ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಯಾವುದೇ ಅಧಿಕೃತ ಘೋಷಣೆಯ ಆವಶ್ಯಕತೆಯಿಲ್ಲ: ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್

ಗೌಹಾಟಿ (ಉತ್ತರಾಖಂಡ) – ‘ಹಿಂದೂ’ ಎಂಬ ಶಬ್ದ ಕೇವಲ ಧಾರ್ಮಿಕ ಪದವಲ್ಲ, ಇದು ಸಾವಿರಾರು ವರ್ಷಗಳ ಸಂಸ್ಕೃತಿಯಾಗಿದೆ. ಭಾರತ ಮತ್ತು ಹಿಂದೂ ಇವು ಸಮಾನಾರ್ಥಕ ಪದಗಳಾಗಿವೆ. ಯಾರು ಭಾರತದ ಬಗ್ಗೆ ಹೆಮ್ಮೆ ಹೊಂದಿದ್ದಾರೋ, ಅವರೇ ಹಿಂದೂ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಯಾವುದೇ ಅಧಿಕೃತ ಘೋಷಣೆಯ ಅಗತ್ಯವಿಲ್ಲ. ಇಲ್ಲಿನ ಸಂಸ್ಕೃತಿಯನ್ನು ಗಮನಿಸಿದರೆ ಹಿಂದೂ ರಾಷ್ಟ್ರವೆಂಬುದು ಸ್ಪಷ್ಟವಾಗಿಯೇ ಇದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಅವರು ಇಲ್ಲಿ ಹೇಳಿಕೆ ನೀಡಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರಿಸಿ, ಯಾರಿಗೆ ಭಾರತದ ಮೇಲೆ ಅಭಿಮಾನ ಮತ್ತು ಪ್ರೀತಿಯಿದೆಯೋ, ಅವನೇ ಹಿಂದೂ; ಅವನ ವೈಯಕ್ತಿಕ ಪೂಜೆಯ, ಪ್ರಾರ್ಥನೆಯ ವಿಧಾನ ಯಾವುದೇ ಇರಲಿ, ಅವನು ಹಿಂದೂವೇ ಆಗಿರುತ್ತಾನೆ ಎಂದು ಹೇಳಿದರು.

ಭಾರತವನ್ನು ವಿಶ್ವಗುರು ಮಾಡುವಲ್ಲಿ ಕೊಡುಗೆ ನೀಡಲು ಸಂಘದ ಸ್ಥಾಪನೆ!

ಪ. ಪೂ. ಸರಸಂಘಚಾಲಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ತತ್ವಜ್ಞಾನವನ್ನು ಸ್ಪಷ್ಟಪಡಿಸುತ್ತಾ, ಈ ಸಂಘಟನೆಯು ಯಾರನ್ನಾದರೂ ವಿರೋಧಿಸಲು, ಯಾರಿಗಾದರೂ ಹಾನಿ ಮಾಡಲು ಮತ್ತು ಯಾರಿಗಾದರೂ ತೊಂದರೆಯನ್ನುಂಟು ಮಾಡಲು ಪ್ರಾರಂಭವಾಗಿಲ್ಲ; ಬದಲಾಗಿ, ಒಂದು ಪ್ರಗತಿಪರ ಪ್ರಬುದ್ಧ ಸಮಾಜ ಮತ್ತು ವ್ಯಕ್ತಿಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಲಾಗಿದೆ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದ ಕಡೆ ಗಮನಹರಿಸಲು ಮತ್ತು ಭಾರತವನ್ನು ವಿಶ್ವಗುರು ಮಾಡುವಲ್ಲಿ ಕೊಡುಗೆ ನೀಡುವ ಸಲುವಾಗಿ ಈ ಸಂಘಟನೆ ನಿಂತಿದೆ ಎಂದು ಅವರು ಹೇಳಿದರು.