HJS Campaign : ಹಿಂದೂ ಜನಜಾಗೃತಿ ಸಮಿತಿಯಿಂದ ಗಜೇಂದ್ರಗಡದ ಕೋಟೆಯಲ್ಲಿ ಕೋಟೆ ಸ್ವಚ್ಛತೆ ಮತ್ತು ಶೌರ್ಯ ಜಾಗೃತಿ ಅಭಿಯಾನ ಸಂಪನ್ನ !

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ‘ಒಂದು ದಿನ ಶಿವಾಜಿಯ ಸಾನಿಧ್ಯದಲ್ಲಿ’ ಅಭಿಯಾನ !

ಗಜೇಂದ್ರಗಡ : ಇದೇ ಮಾರ್ಚ್ 28 ರಂದು ಛತ್ರಪತಿ ಶಿವಾಜಿ ಮಹಾರಾಜರ ತಿಥಿಗನುಸಾರ ಜಯಂತಿ ಇದೆ. ಈ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ‘ಒಂದು ದಿನ ಶಿವಾಜಿಯ ಸಾನಿಧ್ಯದಲ್ಲಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಅಂತರ್ಗತ ಶಿವಾಜಿ ಮಹಾರಾಜರು ಕಟ್ಟಿದ ಅಥವಾ ಅವರ ಕಾಲದ ಕೋಟೆ-ದುರ್ಗಗಳಿಗೆ ಭೇಟಿ ನೀಡಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ಅಭಿಯಾನದ ಅಡಿಯಲ್ಲಿ ಇದೇ ಮಾರ್ಚ್ 23 ಶನಿವಾರದಂದು ಛತ್ರಪತಿ ಶಿವಾಜಿ ಮಹಾರಾಜರಿಂದ ನವೀಕರಿಸಲ್ಪಟ್ಟಿದೆಯೆಂದು ಹೇಳಲಾಗುವ ಗದಗ ಜಿಲ್ಲೆಯಲ್ಲಿನ ಗಜೇಂದ್ರಗಡ ಕೋಟೆಯಲ್ಲಿ ಸಮಿತಿಯ ಕಾರ್ಯಕರ್ತರಿಂದ ಸ್ವಚ್ಛತೆಯನ್ನು ಮಾಡಲಾಯಿತು.

ನಂತರ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು. ವೈಶಿಷ್ಟ್ಯಪೂರ್ಣವೆಂದರೆ ಎಲ್ಲ ಕಾರ್ಯಕರ್ತರು ‘ಛತ್ರಪತಿ ಶಿವಾಜಿ ಮಹಾರಾಜರಂತೆ ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ನಮ್ಮಲ್ಲಿ ಬಲ ಸಿಗಲಿ’ ಎಂದು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿದಾಗ ಭಾವಚಿತ್ರದ ಮೇಲಿನಿಂದ ಹೂವೊಂದು ಕೆಳಗೆ ಬಿದ್ದು ಎಲ್ಲರ ಪ್ರಾರ್ಥನೆಗೆ ಪ್ರಸಾದ ಲಭಿಸಿತು.

ನಂತರ ಶಿವಾಜಿ ಮಹಾರಾಜರ ಆದರ್ಶ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದರ ಬಗ್ಗೆ, ಅವರಂತೆ ಶೌರ್ಯ ಜಾಗೃತಿ ಕುರಿತು ಹಾಗೂ ಧರ್ಮಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ಹೆಚ್ಚಿಸಿಕೊಳ್ಳಲು ಭಗವಂತನ ನಾಮಜಪದ ಮಹತ್ವವನ್ನು ತಿಳಿಸಲಾಯಿತು. ಕೊನೆಗೆ ಎಲ್ಲರೂ ಒಂದಾಗಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆಯನ್ನು ಮಾಡಿದರು.