‘ಜಯರಾಮ್ ಶರ್ಮಾ’ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿದ ಇರ್ಫಾನ್ ಅನ್ಸಾರಿ!

  • ಭುವನೇಶ್ವರ: ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ!

  • ನಕಲಿ ಆಧಾರ್ ಕಾರ್ಡ್‌ನಿಂದ ಷಡ್ಯಂತ್ರ ಬಯಲು!

ಭುವನೇಶ್ವರ (ಒಡಿಶಾ) – ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇರ್ಫಾನ್ ಅನ್ಸಾರಿ ಎಂಬ ಮುಸ್ಲಿಂ ಯುವಕ ‘ಜಯರಾಮ್ ಶರ್ಮಾ’ ಎಂದು ತನ್ನನ್ನು ಪರಿಚಯಿಸಿಕೊಂಡು ಹಿಂದೂ ಯುವತಿಯೊಬ್ಬಳನ್ನು ಪ್ರೇಮಜಾಲದಲ್ಲಿ ಸಿಲುಕಿಸಿದ್ದಾನೆ. ಕರ್ನಾಟಕದ ನಿವಾಸಿಯಾಗಿರುವ ಇರ್ಫಾನ್ ಅನ್ಸಾರಿ, ಸಂತ್ರಸ್ತ ಯುವತಿಯನ್ನು ಬಲವಂತವಾಗಿ ಕರ್ನಾಟಕಕ್ಕೆ ಅಪಹರಿಸಿಕೊಂಡು ಹೋಗಲು ಯತ್ನಿಸುತ್ತಿದ್ದಾಗ ಶಾಹೀದ್‌ನಗರ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಕುರಿತ ವಿಸ್ತೃತ ವರದಿಯ ಪ್ರಕಾರ, ಇರ್ಫಾನ್ ಮತ್ತು ಸಂತ್ರಸ್ತ ಹಿಂದೂ ಯುವತಿಯ ಭೇಟಿ ಕರ್ನಾಟಕದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುವಾಗ ಆಗಿತ್ತು. ಆರೋಪಿ ತನ್ನನ್ನು ‘ಜಯರಾಮ್ ಶರ್ಮಾ’ ಎಂದು ಪರಿಚಯಿಸಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಈ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿತು. ಸುಮಾರು ಒಂದು ವರ್ಷದ ಕಾಲ ಆರೋಪಿಯು ತನ್ನ ಸುಳ್ಳು ಗುರುತನ್ನು ಬಳಸಿ ಮಹಿಳೆಯನ್ನು ವಂಚಿಸಿದ್ದಾನೆ. ಬಳಿಕ ಸಂತ್ರಸ್ತ ಯುವತಿ ಒಡಿಶಾಗೆ ಮರಳಿ ಪುರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಆಗ ಇರ್ಫಾನ್ ಆಕೆಯನ್ನು ಭೇಟಿಯಾಗಲು ಆಗಾಗ್ಗೆ ಬರುತ್ತಿದ್ದ. ಒಂದು ದಿನ ಸಂತ್ರಸ್ತ ಯುವತಿಗೆ ಆರೋಪಿಯ ಎರಡು ವಿಭಿನ್ನ ಆಧಾರ್ ಕಾರ್ಡ್‌ಗಳು ಸಿಕ್ಕವು. ಒಂದು ಆಧಾರ್ ಕಾರ್ಡ್‌ನಲ್ಲಿ ‘ಜಯರಾಮ್ ಶರ್ಮಾ’ ಎಂಬ ಹೆಸರಿದ್ದರೆ, ಮತ್ತೊಂದು ಕಾರ್ಡ್‌ನಲ್ಲಿ ‘ಇರ್ಫಾನ್ ಅನ್ಸಾರಿ’ ಎಂಬ ಹೆಸರಿತ್ತು. ಸತ್ಯ ಬಯಲಾಗುತ್ತಿದ್ದಂತೆ ಸಂತ್ರಸ್ತ ಯುವತಿ ಆತನಿಂದ ದೂರ ಉಳಿಯಲು ಯತ್ನಿಸಿದಳು. ತನ್ನ ಗುಟ್ಟು ರಟ್ಟಾಗಿರುವುದನ್ನು ಕಂಡು ಕೋಪಗೊಂಡ ಆರೋಪಿ, ಯುವತಿಯನ್ನು ಕೋಣೆಯಲ್ಲಿ ಕೂಡಿಹಾಕಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ್ದಾನೆ. ಆರೋಪಿ ಇರ್ಫಾನ್ ಯುವತಿಗೆ ಬೆದರಿಕೆ ಹಾಕಿ ಬಲವಂತವಾಗಿ ಕರ್ನಾಟಕಕ್ಕೆ ಕರೆದೊಯ್ಯಲು ಸಂಚು ರೂಪಿಸುತ್ತಿದ್ದ. ಈ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ ಶಾಹೀದ್‌ನಗರ್ ಪೊಲೀಸರು ಆರೋಪಿಯನ್ನು ಬಂಧಿಸಿ, ಯುವತಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಆರೋಪಿಯಿಂದ ಶಸ್ತ್ರಾಸ್ತ್ರಗಳು ಮತ್ತು ಹಲವು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ದೊಡ್ಡ ಜಾಲದೊಂದಿಗೆ (ಗ್ಯಾಂಗ್) ಸಂಪರ್ಕ ಹೊಂದಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಮಹಿಳೆಯೊಬ್ಬಳನ್ನು ದೈಹಿಕ ಕಿರುಕುಳದಿಂದ ರಕ್ಷಿಸಿದ್ದಕ್ಕಾಗಿ ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.