ರೋಹಿತ್ ಆರ್ಯ ನಕಲಿ ಎನ್ಕೌಂಟರ್; ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು! – ನ್ಯಾಯವಾದಿ ನಿತಿನ ಸಾತಪುತೆ, ಸರ್ವೋಚ್ಚ ನ್ಯಾಯಾಲಯ

ಮುಂಬಯಿ – ರೋಹಿತ ಆರ್ಯ ಭಯೋತ್ಪಾದಕ ಅಥವಾ ಕುಖ್ಯಾತ ಗೂಂಡಾ ಅಲ್ಲ. ಓರ್ವ ಕ್ರಿಮಿನಲ್ ವ್ಯಕ್ತಿಯನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಪೊಲೀಸರಿಗೆ ತರಬೇತಿ ಇರುತ್ತದೆ. ಪೊಲೀಸರು ರೋಹಿತ ಆರ್ಯನ ಕೈ ಅಥವಾ ಕಾಲಿಗೆ ಗುಂಡು ಹಾರಿಸಲಿಲ್ಲ ಏಕೆ? ಪೊಲೀಸರು ರೋಹಿತ ಆರ್ಯನ ಪ್ರಾಣವನ್ನು ಉಳಿಸಬಹುದಾಗಿತ್ತು; ಆದರೆ ಪೊಲೀಸರು ದಯೆ ತೋರಲಿಲ್ಲ. ರೋಹಿತ ಆರ್ಯನ ಎನ್‌ಕೌಂಟರ್ ನಕಲಿಯಾಗಿತ್ತು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ನಿತಿನ ಸಾತಪುತೆ ಅವರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಕರಡು ಸಿದ್ಧವಾಗಿದೆ ಮತ್ತು ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು, ಎಂದು ವಕೀಲರಾದ ನಿತಿನ ಸಾತಪುತೆ ಅವರು ಒಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಈ ಕುರಿತು ನಿತಿನ್ ಸಾತಪುತೆ ಅವರು ಮಾತನಾಡಿ, ರೋಹಿತ ಆರ್ಯನು ಸರಕಾರದ ‘ಸ್ವಚ್ಛ ಶಾಲಾ ಉಪಕ್ರಮ’ದಲ್ಲಿ ಭಾಗವಹಿಸಿದ್ದನು. ಸರಕಾರವು ಅವನಿಗೆ ಸೇರಬೇಕಿದ್ದ 2 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿತ್ತು. ಹಣ ಪಡೆಯಲು ಅವನು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದ; ಆದರೆ ಅದರ ನಂತರವೂ ಅವನಿಗೆ ಹಣ ನೀಡಲಾಗಿಲ್ಲ. ಅವನನ್ನು ವಂಚಿಸಿದ ಕಾರಣಕ್ಕಾಗಿ ಮಂತ್ರಿಗಳು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಮಕ್ಕಳನ್ನು ಅಪಹರಿಸುವುದು ಅವನ ಮಾರ್ಗವಾಗಿತ್ತು, ಅದು ತಪ್ಪಾಗಿತ್ತು; ಆದರೆ ಅವನ ಮುಂದೆ ಈ ಪರಿಸ್ಥಿತಿಯನ್ನು ಸೃಷ್ಟಿಸಿದವರ ಮೇಲೂ ಕ್ರಮವಾಗಬೇಕು. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅವನ ಬಳಿ ಬಂದೂಕಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿಲ್ಲ. ಅವನ ಬಳಿ ‘ಏರ್ ಗನ್’ ಇದ್ದರೆ, ಅದರ ಮೂಲಕ ಅವನು ಪೊಲೀಸರ ಮೇಲೆ ಎಷ್ಟು ಗುಂಡುಗಳನ್ನು ಹಾರಿಸಿದ ಅಥವಾ ಎಷ್ಟು ಬೆದರಿಕೆ ಹಾಕಿದ ಎಂಬುದನ್ನು ಪೊಲೀಸರು ಹೇಳಬೇಕು. ಮಕ್ಕಳ ಸುರಕ್ಷತೆ ಸರ್ವೋಚ್ಚವಾಗಿತ್ತು; ಆದರೆ ಅದಕ್ಕಾಗಿ ರೋಹಿತ್ ಆರ್ಯನನ್ನು ಕೊಲೆ ಮಾಡುವುದು ತಪ್ಪು. ಅವನು ಕೂಡ ಒಬ್ಬ ಭಾರತೀಯ ಪ್ರಜೆಯಾಗಿದ್ದನು. ಅವನನ್ನು ಉಳಿಸಲು ಪೊಲೀಸರು ಪ್ರಯತ್ನಿಸಬೇಕಾಗಿತ್ತು. ಅವನ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ರೋಹಿತ ಆರ್ಯ 2 ಗಂಟೆಗಳ ಕಾಲ ಪೊಲೀಸರ ಸಂಪರ್ಕದಲ್ಲಿದ್ದನು. ಆಗ ಪೊಲೀಸರು ಅವನ ಕುಟುಂಬದವರನ್ನು ಏಕೆ ಸಂಪರ್ಕಿಸಲಿಲ್ಲ? ಅವನಿಗೆ ಹಣ ಕೊಡಿಸುವ ಭರವಸೆಯನ್ನು ಏಕೆ ನೀಡಲಿಲ್ಲ? ಅಂದಿನ ಶಿಕ್ಷಣ ಮಂತ್ರಿ ದೀಪಕ ಕೇಸರಕರ್ ಅವರೊಂದಿಗೆ ಅವನಿಗೆ ಮಾತನಾಡಲು ಏಕೆ ಅವಕಾಶ ನೀಡಲಿಲ್ಲ? ಈ ಎಲ್ಲದರ ಬಗ್ಗೆ ತನಿಖೆ ಆಗಬೇಕು. ಒಬ್ಬ ಒಳ್ಳೆಯ ವ್ಯಕ್ತಿಯನ್ನು ಈ ರೀತಿ ಎನ್ಕೌಂಟರ್ ಮಾಡುವ ಪರಿಸ್ಥಿತಿ ಏಕೆ ಬಂತು ಎಂಬುದರ ಕುರಿತು ಸರಕಾರ ವಿಚಾರ ಮಾಡಬೇಕು ಎಂದು ಆಗ್ರಹಿಸಿದರು.