ಮೆಲ್ಬರ್ನ್ (ಆಸ್ಟ್ರೇಲಿಯಾ)ನ ಸ್ವಾಮಿನಾರಾಯಣ ದೇವಾಲಯದ ಮೇಲೆ ಅಜ್ಞಾತರಿಂದ ಜನಾಂಗೀಯ ದ್ವೇಷದ ಬರಹ!- Hindu Temple Vandalized

ಮೆಲ್ಬರ್ನ್ (ಆಸ್ಟ್ರೇಲಿಯಾ) – ಇಲ್ಲಿನ ಬೊರೊನಿಯಾ ಪ್ರದೇಶದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯದ ಮೇಲೆ ಅಜ್ಞಾತ ವ್ಯಕ್ತಿಗಳು ಆಕ್ಷೇಪಾರ್ಹ ಮತ್ತು ಜನಾಂಗೀಯ ದ್ವೇಷದ ಸಂದೇಶಗಳನ್ನು ಬರೆದು ಅಪಖ್ಯಾತಿ ತರಲು ಯತ್ನಿಸಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ‘ಗೋ ಹೋಮ್ ಬ್ರೌನ್’ (ಕಂದು ಬಣ್ಣದವರೇ ಮನೆಗೆ ಹೋಗಿ) ಎಂಬ ಜನಾಂಗೀಯ ದ್ವೇಷದ ಬರಹವನ್ನು ಬರೆಯಲಾಗಿತ್ತು. ಅಲ್ಲದೆ, ಪಕ್ಕದ ಏಷ್ಯಾದ ಜನರ ಎರಡು ರೆಸ್ಟೋರೆಂಟ್‌ಗಳ ಗೋಡೆಗಳ ಮೇಲೂ ಇದೇ ರೀತಿಯ ಆಕ್ಷೇಪಾರ್ಹ ಪದಗಳು ಕಂಡುಬಂದಿವೆ. ಈ ಘಟನೆಯ ನಂತರ ಹಿಂದೂ ಮತ್ತು ಬಹುಸಾಂಸ್ಕೃತಿಕ ಸಂಘಟನೆಗಳು ಒಗ್ಗೂಡಿ ಈ ದ್ವೇಷದ ವಿರುದ್ಧ ಧ್ವನಿ ಎತ್ತಿದವು. ಸ್ಥಳೀಯ ಸಮುದಾಯ ಮತ್ತು ‘ಸಿಟಿ ಆಫ್ ಗ್ರೇಟರ್ ನಾಕ್ಸ್’ನ ‘ಮಲ್ಟಿಫೇತ್ ನೆಟ್‌ವರ್ಕ್’ ದೇವಾಲಯಕ್ಕೆ ಬೆಂಬಲ ನೀಡುವ ಭರವಸೆ ನೀಡಿದೆ.

‘ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ದ ತೀವ್ರ ಖಂಡನೆ

‘ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ’ದ (ವಿಕ್ಟೋರಿಯಾ ಶಾಖೆ) ಅಧ್ಯಕ್ಷ ಮಕರಂದ ಭಗವತ್ ಅವರು ಆಕ್ರೋಶ ವ್ಯಕ್ತಪಡಿಸಿ, “ಈ ದೇವಾಲಯವು ಶಾಂತಿ, ಭಕ್ತಿ ಮತ್ತು ಏಕತೆಯ ಸಂಕೇತವಾಗಿದೆ. ಇಂತಹ ಘಟನೆ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಮತ್ತು ಗುರುತಿನ ಮೇಲಿನ ಆಕ್ರಮಣವಾಗಿದೆ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಜಸಿಂಟಾ ಅಲೆನ್ ಅವರ ಖಾಸಗಿ ಸಂದೇಶ

ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ ಜಸಿಂಟಾ ಅಲೆನ್ ಅವರು ಸಾರ್ವಜನಿಕವಾಗಿ ಈ ಘಟನೆಯನ್ನು ಖಂಡಿಸದಿದ್ದರೂ, ಅವರ ಕಚೇರಿಯಿಂದ ದೇವಾಲಯದ ಆಡಳಿತ ಮಂಡಳಿಗೆ ಖಾಸಗಿ ಸಂದೇಶವನ್ನು ಕಳುಹಿಸಲಾಗಿದೆ. ಆ ಸಂದೇಶದಲ್ಲಿ ಈ ಘಟನೆಯು ಅಸಹ್ಯಕರ, ಜನಾಂಗೀಯ ದ್ವೇಷದಿಂದ ಕೂಡಿದ ಮತ್ತು ಭಯ ಹುಟ್ಟಿಸುವಂತಹದ್ದು ಎಂದು ಹೇಳಲಾಗಿದೆ. ವಿಕ್ಟೋರಿಯಾ ಪೊಲೀಸರು ಈ ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಲೆನ್ ತಿಳಿಸಿದ್ದಾರೆ.

ನಾಲ್ಕು ಘಟನೆಗಳ ತನಿಖೆ ಪ್ರಗತಿಯಲ್ಲಿದೆ!

ಪೊಲೀಸ್ ವಕ್ತಾರರು ನೀಡಿದ ಮಾಹಿತಿಯ ಪ್ರಕಾರ, ಬೊರೊನಿಯಾ ಮತ್ತು ಬೇಸ್‌ವಾಟರ್ ಪ್ರದೇಶಗಳಲ್ಲಿ ನಡೆದ ನಾಲ್ಕು ಘಟನೆಗಳು ಪರಸ್ಪರ ಸಂಬಂಧ ಹೊಂದಿರಬಹುದು. ಈ ಎಲ್ಲಾ ಸ್ಥಳಗಳಲ್ಲಿ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಇದರಲ್ಲಿ ಸ್ವಾಮಿನಾರಾಯಣ ದೇವಾಲಯ, ಎರಡು ಏಷ್ಯಾದ ರೆಸ್ಟೋರೆಂಟ್‌ಗಳು ಮತ್ತು ಒಂದು ಹೀಲಿಂಗ್ ಸೆಂಟರ್ ಸೇರಿವೆ. ಸಮಾಜದಲ್ಲಿ ಇಂತಹ ದ್ವೇಷಪೂರಿತ ವರ್ತನೆಗೆ ಯಾವುದೇ ಸ್ಥಾನವಿಲ್ಲ.

ಸಂಪಾದಕೀಯ ನಿಲುವು

ಎರಡು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಜನಾಂಗೀಯ ದ್ವೇಷದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಮತ್ತು ಈಗ ದೇವಾಲಯದ ಮೇಲೆ ಜನಾಂಗೀಯ ದ್ವೇಷದ ಬರಹ ಬರೆಯಲಾಗಿದೆ. ಭಾರತ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಸ್ಟ್ರೇಲಿಯಾ ಸರಕಾರದ ಮೇಲೆ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಇಂತಹ ಘಟನೆಗಳು ಮತ್ತೆ ನಡೆಯದಂತೆ ತಡೆಯಲು ಒತ್ತಡ ಹೇರಬೇಕು!