ಅಶ್ಲೀಲ ಪಾತ್ರಗಳನ್ನು ನಿರ್ವಹಿಸಿದ ನಟ ರಣಬೀರ್ ಕಪೂರ್ ಅವರನ್ನು ರಾಮಾಯಣ ಚಲನಚಿತ್ರದ ಶ್ರೀರಾಮನ ಪಾತ್ರದಿಂದ ತೆಗೆದುಹಾಕಿರಿ! : Ranbir Kapoor As Ram

ಮಾಜಿ ಕೇಂದ್ರ ಮಾಹಿತಿ ಆಯುಕ್ತರಾಗಿದ್ದ ಉದಯ ಮಾಹುರಕರ ಅವರಿಂದ ಕೇಂದ್ರ ಸರಕಾರಕ್ಕೆ ಪತ್ರ! 

ಚಿತ್ರದಲ್ಲಿ ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಮತ್ತು ನಟ ರಣಬೀರ್ ಕಪೂರ್

ನವದೆಹಲಿ – ಮುಂಬರುವ ‘ರಾಮಾಯಣ’ ಹಿಂದಿ ಚಲನಚಲನಚಿತ್ರದಲ್ಲಿ ನಟ ರಣಬೀರ ಕಪೂರ ಅವರು ಭಗವಾನ ಶ್ರೀರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಪತ್ರಕರ್ತ ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತರಾದ ಉದಯ ಮಾಹುರಕರ ಹಾಗೂ ದೂರದರ್ಶನದ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಷ್ಮ ಪಿತಾಮಹರ ಪಾತ್ರ ನಿರ್ವಹಿಸಿದ್ದ ನಟ ಮುಕೇಶ ಖನ್ನಾ ಕೂಡ ಈ ವಿರೋಧದಲ್ಲಿ ಸೇರಿದ್ದಾರೆ. ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರಾದ ಉದಯ ಮಾಹುರಕರ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು, ‘ಅನಿಮಲ್’ ಚಲನಚಿತ್ರದಲ್ಲಿ ಅಶ್ಲೀಲ ಪಾತ್ರವನ್ನು ನಿರ್ವಹಿಸಿದ ನಂತರ ರಣಬೀರ ಕಪೂರ ಅವರು ಭಗವಾನ ಶ್ರೀರಾಮನ ಪಾತ್ರವನ್ನು ಮಾಡುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದ್ದಾರೆ. ‘ಅನಿಮಲ್’ ಚಲನಚಿತ್ರದಲ್ಲಿ ರಣಬೀರ ಕಪೂರ ಅವರು ಮಾದಕ ವಸ್ತು, ಅಪರಾಧ ಮತ್ತು ಅಶ್ಲೀಲತೆಯನ್ನು ಪ್ರಚಾರ ಮಾಡಿದ್ದಾರೆ. ಇಂತಹ ನಟ ಶ್ರೀರಾಮನ ಪಾತ್ರ ಮಾಡಿದರೆ ದೇವರ ಪ್ರತಿಷ್ಠೆಗೆ ಕಳಂಕ ಬರುತ್ತದೆ. ಆದ್ದರಿಂದ, ರಣಬೀರ ಕಪೂರ ಅವರನ್ನು ಈ ಚಲನಚಿತ್ರದಿಂದ ತೆಗೆದುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚಲನಚಿತ್ರದ ಪ್ರಚಾರಕ್ಕಾಗಿ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವ ಯೋಜನೆ!

ಮಾಹುರಕರ ಅವರ ಪ್ರಕಾರ, ‘ರಾಮಾಯಣ’ ಚಲನಚಿತ್ರಕ್ಕಾಗಿ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವ ಯೋಜನೆಯಿದೆ. ರಣಬೀರ ಕಪೂರ ಅವರ ಮುಖವನ್ನು ಪ್ರಚಾರಕ್ಕಾಗಿ ಬಳಸಿದರೆ, ಇದು ಲೈಂಗಿಕ ಅಶ್ಲೀಲತೆ, ಅಪರಾಧ ಮತ್ತು ನೈತಿಕ ಅವನತಿಗೆ ಪ್ರೋತ್ಸಾಹ ನೀಡುತ್ತದೆ. ಇದು ಮಕ್ಕಳ ಮತ್ತು ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಶಾದ್ಯಂತ ಇರುವ ಹಿಂದೂಗಳ ಮನಸ್ಸಿನಲ್ಲಿ ಭಗವಾನ ಶ್ರೀರಾಮನ ತಪ್ಪು ಪ್ರತಿಮೆ ಮೂಡುತ್ತದೆ. ಇದು ಕಲಾ ಸ್ವಾತಂತ್ರ್ಯದ ವಿಷಯವಲ್ಲ, ಬದಲಿಗೆ ಮಾಧ್ಯಮಗಳ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಯೋಜಿತ ಸಾಂಸ್ಕೃತಿಕ ಹಾನಿಯಾಗಿದೆ. ಮಂದಿರದ ಗೋಡೆಗೆ ಕೈಯಿಡದೆ ಭಕ್ತಿಯ ಮೂಲ ಸಾರವನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆ.

