ಆಕ್ಲೆಂಡ್ (ನ್ಯೂಜಿಲೆಂಡ್)ನಲ್ಲಿ ಕಟ್ಟರವಾದಿಗಳಿಂದ ಸಿಖ್ ರ ಮೆರವಣಿಗೆ ತಡೆಯಲು ಯತ್ನ! : Nagar Kirtan Row

  • ಭಾರತ ವಿರೋಧಿ ಘೋಷಣೆಗಳು

  • ಕೆಲಕಾಲ ಸ್ಥಗಿತಗೊಂಡ ಮೆರವಣಿಗೆ

ಆಕ್ಲೆಂಡ್ (ನ್ಯೂಜಿಲೆಂಡ್): ಇಲ್ಲಿ ಸಿಖ್ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ನಗರ ಕೀರ್ತನೆ’ ಮೆರವಣಿಗೆಯನ್ನು ನ್ಯೂಜಿಲೆಂಡ್‌ನ ‘ಟ್ರೂ ಪೇಟ್ರಿಯಾಟ್ಸ್ ಆಫ್ ನ್ಯೂಜಿಲೆಂಡ್’ ಎಂಬ ಕಟ್ಟರವಾದಿ ಸಂಘಟನೆಯ ಜನರು ಪ್ರತಿಭಟನೆ ನಡೆಸುವ ಮೂಲಕ ತಡೆಯಲು ಪ್ರಯತ್ನಿಸಿದರು. ಈ ಸಂಘಟನೆಯ ನಾಯಕ ಬ್ರಿಯಾನ್ ತಮಾಕಿ ಎಂಬುವವನಾಗಿದ್ದು, ಈತನಿಗೆ ‘ಡೆಸ್ಟಿನಿ ಚರ್ಚ್’ ಜೊತೆ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಈ ಪ್ರತಿಭಟನೆಯಿಂದಾಗಿ ಮೆರವಣಿಗೆಯನ್ನು ಕೆಲಕಾಲ ಸ್ಥಗಿತಗೊಳಿಸಬೇಕಾಯಿತು.

. ಡಿಸೆಂಬರ್ 20 ರಂದು ದಕ್ಷಿಣ ಆಕ್ಲೆಂಡ್‌ನ ಮನುರೇವಾ ಪ್ರದೇಶದಲ್ಲಿರುವ ನಾನಕ್ಸರ್ ಸಿಖ್ ಗುರುದ್ವಾರದ ವತಿಯಿಂದ ನಗರ ಕೀರ್ತನೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

. ಈ ಮೆರವಣಿಗೆಯಲ್ಲಿ ನಿಹಂಗ್ ಸಿಖ್ಖರು (ನೀಲಿ ಬಣ್ಣದ ಬಟ್ಟೆ ಧರಿಸಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯೋಧರು) ಸಿಖ್ಖರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೆರವಣಿಗೆಯ ರಸ್ತೆಯನ್ನು ತಡೆದು ಘೋಷಣೆಗಳನ್ನು ಕೂಗಿದರು.

. ಅವರು ಕೈಯಲ್ಲಿ ಭಾರತ ವಿರೋಧಿ ಬರಹಗಳಿರುವ ಫಲಕಗಳನ್ನು ಹಿಡಿದಿದ್ದರು. ಇದರೊಂದಿಗೆ ‘ಇದು ಭಾರತವಲ್ಲ, ನ್ಯೂಜಿಲೆಂಡ್’ ಎಂದು ಘೋಷಣೆಗಳನ್ನು ಕೂಗಿದರು.

. ಪ್ರತಿಭಟನಾಕಾರರು ‘ನ್ಯೂಜಿಲೆಂಡ್ ಫಸ್ಟ್’ (ನ್ಯೂಜಿಲ್ಯಾಂಡ್ ಮೊದಲು) ಎಂದು ಬರೆದಿರುವ ಟಿ-ಶರ್ಟ್‌ಗಳನ್ನು ಧರಿಸಿದ್ದರು. ಅವರು ಪ್ರತಿಭಟನೆಯ ರೂಪದಲ್ಲಿ ಮೆರವಣಿಗೆಯ ಮುಂದೆ ಸ್ಥಳೀಯ ಮಾವೋರಿ ಸಮುದಾಯದ ‘ಹಾಕಾ’ ಎಂಬ ಸಾಂಪ್ರದಾಯಿಕ ನೃತ್ಯವನ್ನು ಮಾಡಿದರು.

. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಮೆರವಣಿಗೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದರೂ ಇಂತಹ ಘಟನೆ ನಡೆದಿದ್ದಕ್ಕೆ ಆಯೋಜಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಖ್ಖರಿಂದ ತೀವ್ರ ಖಂಡನೆ!

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ‘ಅಕಾಲ್ ತಖ್ತ್’ನ ಹಂಗಾಮಿ ಜತ್ಥೇದಾರ್ (ಗುರುದ್ವಾರದ ಮುಖ್ಯಸ್ಥ) ಜ್ಞಾನಿ ಕುಲದೀಪ್ ಸಿಂಗ್ ಗರ್ಗಜ್ ಅವರು, “ಈ ಘಟನೆಯು ದುರದೃಷ್ಟಕರವಾಗಿದೆ. ಸಿಖ್ ಸಮುದಾಯವು ಅನೇಕ ವರ್ಷಗಳಿಂದ ನ್ಯೂಜಿಲೆಂಡ್‌ನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದು, ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಸಿಖ್ ಸಮುದಾಯದ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಹೇಳಿದರು. ‘ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ’ಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹಾಗೂ ‘ಶಿರೋಮಣಿ ಅಕಾಲಿದಳ’ದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ಸಿಖ್ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಸುರಕ್ಷಿತ ವಾತಾವರಣ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾದ ನಂತರ ಈಗ ನ್ಯೂಜಿಲೆಂಡ್‌ನಲ್ಲೂ ಸಿಖ್ ಮತ್ತು ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ರಕ್ಷಣೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು!