ಹಿಂದೂ ಜನಜಾಗೃತಿ ಸಮಿತಿಯ ಸುನಿಲ್ ಘನವಟ್ ಹೆಸರಿನಲ್ಲಿ ಪ್ರಧಾನಿ ಕಚೇರಿಗೆ ದೂರು ಪ್ರಕರಣ – 3 ಶಂಕಿತರು ಪೊಲೀಸರ ವಶಕ್ಕೆ!

ಛತ್ತೀಸ್‌ಗಢ: ಕೃಷಿ ಸಚಿವ ನೇತಾಂ ವಿರುದ್ಧ 90 ನಕಲಿ ದೂರುಗಳು

ರಾಯಪುರ (ಛತ್ತೀಸ್‌ಗಢ) – ರಾಜ್ಯದ ಕೃಷಿ ಸಚಿವ ರಾಮ್‌ವಿಚಾರ್ ನೇತಾಂ ಅವರ ಮಾನಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ವಿಚಾರಣೆ ನಡೆಯುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ್ ಅವರ ಹೆಸರಿನಲ್ಲಿ ನಕಲಿ ಲೆಟರ್‌ಪ್ಯಾಡ್‌ಗಳನ್ನು ಬಳಸಿ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರಪತಿ ಭವನ ಮತ್ತು ಇತರ ಹಿರಿಯ ಸಂಸ್ಥೆಗಳಿಗೆ ಸುಮಾರು 80 ರಿಂದ 90 ಸುಳ್ಳು ದೂರುಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಸಚಿವರ ವಿರುದ್ಧ ಭ್ರಷ್ಟಾಚಾರದ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ.

ಬಿಜೆಪಿ ನಾಯಕ ರಾಹುಲ್ ಹರಿತ್ವಾಲ್ ಅವರಿಗೆ ಈ ಕುರಿತು ಮೊದಲ ಮಾಹಿತಿ ಲಭಿಸಿತು. ಅವರು ತಕ್ಷಣ ಶ್ರೀ. ಸುನಿಲ್ ಘನವಟ್ ಅವರನ್ನು ಸಂಪರ್ಕಿಸಿದರು. ಶ್ರೀ. ಘನವಟ್ ಅವರು ಅಂತಹ ಯಾವುದೇ ದೂರುಗಳೊಂದಿಗೆ ತಮ್ಮ ಸಂಬಂಧವನ್ನು ನಿರಾಕರಿಸಿದರು ಮತ್ತು ತಮ್ಮ ಹೆಸರು, ಸಹಿ, ಹುದ್ದೆ ಮತ್ತು ಮೊಬೈಲ್ ಸಂಖ್ಯೆಯನ್ನು ನಕಲಿಯಾಗಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಅವರು ಪುಣೆ ಪೊಲೀಸರಿಗೆ, ಹಾಗೆಯೇ ರಾಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ದೂರು ದಾಖಲಿಸಿದ್ದಾರೆ.

ಅಂಚೆ ಕಚೇರಿಯ ಸಿಸಿಟಿವಿಯಿಂದ ಶಂಕಿತರ ಪತ್ತೆ

ಪೊಲೀಸರ ತನಿಖೆಯಲ್ಲಿ, ಈ ದೂರುಗಳನ್ನು ಕೊರ್ಬಾದ ಹಸ್ದೇವ್ ಉಪ ಅಂಚೆ ಕಚೇರಿಯಿಂದ ನೋಂದಾಯಿತ ಅಂಚೆ (ರಿಜಿಸ್ಟರ್ಡ್ ಪೋಸ್ಟ್) ಮೂಲಕ ಕಳುಹಿಸಲಾಗಿದೆ ಎಂದು ಸ್ಪಷ್ಟವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಮೋಹನ್ ಮಿರಿ ಮತ್ತು ಕಮಲ್ ವರ್ಮಾ ಎಂಬ ಶಂಕಿತರನ್ನು ಗುರುತಿಸಲಾಗಿದೆ. ನಂತರ ಪೊಲೀಸರು ಒಟ್ಟು 3 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ. ಈ ಸಂಪೂರ್ಣ ವಂಚನೆಯ ಹಿಂದಿನ ಸೂತ್ರಧಾರ ಯಾರು ಮತ್ತು ಅವರ ಉದ್ದೇಶವೇನು ಎಂಬುದನ್ನು ಈಗ ಪತ್ತೆ ಹಚ್ಚಲಾಗುತ್ತಿದೆ.