ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ

ಮಾನ್ಯ ಗೃಹ ಸಚಿವರಿಗೆ ಮನವಿ ನೀಡುತ್ತಿರುವ (ಎಡದಿಂದ) ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಶ್ರೀ. ಮೋಹನ್ ಗೌಡ, ದಾಸನಪುರ ಪದ್ಮಾವತಿ ಶ್ರೀನಿವಾಸ ದೇವಸ್ಥಾನದ ಶ್ರೀ. ಜಯರಾಮ ಎಸ್, ಚಿಕ್ಕಬಳ್ಳಾಪುರದ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಶ್ರೀ. ರಮೇಶ್ ಪಿ ಹಾಗೂ ದೇವಸ್ಥಾನದ ಮಹಾಸಂಘದ ಕಾರ್ಯಕರ್ತರು

ಬೆಂಗಳೂರು : ದಿನಾಂಕ 26 ಡಿಸೆಂಬರ್ ದಂದು ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮವನ್ನು ನೆರೆವೇರಿಸುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ 2 ಜನವರಿ 2024 ರ ಮಂಗಳವಾರದಂದು ಕರ್ನಾಟಕ ದೇವಸ್ಥಾನ – ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮಾನ್ಯ ಗೃಹ ಸಚಿವ ಜಿ. ಎಮ್ ಪರಮೇಶ್ವರ್ ಇವರಿಗೆ ಮನವಿ ನೀಡಲಾಯಿತು, ಈ ಸಂದರ್ಭದಲ್ಲಿ ಮಹಾಸಂಘದ ರಾಜ್ಯ ಸಂಯೋಜಕ ಶ್ರೀ. ಮೋಹನ್ ಗೌಡ, ಚಿಕ್ಕಬಳ್ಳಾಪುರದ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಶ್ರೀ. ರಮೇಶ್ ಪಿ, ಅಣ್ಣಿಗೆರೆಯ ಶ್ರೀ ರೇಣುಕಾ ಯಲ್ಲಮ್ಮ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಶ್ರೀ. ಎ. ಪಿ ಸತ್ಯನಾರಾಯಣ ಶ್ರೇಷ್ಟಿ, ದಾಸನಪುರ ಪದ್ಮಾವತಿ ಶ್ರೀನಿವಾಸ ದೇವಸ್ಥಾನದ ಶ್ರೀ. ಜಯರಾಮ್ ಎಸ್, ವಿಜಯನಗರದ ವಾಸವಿ ದೇವಸ್ಥಾನದ ಶ್ರೀ. ಎಮ್.ಎಲ್ ಶ್ರೀ. ರಾಮ್, ಬನ್ನೇರುಘಟ್ಟದ ವೇದಮೂರ್ತಿಗಳಾದ ಶ್ರೀ. ಶ್ಯಾಮ ಸುಂದರ ಹಾಗೂ ಎಮ್. ಭಗತ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನೀಲೇಶ್ವರ, ಶ್ರೀ. ನವೀನ್ ಗೌಡ ಹಾಗೂ ಶ್ರೀ ಶರತ್ ಕುಮಾರ್, ಸಿದ್ಧಾಪುರ ಸೇರಿದಂತೆ 10 ಕ್ಕೂ ಹೆಚ್ಚು ದೇವಸ್ಥಾನಗಳ ಅರ್ಚಕರು, ಟ್ರಸ್ಟಿಗಳು, ವಿಶ್ವಸ್ಥರು ಹಾಗೂ ದೇವಸ್ಥಾನಗಳ ಮಹಾಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾನ್ಯ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ದೇವಸ್ಥಾನ-ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಶ್ರೀ. ಮೋಹನ್ ಗೌಡ ಮಾತನಾಡಿ, ‘ಈ ಉತ್ಸವವ ಪ್ರತೀವರ್ಷ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಕೆಲವು ದುಷ್ಕರ್ಮಿಗಳು ಪೂರ್ವನಿಯೋಜಿತ ಷಡ್ಯಂತ್ರ್ಯವನ್ನು ಮಾಡಿ, ಸದರಿ ಉತ್ಸವದಲ್ಲಿ ದೊಂಬಿ, ಗಲಾಟೆ ಮಾಡಿ, ಶ್ರೀ ನಂಜುಂಡೇಶ್ವರ ದೇವರಿಗೆ ಧಿಕ್ಕಾರ ಕೂಗಿ, ಉತ್ಸವ ಆಚರಣೆಗೆ ಭಂಗ ತರುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿ, ಉತ್ಸವ ಮೂರ್ತಿಯನ್ನು ಅಪವಿತ್ರ ಮಾಡಿದ್ದಾರೆ. ಸದರಿ ಘಟನೆಯು ಅತ್ಯಂತ ಗಂಭೀರವಾಗಿದ್ದು, ರಾಜ್ಯದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಘಟನೆಯನ್ನು ಖಂಡಿಸಿ, ಭಕ್ತರು ಮತ್ತು ಸ್ಥಳಿಯರು ಸ್ವಯಂಪ್ರೇರಿತರಾಗಿ ಶಾಂತಿಯುತ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೆ ಪೊಲೀಸರು ಅಪರಾಧಿಗಳನ್ನು ಬಂಧನ ಮಾಡುವ ಬದಲು ಶಾಂತಿಯುತ ಪ್ರತಿಭಟನೆ ಮಾಡಿದ ಭಕ್ತರ ಮೇಲೆ ದೂರು ದಾಖಲು ಮಾಡಿರುವುದು ಖಂಡನೀಯ` ಎಂದರು.

