ತೆಲಂಗಾಣದ ಗ್ರಾಮಗಳಲ್ಲಿ ಒಂದೇ ವಾರದಲ್ಲಿ 500 ನಾಯಿಗಳ ಹತ್ಯೆ : Telangana Mass Killings STRAYDOGS

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿಸುವುದಾಗಿ ನೀಡಲಾಗಿತ್ತು ಭರವಸೆ!

ನಾಯಿಗಳನ್ನು ಕೊಲ್ಲಲು ವಿಷಕಾರಿ ಇಂಜೆಕ್ಷನ್‌ಗಳನ್ನು ಬಳಸುವುದು

ಭಾಗ್ಯನಗರ (ತೆಲಂಗಾಣ): ತೆಲಂಗಾಣದಲ್ಲಿ ಕಳೆದ ಒಂದು ವಾರದಲ್ಲಿ 500ಕ್ಕೂ ಹೆಚ್ಚು ನಾಯಿಗಳನ್ನು ಹತ್ಯೆ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಹತ್ಯೆಗಳು ಗ್ರಾಮ ಪಂಚಾಯಿತಿ ಚುನಾವಣೆಯ ನಂತರ ನಡೆದಿವೆ. ಪೊಲೀಸರ ಮಾಹಿತಿಯ ಪ್ರಕಾರ, ಈ ಘಟನೆಗಳಲ್ಲಿ ಪಂಚಾಯಿತಿ ಪ್ರತಿನಿಧಿಗಳ ಪಾತ್ರವಿರುವುದು ಕಂಡುಬಂದಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳು ಬೀದಿ ನಾಯಿಗಳು ಮತ್ತು ಮಂಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದ ನಂತರ, ಅದೇ ಭರವಸೆಗಳನ್ನು ಪೂರೈಸಲು ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸರಪಂಚರ ವಿರುದ್ಧ ಕೇಸು ದಾಖಲು

ಕಾಮಾರೆಡ್ಡಿ ಜಿಲ್ಲೆಯ ಪಾಲವಂಚ ಮಂಡಲದ ಭವಾನಿಪೇಟ್, ಪಾಲವಂಚ, ಫರೀದ್‌ಪೇಟ್, ವಾಡಿ ಮತ್ತು ಬಂದಾರಮೇಶ್ವರಪಲ್ಲಿ ಎಂಬ 5 ಗ್ರಾಮಗಳಲ್ಲಿ ಕಳೆದ 2-3 ದಿನಗಳಲ್ಲಿ ಸುಮಾರು 200 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಸರಪಂಚರು ಸೇರಿದಂತೆ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮೊದಲು, ಹನಮಕೊಂಡ ಜಿಲ್ಲೆಯ ಶ್ಯಾಂಪೇಟ್ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ಜನವರಿ 6 ರಿಂದ ಜನವರಿ 9 ರ ಅವಧಿಯಲ್ಲಿ ಸುಮಾರು 300 ಬೀದಿ ನಾಯಿಗಳ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಹಿಳಾ ಸರಪಂಚರು ಮತ್ತು ಅವರ ಪತಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ದೂರು ದಾಖಲಿಸಿದ್ದರು.

ವಿಷಕಾರಿ ಇಂಜೆಕ್ಷನ್ ನೀಡಿ ನಾಯಿಗಳನ್ನು ಕೊಲ್ಲಲಾಗಿದೆ ಎಂಬ ಆರೋಪ

ನಾಯಿಗಳನ್ನು ಕೊಲ್ಲಲು ವಿಷಕಾರಿ ಇಂಜೆಕ್ಷನ್ ಬಳಸಲಾಗಿದೆ ಎಂದು ಸರಪಂಚರ ಮೇಲೆ ಆರೋಪಿಸಲಾಗಿದೆ. ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗಿತ್ತು. ಸತ್ತ ನಾಯಿಗಳ ದೇಹಗಳನ್ನು ಗ್ರಾಮದ ಹೊರವಲಯದಲ್ಲಿ ಹೂಳಲಾಗಿತ್ತು. ಮಾಹಿತಿ ತಿಳಿದ ಪಶುವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದೆ. ಸಾವಿಗೆ ನಿಖರವಾದ ಕಾರಣ ಮತ್ತು ಬಳಸಲಾದ ವಿಷದ ಪ್ರಕಾರವನ್ನು ಪತ್ತೆಹಚ್ಚಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

ಈ ಘಟನೆಯಿಂದ ಜನಸಾಮಾನ್ಯರಿಗೆ ಬೀದಿ ನಾಯಿಗಳ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ! ಚುನಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಭರವಸೆ ನೀಡಬೇಕಾದ ಅಭ್ಯರ್ಥಿಗಳು, ಈಗ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಇಂತಹ ಭರವಸೆಗಳನ್ನು ನೀಡುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವಾಗಿದೆ. ಈ ಪರಿಸ್ಥಿತಿಯು ಇಡೀ ದೇಶಾದ್ಯಂತ ಇರುವುದರಿಂದ, ಇದರ ವಿರುದ್ಧ ಸಮರೊಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ!