ಶಾಂತಿ ಮತ್ತು ಸತ್ಯವನ್ನು ಸ್ಥಾಪಿಸಲು ದುಷ್ಟರ ಅಂತ್ಯವೂ ಅವಶ್ಯಕ ಎಂದು ಭಗವದ್ಗೀತೆ ಹೇಳುತ್ತದೆ:

ಉಡುಪಿ: ಪ್ರಾಚೀನ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆ

ಉಡುಪಿ – ಶ್ರೀಕೃಷ್ಣನು ಯುದ್ಧ ಭೂಮಿಯಲ್ಲಿ ಗೀತೆಯ ಸಂದೇಶವನ್ನು ನೀಡಿದ್ದನು. ಶಾಂತಿ ಮತ್ತು ಸತ್ಯವನ್ನು ಸ್ಥಾಪಿಸಲು ದೌರ್ಜನ್ಯ ಮಾಡುವವರನ್ನು ಅಂತ್ಯ ಮಾಡುವುದು ಸಹ ಅವಶ್ಯಕ ಎಂದು ಭಗವದ್ಗೀತೆ ಹೇಳುತ್ತದೆ. ನಾನು ಕೆಂಪುಕೋಟೆಯಿಂದ ಶ್ರೀಕೃಷ್ಣನ ಕರುಣೆಯ ಸಂದೇಶವನ್ನು ನೀಡುತ್ತೇನೆ ಮತ್ತು ಅದೇ ಸ್ಥಳದಿಂದ ‘ಮಿಷನ್ ಸುದರ್ಶನ ಚಕ್ರ’ವನ್ನೂ ಘೋಷಿಸುತ್ತೇನೆ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ದೇಶದ ಸಂಕಲ್ಪವನ್ನು ನೀವು ನೋಡಿದ್ದೀರಿ. ನಮಗೆ ಶಾಂತಿಯನ್ನು ಸ್ಥಾಪಿಸುವುದು ಮತ್ತು ಶಾಂತಿ ರಕ್ಷಿಸುವುದು ಕೂಡ ತಿಳಿದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಶ್ರೀಕೃಷ್ಣ ಮಠದ ಜಗದ್ಗುರು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಯೋಜಿಸಿದ್ದ ವಿಶ್ವ ಗೀತಾ ಪರ್ಯಾಯ ಕಾರ್ಯಕ್ರಮದಲ್ಲಿ ‘ಲಕ್ಷ್ಯ ಕಂಠ ಗೀತಾ ಪಾಠ’ ನಿಮಿತ್ತ ಪ್ರಧಾನಿ ಅವರು ಮಾತನಾಡುತ್ತಿದ್ದರು. ಶ್ರೀ ಕೃಷ್ಣ ಮಠವನ್ನು ಸುಮಾರು 800 ವರ್ಷಗಳ ಹಿಂದೆ ದ್ವೈತ ವೇದಾಂತ ಪರಂಪರೆಯ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದರು.

ಪ್ರಧಾನಿ ಮೋದಿ ಮಾತು ಮುಂದುವರೆಸಿ,

1. ಶತಮಾನಗಳಿಂದ ಮಂತ್ರೋಚ್ಚಾರ ಮತ್ತು ಗೀತಾ ಪಠಣ ನಡೆದುಕೊಂಡು ಬಂದಿದೆ; ಆದರೆ ಒಂದೇ ಸ್ವರದಲ್ಲಿ ಅಸಂಖ್ಯಾತ ಕಂಠಗಳಿಂದ ಶ್ಲೋಕಗಳನ್ನು ಉಚ್ಚರಿಸಿದಾಗ, ಮನಸ್ಸು ಮತ್ತು ಬುದ್ಧಿಗೆ ಹೊಸ ಚೈತನ್ಯ ಮತ್ತು ಶಕ್ತಿ ದೊರೆಯುತ್ತದೆ. ಇದು ಆಧ್ಯಾತ್ಮಿಕ ಶಕ್ತಿಯ ಸ್ವರೂಪವಾಗಿದೆ. ಜೊತೆಗೆ ಸಾಮಾಜಿಕ ಏಕತೆಯ ಬಲವೂ ಆಗಿದೆ. ‘ಲಕ್ಷ್ಯ ಕಂಠ ಗೀತಾ ಪಾಠ’ ಎಂಬ ಈ ಕಾರ್ಯಕ್ರಮವು ಶಕ್ತಿಯ ಸ್ಪಂದನದ ಅನುಭವವನ್ನು ನೀಡುವುದಾಗಿದೆ ಎಂದು ಪ್ರಧಾನಿ ನುಡಿದರು.

2. ಸಕಲ ಜನರ ಸಹಕಾರ ಮತ್ತು ಉನ್ನತಿಗಾಗಿರುವ ನೀತಿಗಳಿಗೆ ಶ್ರೀಕೃಷ್ಣನ ಬೋಧನೆಯೇ ಪ್ರೇರಣೆಯಾಗಿದೆ. ಬಡವರಿಗೆ ಸಹಾಯ, ನಾಗರಿಕರ ಆರೋಗ್ಯ ಮತ್ತು ವಸತಿ ಯೋಜನೆಗಳು, ಮಹಿಳೆಯರ ಸುರಕ್ಷತೆಯನ್ನು ಒತ್ತಿಹೇಳುವ ನೀತಿಗಳು – ಇವೆಲ್ಲದಕ್ಕೂ ಗೀತೆಯ ಸಂದೇಶವೇ ಆಧಾರವಾಗಿದೆ.