ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಸ್ ಹೊರಟಿದ್ದರಿಂದ ವೈದ್ಯರ ಭೇಟಿಯ ಸಮಯ ತಪ್ಪಿಸಿಕೊಂಡ ಮಹಿಳೆ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಹಿಳೆಗೆ 35 ಸಾವಿರ ರೂಪಾಯಿ ಪರಿಹಾರ ನೀಡಬೇಕು! - ಗ್ರಾಹಕ ನ್ಯಾಯಾಲಯದ ಆದೇಶ

AI Image

ತಿರುವನಂತಪುರಂ (ಕೇರಳಮ್‌) – ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಸ್ ಹೊರಟಿದ್ದರಿಂದ ಮಹಿಳೆಯ ಬಸ್ ತಪ್ಪಿಹೋಗಿದೆ ಮತ್ತು ಇದರಿಂದಾಗಿ ಆಕೆಗೆ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗುವ ಸಮಯ (ಅಪಾಯಿಂಟ್‌ಮೆಂಟ್) ತಪ್ಪಿಹೋಗಿದೆ. ಇದರ ನಂತರ ಮಹಿಳೆಯು ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಗ್ರಾಹಕ ನ್ಯಾಯಾಲಯವು ಮಹಿಳೆಯ ಪರವಾಗಿ ತೀರ್ಪು ನೀಡಿದ್ದು, ಸದರಿ ಮಹಿಳಾ ಪ್ರಯಾಣಿಕರಿಗೆ 35 ಸಾವಿರ ರೂಪಾಯಿ ಪರಿಹಾರ ನೀಡುವಂತೆ ‘ಕೇರಳಮ್‌ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ಗೆ (ಕೆ.ಎಸ್.ಆರ್.ಟಿ.ಸಿ.) ಆದೇಶಿಸಿದೆ. ಇದರಲ್ಲಿ 25 ಸಾವಿರ ರೂಪಾಯಿ ಪರಿಹಾರ ಮತ್ತು 10 ಸಾವಿರ ರೂಪಾಯಿ ಮೊಕದ್ದಮೆಯ ವೆಚ್ಚ ಸೇರಿದೆ.

ಏನಿದು ಪ್ರಕರಣ?

ದೂರುದಾರೆ ಮಹಿಳೆಯು 24 ಆಗಸ್ಟ್ 2024 ರಂದು ಕಟ್ಟಾಕಡಾದಿಂದ ಎರ್ನಾಕುಲಂನ ಆಸ್ಪತ್ರೆಯೊಂದಕ್ಕೆ ಹೋಗಲು (ಕೆ.ಎಸ್.ಆರ್.ಟಿ.ಸಿ.ಯ) ಎಕ್ಸ್‌ಪ್ರೆಸ್ ಬಸ್‌ನ ಟಿಕೆಟ್ ಕಾಯ್ದಿರಿಸಿದ್ದರು (ಬುಕ್ ಮಾಡಿದ್ದರು). ಈ ಬಸ್ ಬೆಳಗ್ಗೆ 8 ಗಂಟೆಗೆ ತಿರುವಲ್ಲಾದಿಂದ ಹೊರಡಬೇಕಿತ್ತು. ಮಹಿಳೆಗೆ ಮಧ್ಯಾಹ್ನ 12.30 ಕ್ಕೆ ವೈದ್ಯರನ್ನು ಭೇಟಿಯಾಗುವ ಸಮಯ ನಿಗದಿಯಾಗಿತ್ತು. ಮಹಿಳೆಯು ಬೆಳಗ್ಗೆ 7.30 ಕ್ಕೇ ಬಸ್ ನಿಲ್ದಾಣಕ್ಕೆ ತಲುಪಿದ್ದರು ಮತ್ತು ಬೆಳಗ್ಗೆ 8.10 ರವರೆಗೆ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್ ಬರದಿದ್ದಾಗ ಅವರು ಬಸ್‌ನ ಸಿಬ್ಬಂದಿಯನ್ನು ಸಂಪರ್ಕಿಸಿದರು. ಆಗ ಸಿಬ್ಬಂದಿಯು, ಬಸ್ ಈಗಾಗಲೇ ತಿರುವಲ್ಲಾ ದಾಟಿ ಕೊಟ್ಟಾಯಂ ತಲುಪಿದೆ ಎಂದು ತಿಳಿಸಿದರು ಮತ್ತು ಆಕೆಗೆ ಮತ್ತೊಂದು ಬಸ್‌ನಲ್ಲಿ ಬರುವಂತೆ ಹೇಳಿದರು.

“ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಸ್ ಬಿಡುವುದು ಮತ್ತು ಇದರಿಂದಾಗಿ ಬಸ್ ಕಾಯ್ದಿರಿಸಿದ ಪ್ರಯಾಣಿಕರ ಬಸ್ ತಪ್ಪಿಹೋಗುವುದು ಸೇವಾ ನ್ಯೂನತೆಯಾಗಿದೆ” ಎಂದು ಗ್ರಾಹಕ ನ್ಯಾಯಾಲಯವು ಉಲ್ಲೇಖಿಸಿದೆ ಮತ್ತು ‘ಕೆ.ಎಸ್.ಆರ್.ಟಿ.ಸಿ.’ಗೆ ಮೇಲಿನಂತೆ ದಂಡ ವಿಧಿಸಿದೆ.