ಜೆ.ಎನ್.ಯು.ನಲ್ಲಿ ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಯಿಂದ ಹಿಂಸಾಚಾರ! ABVP JNU Students Clashes

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳ ಮೇಲೆ ದಾಳಿ: ಅನೇಕ ವಿದ್ಯಾರ್ಥಿಗಳಿಗೆ ಗಾಯ


ನವದೆಹಲಿ – ಫೆಬ್ರವರಿ ೨೨ರ ಮಧ್ಯರಾತ್ರಿ ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅಂದರೆ ಜೆ.ಎನ್.ಯು.ನಲ್ಲಿ ಸಾಮ್ಯವಾದಿ ವಿಚಾರಧಾರೆಗಳ ವಿದ್ಯಾರ್ಥಿ ಸಂಘಟನೆಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಅಭಾವಿಪ) ನಡುವೆ ಹಿಂಸಾತ್ಮಕ ಸಂಘರ್ಷ ಉಂಟಾಗಿದೆ. ಇಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಅದರಲ್ಲಿ ಕೆಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಜೆ.ಎನ್.ಯು. ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ದಲಿತ ವಿದ್ಯಾರ್ಥಿಗಳ ಬಗ್ಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಲಪತಿಗಳು ದಲಿತರ ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಆ ಸಮಯದಲ್ಲಿ ಈ ಹಿಂಸಾಚಾರ ನಡೆದಿದೆ.

೧. ಅಭಾವಿಪ ವಿದ್ಯಾರ್ಥಿಗಳು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಶಿಬಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ವಿದ್ಯಾರ್ಥಿಗಳ ಮೇಲೆ ಆಕ್ರಮಣ ಮಾಡಿದ್ದಾರೆ, ಇದರಿಂದ ಅನೇಕರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೊಂದೆಡೆ, ಅಭಾವಿಪದ ಜೆ.ಎನ್.ಯು. ಜಂಟಿ ಕಾರ್ಯದರ್ಶಿ ವೈಭವ ಮೀನಾ ಅವರು, ವಿಶ್ವವಿದ್ಯಾಲಯದ ಆವರಣದಲ್ಲಿ ಮುಖವಾಡ ಧರಿಸಿದ ೩೦೦ ರಿಂದ ೪೦೦ ಜನರು ತಿರುಗಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಶಾಂತವಾಗಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಅವರು ಗುರಿಯಾಗಿಸಿಕೊಂಡರು. ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಕ್ಯಾಂಪಸ್‌ ನಲ್ಲಿರುವ ತರಗತಿಗಳನ್ನು ಬಲವಂತವಾಗಿ ಮುಚ್ಚಿಸಲು ಪ್ರಯತ್ನಿಸಿದರು. ಇದರಿಂದಾಗಿ ವಿದ್ಯಾರ್ಥಿಗಳು ಶೌಚಾಲಯ ಮತ್ತು ಲಿಫ್ಟಗಳಲ್ಲಿ ಅಡಗಿಕೊಳ್ಳಬೇಕಾಯಿತು.

೨. ೧೦೦ ರಿಂದ ೧೫೦ ಜನರ ಗುಂಪು ವಿಜಯ ಎಂಬ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದೆ ಎಂದು ಅಭಾವಿಪ ಹೇಳಿಕೊಂಡಿದೆ. ಹಿಂಸಾಚಾರದಲ್ಲಿ ಕಬ್ಬಿಣದ ರಾಡ್‌ ಗಳು, ಚಾಕುಗಳು, ಕಲ್ಲುಗಳು ಮತ್ತು ದೊಣ್ಣೆಗಳನ್ನು ಬಳಸಲಾಗಿತ್ತು. ಅತ್ಯಂತ ಕಳವಳಕಾರಿ ಘಟನೆಯು ‘ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್’ ಆವರಣದಲ್ಲಿ ನಡೆದಿದೆ. ಬಯೋಟೆಕ್ನಾಲಜಿ ವಿದ್ಯಾರ್ಥಿ ಪ್ರತೀಕ ಭಾರದ್ವಾಜ ಎಂಬವರ ಮೇಲೆ ಆಕ್ರಮಣ ಮಾಡಲಾಗಿದೆ. ಪ್ರತೀಕನನ್ನು ಮನಬಂದಂತೆ ಥಳಿಸುವ ಮೊದಲು ಅವನ ಕಣ್ಣಿಗೆ ಅಗ್ನಿಶಾಮಕ ಪುಡಿಯನ್ನು (ಬೆಂಕಿ ನಂದಿಸಲು ಬಳಸುವ ಒಣ ರಾಸಾಯನಿಕ ಮಿಶ್ರಣ) ಎರಚಲಾಗಿತ್ತು. ಪ್ರತೀಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ಸಂಪಾದಕೀಯ ನಿಲುವು

ಜೆ.ಎನ್.ಯು. ಸಾಮ್ಯವಾದಿಗಳ(ಕಮ್ಯುನಿಸ್ಟರ) ಅಡ್ಡೆ(ತಾಣ)ಯಾಗಿದೆ. ಮಾರ್ಚ್ ೨೦೨೬ ರ ವೇಳೆಗೆ ದೇಶದಲ್ಲಿ ನಕ್ಸಲವಾದವನ್ನು ಮುಕ್ತಗೊಳಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಅದರೊಂದಿಗೆ ಸರಕಾರವು ಜೆ.ಎನ್.ಯು.ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ವಿದ್ಯಾರ್ಥಿ ನಕ್ಸಲವಾದ’ಕ್ಕೂ ಕಡಿವಾಣ ಹಾಕುವ ಅವಶ್ಯಕತೆಯಿದೆ!