ಭಾರತವು ಮಹತ್ವಾಕಾಂಕ್ಷೆ ಇಟ್ಟುಕೊಂಡು ಜಗತ್ತಿನ ‘ನಿರ್ದಯಿ ಮಹಾಶಕ್ತಿ’ ಯಾಗಬೇಕು! – ‘ಜೊಮ್ಯಾಟೊ’ ಕಂಪನಿಯ ಮುಖ್ಯಸ್ಥ ದೀಪಿಂದರ್ ಗೋಯಲ್

ಟ್ರಂಪ್ ಅವರು ಶೇ.50 ಆಮದು ತೆರಿಗೆ ವಿಧಿಸಿದ ಪ್ರಕರಣ

ನವದೆಹಲಿ – ಎಲ್ಲಿಯವರೆಗೆ ನಮ್ಮ ದೇಶದ ಅದೃಷ್ಟವನ್ನು ನಾವೇ ಬದಲಾಯಿಸಿ ಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಜಾಗತಿಕ ಶಕ್ತಿಗಳು ನಮಗೆ ಬೆದರಿಕೆ ಹಾಕುತ್ತಲೇ ಇರುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ, ನಾವೆಲ್ಲರೂ ಒಗ್ಗಟ್ಟಾಗಿ ಜಗತ್ತಿನ ‘ನಿರ್ದಯಿ ಮಹಾಶಕ್ತಿ’ಯಾಗುವ ನಿರ್ಧಾರ ತೆಗೆದುಕೊಳ್ಳಬೇಕು. ಆರ್ಥಿಕತೆ, ತಂತ್ರಜ್ಞಾನ, ರಕ್ಷಣೆಗಳಲ್ಲಿನ ಪ್ರಗತಿಯ ಜೊತೆಗೆ, ಅತ್ಯಂತ ಮುಖ್ಯವಾಗಿ, ನಾವು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳಬೇಕು. ಬೇರೆ ಯಾವುದೇ ದಾರಿಯಿಲ್ಲ ಎಂದು ‘ಜೊಮ್ಯಾಟೊ’ ಕಂಪನಿಯ ಮುಖ್ಯಸ್ಥ ದೀಪಿಂದರ್ ಗೋಯಲ್ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 50 ಆಮದು ತೆರಿಗೆ ವಿಧಿಸಿದ್ದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಗೋಯಲ್ ಅವರ ‘ಎಕ್ಸ್’ ಪೋಸ್ಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗೋಯಲ್ ಅವರು ಮಾತು ಮುಂದುವರೆಸಿ, “ಪ್ರತಿ ಕೆಲವು ವರ್ಷಗಳಿಗೊಮ್ಮೆ ಜಗತ್ತು ನಮಗೆ ನಮ್ಮ ಸ್ಥಾನವನ್ನು ತೋರಿಸಿಕೊಡುತ್ತದೆ. ‘ಅಲ್ಲಿ ಅಪಾಯವಿದೆ’, ‘ಅಲ್ಲಿ ಸುಂಕ (ಟ್ಯಾರಿಫ್) ಇದೆ’ ಎಂಬಂತಹ ಕಾರಣಗಳನ್ನು ನೀಡಲಾಗುತ್ತದೆ; ಆದರೆ ಈ ಎಲ್ಲದರ ಒಳಗಿನ ಎಚ್ಚರಿಕೆ ‘ನೀವು (ಭಾರತ) ನಿಮ್ಮ ಮಿತಿಯಲ್ಲಿರಿ!’ ಇದೇ ಆಗಿರುತ್ತದೆ ಎಂದಿದ್ದಾರೆ.