ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮವಿಲ್ಲ!

ಅಗರ್ ಮಾಳವಾ (ಮಧ್ಯಪ್ರದೇಶ) – ಇಲ್ಲಿನ ಬಗಲಾಮುಖಿ ದೇವಿ ದೇವಸ್ಥಾನದ ದೇಣಿಗೆಯಲ್ಲಿ ನಡೆದ ಅವ್ಯವಹಾರದ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಈಗ ದೇವಸ್ಥಾನದ ಹೆಸರು ಮತ್ತು ಚಿತ್ರಗಳನ್ನು ಬಳಸಿ ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ನಡೆಸಲಾಗುತ್ತಿದೆ. ಮೆಣಸಿನಕಾಯಿ ಹವನ (ಮಿರ್ಚಿ ಹವನ), ವಶೀಕರಣ, ಸರಕಾರಿ ಉದ್ಯೋಗದಲ್ಲಿ ಯಶಸ್ಸು ಮತ್ತು ವಿಶೇಷ ತಾಂತ್ರಿಕ ವಿಧಿ-ವಿಧಾನಗಳನ್ನು ಮಾಡಿಕೊಡುವುದಾಗಿ ಹೇಳಿ ಭಕ್ತರಿಂದ ಭಾರಿ ಹಣ ಲೂಟಿ ಮಾಡಲಾಗುತ್ತಿದೆ.

ಮತ್ತೊಂದೆಡೆ, ದೇವಸ್ಥಾನದ ಆವರಣದಲ್ಲಿ ಮೆಣಸಿನಕಾಯಿ ಹವನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಇಂತಹ ಯಾವುದೇ ಆನ್‌ಲೈನ್ ಸೇವೆಗಳಿಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮವಿಲ್ಲ!

ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಖಾತೆಗಳನ್ನು ಮುಚ್ಚಲು ಮತ್ತು ಭಕ್ತರಿಗಾಗುತ್ತಿರುವ ಆನ್‌ಲೈನ್ ವಂಚನೆಯನ್ನು ತಡೆಯಲು ದೇವಸ್ಥಾನದ ಆಡಳಿತ ಸಮಿತಿಯು ಜೂನ್ ತಿಂಗಳಿನಲ್ಲಿ ಅಗರ್ ಮಾಳವಾದ ಪೊಲೀಸ್ ವರಿಷ್ಠಾಧಿಕಾರಿ (SP) ಮತ್ತು ನಲಖೇಡಾ ಪೊಲೀಸ್ ಠಾಣಾಧಿಕಾರಿಗೆ ಪತ್ರ ಬರೆದು ವಿನಂತಿಸಿತ್ತು; ಆದರೆ ಇದುವರೆಗೆ ಯಾವುದೇ ಪ್ರಮುಖ ಕ್ರಮ ಕೈಗೊಂಡಿರುವ ಮಾಹಿತಿ ಮುನ್ನೆಲೆಗೆ ಬಂದಿಲ್ಲ.

ಮಹಿಳೆಯರ ಆಭರಣ ಕಳ್ಳತನ

ಪ್ರತಿ ವರ್ಷ ಲಕ್ಷಾಂತರ ಭಕ್ತರು ದರ್ಶನ ಮತ್ತು ಪೂಜೆಗಾಗಿ ಈ ದೇವಸ್ಥಾನಕ್ಕೆ ಬರುತ್ತಾರೆ. ವಿಶೇಷವಾಗಿ ಚೈತ್ರ ಮತ್ತು ಶಾರದಿಯ ನವರಾತ್ರಿಯ ಸಂದರ್ಭದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದೇ ಜನಸಂದಣಿಯ ದುರುಪಯೋಗ ಪಡೆದುಕೊಂಡು, ಸಮಾಜಘಾತುಕ ಶಕ್ತಿಗಳು ಮಹಿಳೆಯರ ಚಿನ್ನದ ಸರಗಳು ಮತ್ತು ಮಾಂಗಲ್ಯ ಸರಗಳನ್ನು ಕಳ್ಳತನ ಮಾಡುವ ಘಟನೆಗಳು ವರದಿಯಾಗಿವೆ.

ಸಂಪಾದಕೀಯ ನಿಲುವು

ಇದು ಪೊಲೀಸ್ ಮತ್ತು ಸರಕಾರಕ್ಕೆ ನಾಚಿಕೆಗೇಡು! ಹಿಂದೂ ದೇವಾಲಯಗಳಿಗೆ ಸಂಬಂಧಿಸಿದ ಇಂತಹ ವಂಚನೆಗಳನ್ನು ತಡೆಯುವಲ್ಲಿ ನಿರ್ಲಕ್ಷ ತೋರುವವರನ್ನು ಜೈಲಿಗೇ ತಳ್ಳಬೇಕು!