ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಿ ! – ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಚಿವರಿಗೆ ಮನವಿ

ಶ್ರೀ.ರಮೇಶ ಶಿಂದೆ

ಬೆಂಗಳೂರು : ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ. ಈ ಮೂಲಕ ಕರ್ನಾಟಕ ಸರಕಾರ ಕ್ರೈಸ್ತರು ಮತ್ತು ಹಿಂದೂಗಳಿಗೆ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ ಗಮನಕ್ಕೆ ಬರುತ್ತದೆ. ಕರ್ನಾಟಕದಲ್ಲಿ ಕನ್ನಡವೇ ರಾಜ್ಯಭಾಷೆ. ರಾಜ್ಯ ಸರಕಾರ ಉರ್ದು ಭಾಷೆಯನ್ನು ಕಡ್ಡಾಯ ಮಾಡಿ ಕನ್ನಡಿಗರನ್ನು ಸಹ ಅವಮಾನ ಮಾಡಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ್ ಶರ್ಮ ಇವರು ತಿಳಿಸಿದರು. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂಧರ್ಭದಲ್ಲಿ ಮಾತನಾಡಿದರು.

ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪದೇ ಪದೇ ಹಿಂದೂಗಳ ಬಗ್ಗೆ ತುಷ್ಟೀಕರಣ ನೀತಿ ಅನುಸರಿಸುವುದು ಗಮನಕ್ಕೆ ಬರುತ್ತಿದೆ. ಕೇವಲ ಇದೊಂದೇ ಘಟನೆ ಅಲ್ಲದೆ ಇತ್ತೀಚಿಗೆ ರಾಜ್ಯದಲ್ಲಿ ನಡೆದ ಅನೇಕ ಘಟನೆಗಳೂ ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಷಡ್ಯಂತ್ರವನ್ನು ಎತ್ತಿ ತೋರಿಸುತ್ತದೆ. ಈ ಬಾರಿ ಶಿಕ್ಷಕ ದಿನಾಚರಣೆ ವೇಳೆ, ಉಡುಪಿಯ ಪ್ರಾಂಶುಪಾಲರಾದ ಬಿ.ಜಿ ರಾಮಕೃಷ್ಣ ಇವರು ಹಿಜಾಬ್ ಘಟನೆ ವೇಳೆ ಹಿಜಾಬ್ ಧರಿಸಿ ಬರಲು ವಿರೋಧಿಸಿದ್ದರೆಂದು ಅವರಿಗೆ ಸಲ್ಲಬೇಕಿದ್ದ ’ಉತ್ತಮ ಶಿಕ್ಷಕ’ ಪ್ರಶಸ್ತಿ ರದ್ದುಗೊಳಿಸಲಾಯಿತು. ನಾಗಮಂಗಲದಲ್ಲಿ ನಡೆಯುತ್ತಿದ್ದ ಶಾಂತಿಯುತ ಗಣೇಶೋತ್ಸವದ ಮೇಲೆ ಮತಾಂಧರು ಕಲ್ಲು ತೂರಾಟ ಮಾಡಿದ್ದರೂ, ಈ ಪ್ರಕರಣದಲ್ಲಿ ಆರೋಪಿ ನಂ ೧ ರಿಂದ ೨೩ ವರೆಗೆ ಹಿಂದೂ ಕಾರ್ಯಕರ್ತರ ಹೆಸರುಗಳನ್ನು ಸೇರಿಸಲಾಗಿತ್ತು. ಅಷ್ಟೇ ಅಲ್ಲದೆ ಈ ಬಾರಿಯ ಗಣೇಶೋತ್ಸವ ಆಚರಣೆ ಸಮಯದಲ್ಲಿ ಸಹ ಪ್ರಸಾದಕ್ಕೆ ಬಿಬಿಎಂಪಿ FSSAI ಕಡ್ಡಾಯವೆಂದು ಆದೇಶಿಸಿತ್ತು.

ಈ ಎಲ್ಲ ಘಟನೆಗಳನ್ನು ನೋಡುವಾಗ ಕಾಂಗ್ರೆಸ್ ಹಿಂದೂಗಳ ಮೇಲೆ ನಡೆಸುತ್ತಿರುವ ಅನ್ಯಾಯಕ್ಕೆ ಕೊನೆಯಿಲ್ಲದಂತಾಗಿದೆ. ಈಗ ಅಂಗನವಾಡಿ ಹುದ್ದೆಗಳ ಬಗ್ಗೆಯೂ ಸರಕಾರದ ಈ ನಿಲುವಿನಿಂದ ಜನತೆಯಲ್ಲಿ ಅತ್ಯಂತ ಭಯದ ವಾತಾವರಣ ನಿರ್ಮಾಣವಾಗಿದ್ದು ಸಮಸ್ತ ಹಿಂದೂಗಳು ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹಾಗಾಗಿ ಇಲಾಖೆಯ ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಮನವಿ ಮೂಲಕ ಆಗ್ರಹಿಸಲಾಗಿದೆ. ಈ ವೇಳೆ ಧರ್ಮಪ್ರೇಮಿಗಳಾದ ಶ್ರೀ. ಮಧುಚಂದ್ರ, ಶ್ರೀ.ಶಂಕರಪ್ಪ, ಶ್ರೀ. ಮಂಜುನಾಥ್, ಶ್ರೀ. ಗಂಗಾಧರ, ಕು. ಸಂಗೀತ , ಕು. ಅನುಶ್ರೀ, ಶ್ರೀ. ರಮೇಶ ಇವರು ಉಪಸ್ಥಿತರಿದ್ದರು.