ಈ ಘಟನೆಯ ನಂತರ ಅನೇಕ ಹಿಂದೂ ವಿರೋಧಿಗಳು ಶ್ರೀ ಶ್ರೀಕಂಠೇಶ್ವರ ದೇವರ ಬಗ್ಗೆ ಅತ್ಯಂತ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಾಕಿ ಅಪಮಾನ ಮಾಡಿದ್ದಾರೆ. ನಾಗೇಶ್ ಬಿಎಮ್ ಎನ್ನುವವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ “ಕಬಿನಿ ನದಿಯಲ್ಲಿ ಜಳಕವಾಡುವ 90% ಅಧಿಕ ಹೆಚ್ಚು ಜನ ಉಚ್ಚೆ ಉಯ್ಯುತ್ತಾರೆ. ನದಿಯುದ್ದಕ್ಕೂ ವಾಸವಿರುವ ಜನ ತಿಕ ತೊಯ್ಯುತ್ತಾರೆ ಧನ ಮತ್ತು ಬಟ್ಟೆ ತೊಳೆಯುತ್ತಾರೆ, ಅದೇ ನೀರನ್ನು ದಿನನಿತ್ಯ ಅರ್ಚಕರು ತಂದು ನಂಜುಂಡನಿಗೆ ಅಭಿಷೇಕ ಮಾಡುತ್ತಾರೆ. ನೀರನ್ನು ಎರಚಿದರು ಸಹ ನಂಜುಂಡನಿಗೇಕೆ ಮೈಲಿಗೆಯಾಗುತ್ತದೆ ?” ಎಂದು ಕೆಟ್ಟದಾಗಿ ಭಕ್ತರ ಭಾವನೆಗೆ ಘಾಸಿಯಾಗುವ ರೀತಿಯಲ್ಲಿ, ಶ್ರೀ ನಂಜುಂಡೇಶ್ವರ ದೇವರಿಗೆ ಅಪಮಾನವಾಗುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಇವರ ಮೇಲೂ ಸಹ ಕಾನೂನು ಕ್ರಮ ಜರುಗಿಸಬೇಕು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ಈ ರೀತಿ ಉತ್ಸವಕ್ಕೆ ಅಡ್ಡಿಪಡಿಸಿದ ಅಪರಾಧಿಗಳನ್ನು ಕೂಡಲೇ ಬಂಧನ ಮಾಡಿ ಅವರಿಗೆ ತಕ್ಕ ಶಾಸ್ತಿಯನ್ನು ನೀಡಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಬೇಕು` ಎಂದು ಮನವಿಯ ಮೂಲಕ ಆಗ್ರಹಿಸಲಾಗಿದೆ.