ಭಯೋತ್ಪಾದಕರಿಗೆ ಊಹೆಗೂ ಮೀರಿದ ಶಿಕ್ಷೆಯಾಗಲಿದೆ ! – ಪ್ರಧಾನಿ ಮೋದಿ

ಮಧುಬನಿ(ಬಿಹಾರ)ಯ ಸಭೆಯಲ್ಲಿ ಪ್ರಧಾನಮಂತ್ರಿ ಮೋದಿಯವರ ಘೋಷಣೆ

ಮಧುಬನಿ (ಬಿಹಾರ) – ಪಹಲಗಾಮ ದಾಳಿಯ ಭಯೋತ್ಪಾದಕರು ಮತ್ತು ಸಂಚು ರೂಪಿಸಿದವರನ್ನು ಮಣ್ಣಿನಲ್ಲಿ ಹೂಳುವ ಸಮಯ ಬಂದಿದೆ. ಈ ಭಯೋತ್ಪಾದಕರಿಗೆ ಅವರ ಊಹೆಗೂ ಮೀರಿದ ಶಿಕ್ಷೆ ಸಿಗಲಿದೆ. ಭಯೋತ್ಪಾದಕರ ಅಳಿದುಳಿದಿರುವ ಸ್ಥಳಗಳನ್ನು ಮಣ್ಣುಪಾಲು ಮಾಡುವ ಸಮಯ ಬಂದಿದೆ, ಎಂಬಂತಹ ಶಬ್ದಗಳಲ್ಲಿ ಪ್ರಧಾನಿ ಮೋದಿ ಇಲ್ಲಿನ ಒಂದು ಸಭೆಯಲ್ಲಿ ಘೋಷಿಸಿದರು.

ಈ ದಾಳಿಯ ನಂತರ ಜಗತ್ತಿಗೆ ಭಾರತದ ಸಂದೇಶವನ್ನು ತಲುಪಿಸಲು ಪ್ರಧಾನಿ ಮೋದಿಯವರು ಆಂಗ್ಲದಲ್ಲಿ ಮಾತನಾಡುತ್ತಾ, ನಾವು ಅವರನ್ನು ಭೂಮಿಯ ಕೊನೆಯ ಮೂಲೆಯವರೆಗೂ ಓಡಿಸುತ್ತೇವೆ. ಭಯೋತ್ಪಾದನೆಯಿಂದ ಭಾರತದ ಆತ್ಮ ಎಂದಿಗೂ ಮುರಿಯುವುದಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗುವುದು. ‘ನ್ಯಾಯವನ್ನು ಖಚಿತಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು’ ಎಂಬ ಸಂಕಲ್ಪದಲ್ಲಿ ಇಡೀ ದೇಶ ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರಿಗೆ ಮತ್ತು ಅವರ ನಾಯಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು!

ಪ್ರಧಾನಿ ಮೋದಿ ವೇದಿಕೆಯಿಂದಲೇ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಕೆಲವು ನಿಮಿಷಗಳ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಅವರು ಮುಂದುವರಿದು, ಮುಗ್ಧ ಜನರನ್ನು ಹತ್ಯೆ ಮಾಡಿರುವ ರೀತಿಯಿಂದ ಇಡೀ ದೇಶ ತತ್ತರಿಸಿದೆ. ಅವರ ದುಃಖದಲ್ಲಿ ಇಡೀ ದೇಶ ಅವರೊಂದಿಗೆ ನಿಂತಿದೆ. ದಾಳಿಯಲ್ಲಿ ಕೆಲವರು ತಮ್ಮ ಮಗನನ್ನು ಕಳೆದುಕೊಂಡರು, ಕೆಲವರು ಸಹೋದರನನ್ನು ಕಳೆದುಕೊಂಡರು, ಕೆಲವರು ಜೀವನ ಸಂಗಾತಿಯನ್ನು ಕಳೆದುಕೊಂಡರು. ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು, ಕೆಲವರು ಕನ್ನಡ, ಕೆಲವರು ಮರಾಠಿ, ಕೆಲವರು ಗುಜರಾತಿ, ಮತ್ತು ಕೆಲವರು ಬಿಹಾರದವರು. ಇಂದು ಕಾರ್ಗಿಲನಿಂದ ಕನ್ಯಾಕುಮಾರಿಯವರೆಗೆ ಎಲ್ಲರ ಮರಣದ ಬಗ್ಗೆ ನಮ್ಮ ಕೋಪ ಒಂದೇ ಆಗಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಜನರು ಶೀಘ್ರವಾಗಿ ಗುಣಮುಖರಾಗಲು ಸರಕಾರ ಪ್ರಯತ್ನಿಸುತ್ತಿದೆ, ಎಂದು ಹೇಳಿದರು.