‘ಟಿಪ್ಪು ಸುಲ್ತಾನ್ ಮಹಾನ್’ ಎನ್ನುವುದು ದೇಶದ ಇತಿಹಾಸದೊಂದಿಗಿನ ಚೆಲ್ಲಾಟ ! – ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್

ಮುಂಬಯಿ, ೨೬ ಫೆಬ್ರವರಿ (ವಾರ್ತೆ.) – ಟಿಪ್ಪು ಸುಲ್ತಾನ್ ೭೫ ಸಾವಿರ ಹಿಂದೂಗಳನ್ನು ಮತ್ತು ನಾಯರ್ ಜನಾಂಗದ ೩೩ ಸಾವಿರ ಜನರನ್ನು ಹತ್ಯೆ ಮಾಡಿದ್ದನು. ಸ್ವಂತ ರಾಜ್ಯವನ್ನು ಉಳಿಸಿಕೊಳ್ಳಲು ಮಾತ್ರ ಅವನು ಇಂಗ್ಲಿಷರೊಂದಿಗೆ ಯುದ್ಧ ಮಾಡಿದನು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎನ್.ಸಿ.ಇ.ಆರ್.ಟಿ.ಯ (ಎನ್.ಸಿ.ಇ.ಆರ್.ಟಿ. ಅಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು) ಪಠ್ಯಕ್ರಮದಲ್ಲಿ ಮೊಘಲರ ಇತಿಹಾಸಕ್ಕಾಗಿ ೧೭ ಪುಟಗಳನ್ನು ನೀಡಲಾಗಿತ್ತು; ಆದರೆ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಕೇವಲ ಒಂದು ಪುಟದಲ್ಲಿ ಕಲಿಸಲಾಯಿತು. ೭೦ ವರ್ಷಗಳ ಕಾಲ ಈ ದೇಶದಲ್ಲಿ ತಪ್ಪು ಇತಿಹಾಸವನ್ನು ಕಲಿಸಲಾಯಿತು. ‘ಟಿಪ್ಪು ಸುಲ್ತಾನ್ ಮಹಾನ್’ ಎನ್ನುವುದು ದೇಶದ ಇತಿಹಾಸದೊಂದಿಗಿನ ಚೆಲ್ಲಾಟವಾಗಿದೆ, ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿಕೆ ನೀಡಿದರು. ಫೆಬ್ರವರಿ ೨೬ ರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವಾಗ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿಗಳು,

‘ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಷ್ಟೇ ದೊಡ್ಡವನೆಂದು ಪರಿಗಣಿಸುವುದಕ್ಕೆ ನಮ್ಮ ಆಕ್ಷೇಪವಿದೆ. ದೇಶದಲ್ಲಿ ಸರಿಯಾದ ಸಮಯದಲ್ಲಿ ನಿಜವಾದ ಇತಿಹಾಸವನ್ನು ಕಲಿಸಿದ್ದರೆ, ದೇಶದ ಯಾವೊಬ್ಬ ಮುಸಲ್ಮಾನನೂ ಔರಂಗಜೇಬನನ್ನು ‘ನಾಯಕ’ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ; ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದೇಶದಲ್ಲಿ ನಿಜವಾದ ಇತಿಹಾಸವನ್ನು ಕಲಿಸಲಿಲ್ಲ. ಈ ದೇಶದಲ್ಲಿ ಅನೇಕ ರಾಷ್ಟ್ರಭಕ್ತ ಮುಸಲ್ಮಾನರಿದ್ದಾರೆ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಯಾರು ದೇಶದ ಮೇಲಿನ ಆಕ್ರಮಣಕಾರರನ್ನು ‘ನಾಯಕ’ ಎಂದು ಪರಿಗಣಿಸುತ್ತಾರೋ, ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮರಾಠರ ಇತಿಹಾಸಕ್ಕಾಗಿ ‘ಎನ್.ಸಿ.ಇ.ಆರ್.ಟಿ.’ ಪಠ್ಯಕ್ರಮದಲ್ಲಿ ೨೦ ಪುಟಗಳನ್ನು ನೀಡಿದೆ.’’

ಮುಖ್ಯಮಂತ್ರಿ ಫಡ್ನವೀಸ್ ಅವರು ಮಂಡಿಸಿದ ಪ್ರಮುಖ ಅಂಶಗಳು !

೧. ಸರಕು ಮತ್ತು ಸೇವಾ ತೆರಿಗೆಯ (ಜಿ.ಎಸ್.ಟಿ.) ಹೋಲಿಕೆಯಲ್ಲಿ ಎಷ್ಟು ಸಾಲ ಇರಬೇಕು ಎಂಬುದರ ಮಟ್ಟವನ್ನು ಮಹಾರಾಷ್ಟ್ರ ಕಾಯ್ದುಕೊಂಡಿದೆ. ೨೦೨೧-೨೨ ರಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆಯಲ್ಲಿ ಮಹಾರಾಷ್ಟ್ರದ ಪಾಲು ೧೩.೧ ಶೇಕಡಾ ಇತ್ತು. ಸದ್ಯದ ಪರಿಸ್ಥಿತಿಯಲ್ಲಿ ನಾವು ೧೪ ಶೇಕಡಾವರೆಗೆ ತಲುಪಿದ್ದೇವೆ.

