ಮುಂಬಯಿಯ ಹೆಸರಾಂತ ಶಾಲೆಯ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವುದು ಪತ್ತೆ : ಶಾಲೆಯಿಂದ ಪೋಷಕರಿಗೆ ಜಾಗರೂಕರಾಗಿರಲು ಸೂಚನೆ !

ಭಾರತದಲ್ಲಿ ಇ-ಸಿಗರೇಟುಗಳ ಮೇಲೆ ನಿಷೇಧವಿದೆ !

(ಇ-ಸಿಗರೇಟ್ ಎಂದರೆ ಎಲೆಕ್ಟ್ರಾನಿಕ್ ಸಿಗರೇಟ್. ಇದು ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದು ಹೊಗೆಯ ಬದಲಿಗೆ ನಿಕೋಟಿನ್, ಫ್ಲೇವರ್ಸ್ ಮತ್ತು ರಾಸಾಯನಿಕಗಳ ಆವಿಯನ್ನು ಉತ್ಪಾದಿಸುತ್ತದೆ.)

ಪ್ರಾತಿನಿಧಿಕ ಚಿತ್ರ

ಮುಂಬಯಿ, ಜೂನ್ 20 (ಸುದ್ದಿ) – ದಾದರ್‌ನ ಹೆಸರಾಂತ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಗಂಭೀರವಾದ ವಿಷಯವೆಂದರೆ ‘ಇ-ಸಿಗರೇಟ್’ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಒಂದು ಇ-ಸಿಗರೇಟ್ 1 ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಸಿಗುತ್ತದೆ. ಇಷ್ಟೊಂದು ದುಬಾರಿ ಬೆಲೆಯ ಇ-ಸಿಗರೇಟುಗಳು ವಿದ್ಯಾರ್ಥಿಗಳ ಬಳಿ ಪತ್ತೆಯಾಗಿವೆ. ಈ ಗಂಭೀರ ವಿಷಯದ ಬಗ್ಗೆ ಎಲ್ಲಾ ಪೋಷಕರಲ್ಲಿ ಜಾಗೃತಿ ಮೂಡಿಸಲು, ಶಾಲೆಯು ಜೂನ್ 20 ರಂದು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಿ ಅವರಿಗೆ ಅಗತ್ಯ ಸೂಚನೆಗಳನ್ನು ನೀಡಿತು.

ಕೆಲವು ವಿದ್ಯಾರ್ಥಿಗಳ ಪೋಷಕರು ಈ ವಿಷಯವನ್ನು ‘ಸನಾತನ ಪ್ರಭಾತ’ದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಈ ಶಾಲೆಯು ಶಿಶುವಿಭಾಗದಿಂದ 10 ನೇ ತರಗತಿಯವರೆಗೆ ಇದೆ. ಕೆಲವು ದಿನಗಳ ಹಿಂದೆ ಈ ಶಾಲೆಯ ಕೆಲವು ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದವು. ಈ ಬಗ್ಗೆ ಪೋಷಕರು ಶಿಕ್ಷಕರಿಗೆ ತಿಳಿಸಿದಾಗ, ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿದ್ದರು. ಆ ಸಮಯದಲ್ಲಿ ಶಾಲೆಯ ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ಕೆಲವು ವಿದ್ಯಾರ್ಥಿಗಳು ಮರೆಗೆ ಹೋಗಿ ಇ-ಸಿಗರೇಟು ಸೇದುತ್ತಿರುವುದು ಕಂಡುಬಂದಿದೆ.

Distressing Reality: Mumbai School Students Show Growing Interest and Familiarity with E-Cigarettes

ಮಕ್ಕಳ ಬ್ಯಾಗ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ ! – ಪೋಷಕರಿಗೆ ಶಾಲೆಯ ಸೂಚನೆ

‘ಶಾಲೆಯಲ್ಲಿ ಹಣ ಕೇಳಿದ್ದಾರೆಂದು ಸುಳ್ಳು ಹೇಳಿ ಅಥವಾ ಮನೆಯಲ್ಲಿ ಹಣವನ್ನು ಕದ್ದು ವಿದ್ಯಾರ್ಥಿಗಳು ಇ-ಸಿಗರೇಟ್ ಖರೀದಿಸಬಹುದು. ಕೆಲವು ವಿದ್ಯಾರ್ಥಿಗಳು ಹಣವನ್ನು ಒಟ್ಟುಗೂಡಿಸಿ ಜಂಟಿಯಾಗಿ ಇ-ಸಿಗರೇಟ್ ಖರೀದಿಸಬಹುದು. ಇಂತಹ ಘಟನೆಗಳು ನಡೆಯದಂತೆ ತಡೆಯಲು ಪೋಷಕರು ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕು. ವಿದ್ಯಾರ್ಥಿಗಳ ಬ್ಯಾಗುಗಳನ್ನು ಪರಿಶೀಲಿಸಬೇಕು. ತಮ್ಮ ಮಕ್ಕಳು ತಪ್ಪು ಹಾದಿಗೆ ಹೋಗದಂತೆ ಪೋಷಕರು ಜಾಗರೂಕರಾಗಿರಬೇಕು’, ಎಂದು ಸಭೆಯಲ್ಲಿ ಶಿಕ್ಷಕರು ಪೋಷಕರಿಗೆ ಸೂಚನೆ ನೀಡಿದ್ದಾರೆ. ಮುಂಬಯಿಯ ಇತರ ಕೆಲವು ಶಾಲೆಗಳಲ್ಲೂ ಈ ಹಿಂದೆ ವಿದ್ಯಾರ್ಥಿಗಳು ಇ-ಸಿಗರೇಟು ಸೇದುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.

ಸಂಪಾದಕೀಯ ನಿಲುವು

  • ಬಾಲ್ಯದಿಂದಲೇ ಮಕ್ಕಳಿಗೆ ಸಾಧನೆಯನ್ನು ಕಲಿಸಿದರೆ ಅವರು ವ್ಯಸನಗಳಿಂದ ದೂರವಿರುತ್ತಾರೆ !
  • ನಿಷೇಧವಿದ್ದರೂ ಇ-ಸಿಗರೇಟು ಸಿಗುತ್ತಿರುವುದು ಪೊಲೀಸ್ ಮತ್ತು ಸರಕಾರದ ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ!