ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಮಾಜ್ ಮಾಡಲು ಅನುಮತಿ ನಿರಾಕರಿಸಿದ ನ್ಯಾಯಾಲಯ !

ಮುಂಬಯಿ – ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಮಾಜ್ ಮಾಡಲು ಅನುಮತಿ ನೀಡಲು ಮುಂಬಯಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ‘ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು’ ಧಾರ್ಮಿಕ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ನ್ಯಾಯಮೂರ್ತಿ ಬಿ.ಪಿ. ಕೊಲಾಬಾವಾಲಾ ಮತ್ತು ನ್ಯಾಯಮೂರ್ತಿ ಫಿರದೌಸ ಪೂನಿವಾಲಾ ಅವರ ಪೀಠದ ಮುಂದೆ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ವಿಮಾನ ನಿಲ್ದಾಣದ ಸಮೀಪವಿರುವ ತಾತ್ಕಾಲಿಕ ಶೆಡ್‌ನಲ್ಲಿ ನಮಾಜ್ ಮಾಡಲಾಗುತ್ತಿತ್ತು; ಆದರೆ ಕಳೆದ ವರ್ಷ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದರು. ಆದ್ದರಿಂದ ಚಾಲಕರು ಅರ್ಜಿಯ ಮೂಲಕ ಅದೇ ಸ್ಥಳದಲ್ಲಿ ಅಥವಾ ಸುತ್ತಮುತ್ತಲಿನ ಇತರ ಯಾವುದೇ ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿ ನೀಡುವಂತೆ ಕೋರಿದ್ದರು. ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿದೆ.

೧. ನಮಾಜ್ ಮಾಡಲು ಅರ್ಜಿದಾರರಿಗೆ ಪರ್ಯಾಯ ಸ್ಥಳವನ್ನು ನೀಡಬಹುದೇ ಎಂದು ಪರಿಶೀಲಿಸುವಂತೆ ಉಚ್ಚ ನ್ಯಾಯಾಲಯವು ಪೊಲೀಸರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿತ್ತು; ಆದರೆ ೭ ಸ್ಥಳಗಳ ಸಮೀಕ್ಷೆ ನಡೆಸಲಾಗಿದ್ದು, ಜನದಟ್ಟಣೆ, ಭದ್ರತೆ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗಳ ಕಾರಣದಿಂದ ಯಾವುದೇ ಸೂಕ್ತ ಸ್ಥಳ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೨. ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ, ವಿಮಾನ ನಿಲ್ದಾಣದ ಸುತ್ತಮುತ್ತ ನಮಾಜ್ ಮಾಡಲು ಯಾವುದೇ ಸ್ಥಳವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

೩. ಧರ್ಮ ಇರಲಿ ಅಥವಾ ಇನ್ಯಾವುದೇ ಇರಲಿ; ಭದ್ರತೆಯೇ ಎಲ್ಲಕ್ಕಿಂತ ಮೊದಲು ಬರುತ್ತದೆ. ವಿಮಾನ ನಿಲ್ದಾಣದ ಮೂಲಕ ಪ್ರತಿಯೊಂದು ಧರ್ಮದ ಜನರು ಪ್ರಯಾಣಿಸುತ್ತಾರೆ. ಆದ್ದರಿಂದ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

೪. ‘ನಮಾಜ್ ಪಠಣ ಎಲ್ಲಿ ಮಾಡಬೇಕು ಎಂಬುದನ್ನು ಅರ್ಜಿದಾರರೇ ನಿರ್ಧರಿಸಲು ಸಾಧ್ಯವಿಲ್ಲ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಲು ಬೇಡಿಕೆ ಇಟ್ಟರೆ, ಅದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ನಮಾಜ್ ಮಾಡಲು ಬೇರೆ ಸ್ಥಳವನ್ನು ಹುಡುಕಿಕೊಳ್ಳಿ. ಸಂಬಂಧಿತ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮದರಸಾವಿದೆ, ಅಲ್ಲಿ ನಮಾಜ್ ಮಾಡಬಹುದು’ ಎಂದು ನ್ಯಾಯಾಲಯವು ಸೂಚಿಸಿದೆ.