ಕೇರಳದ ಪಾದ್ರಿಯ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಸರ್ವೋಚ್ಚ ನ್ಯಾಯಾಲಯ!

ಮುಖ್ಯ ನ್ಯಾಯಾಧೀಶರಾದ ಗವಯಿ ಮತ್ತು ನ್ಯಾಯಮೂರ್ತಿ ವಿನೋದ ಚಂದ್ರನ ಅವರ ಪೀಠದಿಂದ ನಿರ್ಣಯ

ನವದೆಹಲಿ – ಕೇರಳದ ಕ್ಯಾಥೋಲಿಕ್ ಪಾದ್ರಿ ಎಡ್ವಿನ್ ಪಿಗಾರೆಜ್ ಎಂಬಾತನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಭೂಷಣ ರಾಮಕೃಷ್ಣ ಗವಯಿ ಮತ್ತು ನ್ಯಾಯಮೂರ್ತಿ ವಿನೋದ ಚಂದ್ರನ ಅವರ ಪೀಠವು ತಡೆಹಿಡಿದು, ಆತನಿಗೆ ಜಾಮೀನು ನೀಡಿದೆ. ಈ ಹಿಂದೆ ಉಚ್ಚನ್ಯಾಯಾಲಯವು ಆತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು; ಆದರೆ, ಪಾದ್ರಿ ಪಿಗಾರೆಜ್ ಈಗಾಗಲೇ 10 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆಯನ್ನು ತಡೆಹಿಡಿಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯ ನ್ಯಾಯಾಧೀಶ ಗವಯಿ ಮತ್ತು ನ್ಯಾಯಮೂರ್ತಿಗಳ ಪೀಠವು, ಆರೋಪಿಯು ಈಗಾಗಲೇ 10 ವರ್ಷಗಳ ಶಿಕ್ಷೆ ಅನುಭವಿಸಿದ್ದಾನೆ, ಇದು ಉಚ್ಚನ್ಯಾಯಾಲಯ ವಿಧಿಸಿದ ಶಿಕ್ಷೆಯ ಅರ್ಧದಷ್ಟು ಆಗಿದೆ ಎಂದು ಹೇಳಿದೆ. ಮೇಲ್ಮನವಿಯ ವಿಚಾರಣೆಗೆ ಸಮಯ ಬೇಕಾಗುವುದರಿಂದ ಶಿಕ್ಷೆಯನ್ನು ತಡೆಹಿಡಿದು ಜಾಮೀನು ನೀಡಲಾಗಿದೆ.

ಕೆಲವು ದಿನಗಳ ಹಿಂದೆ ಇದೇ ನ್ಯಾಯಮೂರ್ತಿಗಳ ಪೀಠವು ಖಜುರಾಹೋದಲ್ಲಿನ ಶ್ರೀ ವಾಮನ ದೇವಸ್ಥಾನದ ಪ್ರಕರಣದಲ್ಲಿ ತೀರ್ಪು ನೀಡುವಾಗ, ‘ಹೋಗಿ ದೇವರನ್ನೇ ಏನಾದರೂ ಮಾಡಲು ಹೇಳಿ’ ಎಂದು ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಒಳಗಾಗಿತ್ತು.

ಯಾವ ಪ್ರಕರಣ?

2014-2015ರ ಅವಧಿಯಲ್ಲಿ, ಕೇರಳದ ಎರ್ನಾಕುಲಂನ ಚರ್ಚ್ ಪ್ರೆಸ್ಬಿಟರಿಯಲ್ಲಿ ಪಾದ್ರಿ ಪಿಗಾರೆಜ್ ಎಂಟನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದರು. ಸ್ಥಳೀಯ ಸೆಷನ್ಸ್ ನ್ಯಾಯಾಲಯವು ಅವರನ್ನು ಪೋಕ್ಸೊ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಕೇರಳ ಉಚ್ಚನ್ಯಾಯಾಲಯವು ಶಿಕ್ಷೆಯನ್ನು ಕಡಿಮೆ ಮಾಡಿ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.