ಆರೋಪಿಗಳು ಪರಾರಿಯಾಗದಂತೆ ತಡೆಯಲು ರಾಜ್ಯದ ಸರಕಾರಿ ಆಸ್ಪತ್ರೆಗಳ ‘ಸೇಫ್ಟಿ ಆಡಿಟ್’ ನಡೆಸಲು ನಿರ್ಧಾರ!

(ಸೇಫ್ಟಿ ಆಡಿಟ್ ಎಂದರೆ ಸುರಕ್ಷತೆಯ ದೃಷ್ಟಿಯಿಂದ ನಡೆಸಲಾಗುವ ತಪಾಸಣೆ)

ಮುಂಬಯಿ, ಫೆಬ್ರವರಿ 26 – ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದಂತಹ ಗಂಭೀರ ಅಪರಾಧದಡಿ ಬಂಧಿತನಾಗಿದ್ದ ಆರೋಪಿಯೊಬ್ಬ ಪುಣೆಯ ಸಸೂನ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳ ‘ಸೇಫ್ಟಿ ಆಡಿಟ್’ ನಡೆಸುವಂತೆ ಗೃಹ ಖಾತೆ ರಾಜ್ಯ ಸಚಿವ ಯೋಗೇಶ ಕದಂ ಆದೇಶಿಸಿದ್ದಾರೆ. ಮುಂದಿನ 6 ತಿಂಗಳೊಳಗೆ ಈ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಗಳಿಂದ ಆರೋಪಿಗಳು ತಪ್ಪಿಸಿಕೊಳ್ಳುತ್ತಿರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಹಾರೂನ್ ಖಾನ್ ಅವರು ಫೆಬ್ರವರಿ 26 ರಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು.

“ಆಸ್ಪತ್ರೆಗೆ ಬಣ್ಣ ಹಚ್ಚಲು ಬಳಸಿದ್ದ ಬಿದಿರಿನ ಏಣಿಯ ಮೂಲಕ ಆರೋಪಿ ಪರಾರಿಯಾಗಿದ್ದಾನೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ತನಿಖೆ ನಡೆಯುತ್ತಿದೆ.” ಆರೋಪಿಗಳನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯುವಾಗ ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. ಸೇಫ್ಟಿ ಆಡಿಟ್ ಪೂರ್ಣಗೊಂಡ ನಂತರ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಯೋಗೇಶ ಕದಮ ಅವರು ಈ ಸಮಯದಲ್ಲಿ ಹೇಳಿದರು.

‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ವಿಚಾರಣೆ!

ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಭಾರಿ ಪ್ರಮಾಣದ ಹಣ ಖರ್ಚಾಗುತ್ತಿದೆ. ಈ ಸಮಯದಲ್ಲಿ ಆರೋಪಿಗಳಿಗೆ ಮೊಬೈಲ್ ಫೋನ್ ಒದಗಿಸುವುದು, ಐಷಾರಾಮಿ ವಸ್ತುಗಳನ್ನು ನೀಡುವುದು ಮತ್ತು ಸಂಬಂಧಿಕರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡುವಂತಹ ಅಕ್ರಮಗಳು ನಡೆಯುತ್ತಿವೆ. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ ಪಿಂಪ್ಳೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗೃಹ ರಾಜ್ಯ ಸಚಿವರು, “ಆರೋಪಿಗಳನ್ನು ಜೈಲಿನಿಂದ ಹೊರಕ್ಕೆ ಕರೆದೊಯ್ಯುವ ಅಗತ್ಯವಿಲ್ಲದಂತೆ ಮಾಡಲು ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ಒಂದೂವರೇ ವರ್ಷಗಳಲ್ಲಿ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು.”