲ್ಲವೇ? ಕೆಲವು ವರ್ಷಗಳ ಹಿಂದೆಯೂ ‘ಮೆಟಾ’ ಯಾವುದೇ ಕಾರಣವಿಲ್ಲದೆ ಹಿಂದುತ್ವವಾದಿ ಮಾಧ್ಯಮವಾದ ‘ಸನಾತನ ಪ್ರಭಾತ್’ ಪೇಜ್ ಅನ್ನು ತೆಗೆದುಹಾಕಿ ಇದೇ ರೀತಿ ದನಿ ಹತ್ತಿಕ್ಕಿತ್ತು! – ಸಂಪಾದಕರು)

ಸಂಪಾದಕೀಯ ನಿಲುವು

  • ಕಾಶ್ಮೀರಿ ಮುಸ್ಲಿಂ ಮಹಿಳೆಗೆ ದೆಹಲಿಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ‘ಬಿಬಿಸಿ’, ಮುಸ್ಲಿಮರು ಕಾಶ್ಮೀರದಿಂದ ನಾಲ್ಕೂವರೆ ಲಕ್ಷ ಹಿಂದೂಗಳನ್ನು ಅವರ ಮನೆಗಳಿಂದ ಒಕ್ಕಲೆಬ್ಬಿಸಿದ ಬಗ್ಗೆ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನಿಸಿ!
  • ಸದಾ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕೊಚ್ಚಿಕೊಳ್ಳುವ ‘ಮೆಟಾ’, ವಾಸ್ತವವನ್ನು ಮಂಡಿಸುವ ವಿಡಿಯೋವನ್ನು ನಿಷೇಧಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುತ್ತಿದೆ! ಇದರಿಂದ ‘ಮೆಟಾ’ಯ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನವೇ ಇಬ್ಬಗೆಯದ್ದಾಗಿದೆ ಎಂಬುದು ಸಾಬೀತಾಗುತ್ತದೆ!
  • ಜಗತ್ತಿನಲ್ಲಿ ಭಾರತದ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತಿರುವ ‘ಬಿಬಿಸಿ’ಯನ್ನು ಸರ್ಕಾರ ಏಕೆ ನಿಷೇಧಿಸುತ್ತಿಲ್ಲ?