ರಾಮಾಯಣ ಚಲನಚಿತ್ರದ ಪಾತ್ರಗಳ ಪುನರ್ ಪರಿಶೀಲನೆಗೆ ಆಗ್ರಹ

ಮಾಹುರಕರ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಚಲನಚಿತ್ರದ ನಿರ್ಮಾಪಕ ನಮಿತ ಮಲ್ಹೋತ್ರಾ ಅವರಿಗೆ ‘ರಾಮಾಯಣ’ ಚಲನಚಿತ್ರದ ಪಾತ್ರಗಳ ಬಗ್ಗೆ ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಶ್ರೀರಾಮನ ಪಾತ್ರಕ್ಕೆ ರಣಬೀರ ಕಪೂರ ಬದಲಿಗೆ ಬೇರೊಬ್ಬ ನಟನನ್ನು ಆಯ್ಕೆ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ.

… ಇಲ್ಲವಾದರೆ ಇಂದಿನ ಹಿಂದೂಗಳು ಸುಮ್ಮನಿರುವುದಿಲ್ಲ! – ಮುಕೇಶ ಖನ್ನಾ ಎಚ್ಚರಿಕೆ

ಮುಖೇಶ್ ಖನ್ನಾ

ನಟ ಮುಕೇಶ ಖನ್ನಾ ಅವರು ಕೂಡ ರಣಬೀರ ಕಪೂರ ಅವರ ಶ್ರೀರಾಮನ ಪಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು, ರಣಬೀರ ಒಳ್ಳೆಯ ನಟ, ಆದರೆ ಅವರ ಹಿಂದೆ ‘ಅನಿಮಲ್’ ಚಲನಚಿತ್ರದ ಪ್ರತಿರೂಪವಿದೆ ಎಂದು ಅವರು ಹೇಳಿದ್ದಾರೆ. ರಾಮಾಯಣಕ್ಕಿಂತ ದೊಡ್ಡ ವಿಷಯ ಇರಲು ಸಾಧ್ಯವಿಲ್ಲ, ಆದರೆ ‘ಆದಿಪುರುಷ’ ಚಲನಚಿತ್ರದಂತೆ ಅದರಲ್ಲಿ ತಪ್ಪು ಬದಲಾವಣೆಗಳನ್ನು ಮಾಡಿದರೆ ಇಂದಿನ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ರಣಬೀರ ಕಪೂರ ಅವರಿಗೆ ಕಾಲಕಾಲಕ್ಕೆ ಎದುರಾದ ವಿರೋಧಗಳು!

1. ಗೋಮಾಂಸ ಸೇವಿಸುತ್ತಿರುವುದರಿಂದ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿದ್ದರು!

ರಣಬೀರ ಅವರ ಕೆಲವು ವರ್ಷಗಳ ಹಿಂದಿನ ವಿಡಿಯೋದಲ್ಲಿ ಅವರು ಸ್ವತಃ ‘ಬಿಗ್ ಬೀಫ್ ಗಾಯ್’ (ನಾನು ಗೋಮಾಂಸ ತಿನ್ನುವ ವ್ಯಕ್ತಿ) ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕೆ 2022ರಲ್ಲಿ ‘ಬ್ರಹ್ಮಾಸ್ತ್ರ’ ಚಲನಚಿತ್ರದ ಮೊದಲು ರಣಬೀರ್ ಮತ್ತು ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಹೋದಾಗ ಹಿಂದೂ ಸಂಘಟನೆಗಳು ಅವರಿಗೆ ಪ್ರವೇಶ ನಿರಾಕರಿಸಿದ್ದವು.

2. ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿಯೂ ವಿರೋಧ!

2024ರಲ್ಲಿ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿಯೂ ಅವರಿಗೆ ವಿರೋಧ ವ್ಯಕ್ತವಾಗಿತ್ತು.

3. ಮದ್ಯದೊಂದಿಗೆ ‘ಜೈ ಮಾತಾ ದಿ’ ಘೋಷಣೆ!

2023ರ ಕ್ರಿಸ್‌ಮಸ್ ಪಾರ್ಟಿಯಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಕೇಕ್‌ನಲ್ಲಿ ಮದ್ಯ ಹಾಕಿ, ಬೆಂಕಿ ಹಚ್ಚಿ ‘ಜೈ ಮಾತಾ ದಿ’ ಘೋಷಣೆ ಕೂಗುತ್ತಾ ಇಡೀ ಕಪೂರ್ ಕುಟುಂಬ ಕಾಣಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣಬೀರ್ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

4. ಪಾಕಿಸ್ತಾನದ ಮೇಲಿನ ಪ್ರೀತಿ ಮತ್ತು ಹಿಂದೂಗಳ ಮೇಲಿನ ದಾಳಿಗಳ ಕುರಿತು ಮೌನ!

2022ರಲ್ಲಿ ಸೌದಿ ಅರೇಬಿಯಾದ ‘ರೆಡ್ ಸೀ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ರಣಬೀರ ಕಪೂರ್ ಅವರು ಪಾಕಿಸ್ತಾನಿ ಚಲನಚಿತ್ರ ‘ದಿ ಲೆಜೆಂಡ್ ಆಫ್ ಮೌಲಾ ಜಟ್ಟ್’ ಅನ್ನು ಹೊಗಳಿ, ಪಾಕಿಸ್ತಾನಿ ಕಲಾವಿದರ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ಏಪ್ರಿಲ್ 2025ರಲ್ಲಿ ಪಹಲ್ಗಾಮ್‌ ನಲ್ಲಿ ಹಿಂದೂಗಳ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಕುರಿತು ಅವರು ಯಾವುದೇ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವುದಿಲ್ಲ.