೨. ಹಿಂದೆ ದೇಶದಲ್ಲಿ ೪ ರಷ್ಟಿದ್ದ ಕೈಗಾರಿಕಾ ರಾಜ್ಯಗಳ ಸಂಖ್ಯೆ ೧೦ ಕ್ಕೆ ಏರಿದೆ, ಆದರೂ ಮಹಾರಾಷ್ಟ್ರವು ಸರಕು ಮತ್ತು ಸೇವಾ ತೆರಿಗೆಯಲ್ಲಿ ಅತಿ ಹೆಚ್ಚು ಪಾಲನ್ನು ಕಾಯ್ದುಕೊಂಡಿದೆ.

೩. ಮಹಾರಾಷ್ಟ್ರದ ಅಭಿವೃದ್ಧಿ ನಕಾಶೆಯನ್ನು (ಯೋಜನೆ) ೩ ಹಂತಗಳಲ್ಲಿ ಮಾಡಲಾಗಿದೆ. ನಾವು ಕೇವಲ ಯೋಜನೆ ಮಾಡಿ ನಿಂತಿಲ್ಲ, ಬದಲಾಗಿ ದೇಶದ ಆರ್ಥಿಕತೆಯನ್ನು ೫ ಟ್ರಿಲಿಯನ್ ಡಾಲರ್‌ವರೆಗೆ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ‘ವಿಷನ್ ಮ್ಯಾನೇಜ್‌ಮೆಂಟ್ ಯುನಿಟ್’ (ಗುರಿ ಸಾಧಿಸಲು ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥಾಪನಾ ಸಮಿತಿ) ಕಾರ್ಯನಿರ್ವಹಿಸುತ್ತಿದೆ.

೪. ಸದ್ಯ ಮಹಾರಾಷ್ಟ್ರದ ಆರ್ಥಿಕತೆಯು ೫೧ ಲಕ್ಷ ಕೋಟಿ ರೂಪಾಯಿಗಳಷ್ಟಿದೆ, ಅದನ್ನು ೯೦ ಲಕ್ಷ ಕೋಟಿ ರೂಪಾಯಿಗಳವರೆಗೆ ತಲುಪಿಸುವುದು ನಮ್ಮ ಗುರಿಯಾಗಿದೆ. ಬೆಲ್ಜಿಯಂ ದೇಶದಷ್ಟೇ ನಮ್ಮ ರಾಜ್ಯದ ಆರ್ಥಿಕತೆ ಇದೆ.

೫. ದಾವೋಸ್‌ನಲ್ಲಿ ೨೦೨೨ ರಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳ ಪೈಕಿ ೯೮ ಶೇಕಡಾ, ೨೦೨೩ ರಲ್ಲಿ ೮೦ ಶೇಕಡಾ, ಹಾಗೂ ೨೦೨೪ ರಲ್ಲಿ ೭೦ ಶೇಕಡಾ ಒಪ್ಪಂದಗಳ ಹೂಡಿಕೆ ಮಹಾರಾಷ್ಟ್ರದಲ್ಲಿ ಆಗಿದೆ. ೨೦೨೫ ರ ೮೮ ಶೇಕಡಾ ಒಪ್ಪಂದಗಳು ಹೂಡಿಕೆಯ ಹಂತದಲ್ಲಿವೆ. ದೇಶದ ಕೈಗಾರಿಕಾ ಒಪ್ಪಂದಗಳನ್ನು ಪೂರ್ಣಗೊಳಿಸುವ ಸರಾಸರಿ ಅನುಪಾತ ೩೦ ಶೇಕಡಾ ಇದೆ, ಆದರೆ ಮಹಾರಾಷ್ಟ್ರ ೫೫ ಶೇಕಡಾಕ್ಕಿಂತ ಕೆಳಗೆ ಎಂದಿಗೂ ಬಂದಿಲ್ಲ.

೬. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಒಂದನೇ ತರಗತಿಯಿಂದ ಎರಡನೇ ದರ್ಜೆ ನೀಡುವ ಮತ್ತು ಒಂದರಿಂದ ಹನ್ನೆರಡನೇ ತರಗತಿಯವರೆಗೆ ಇಂಗ್ಲಿಷ್ ಕಡ್ಡಾಯಗೊಳಿಸುವ ನಿರ್ಧಾರವಾಗಿತ್ತು. ಠಾಕ್ರೆ ಅವರ ಸಚಿವ ಸಂಪುಟವೇ ಅದಕ್ಕೆ ಮಾನ್ಯತೆ ನೀಡಿತ್ತು. ನಮ್ಮ ರಾಜ್ಯದಲ್ಲಿ ಕೇವಲ ಮರಾಠಿ ಭಾಷೆಯ ಕಡ್ಡಾಯ ಮಾತ್ರ ಇರುತ್ತದೆ.

೭. ಸ್ವಂತ ಮಕ್ಕಳನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸಿ ಮರಾಠಿ ಶಾಲೆಗಳು ಮುಚ್ಚುತ್ತವೆ ಎಂದು ಹೇಳಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿಯೂ ರಾಜ್ಯದ ೭೦ ಶೇಕಡಾ ವಿದ್ಯಾರ್ಥಿಗಳು ಮರಾಠಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಮ್ಮ ಶಾಲೆಗಳ ಗುಣಮಟ್ಟ ಕಾಯ್ದುಕೊಂಡರೆ ಮಾತ್ರ, ವಿದ್ಯಾರ್ಥಿಗಳು ಮರಾಠಿ ಶಾಲೆಯಲ್ಲಿ ಕಲಿಯುತ್ತಾರೆ.

೮. ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದದ ಪ್ರಶ್ನೆಯನ್ನು ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮೊಕದ್ದಮೆಯನ್ನು ನಡೆಸಲು ನಾವು ಪ್ರಯತ್ನಿಸುತ್ತಿದ್ದೇವೆ.