‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’

ಭಾಜಪದ ವಕ್ತಾರ ಶೆಹಜಾದ್ ಪೂನಾವಾಲಾ ಅವರಿಂದ ವಿರೋಧ ವ್ಯಕ್ತ

ಕಾಂಗ್ರೆಸ್ ನಾಯಕ ವಕೀಲ ಕಪಿಲ್ ಸಿಬಲ್

ನವ ದೆಹಲಿ – ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ದಾಳಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯಸಭೆಯ ಕಾಂಗ್ರೆಸ್ ಸಂಸದ ಹಾಗೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ‘ಇಂತಹ ಘಟನೆಗಳು ಎಲ್ಲಿ ನಡೆಯುತ್ತವೆಯೋ, ಅಂತಹ ದೇಶದಲ್ಲಿ ಇರಲು ನನಗೆ ನಾಚಿಕೆಯಾಗುತ್ತದೆ,’’ಎಂದು ಹೇಳಿಕೆ ನೀಡಿದ್ದಾರೆ.

ಸಿಬಲ್ ಅವರಿಗೆ ಪ್ರತ್ಯುತ್ತರ ನೀಡಿದ ಭಾಜಪದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡಿ ಸಿಬಲ್ ಅವರು ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ, ಆದರೂ ಅವರಿಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತದೆ. ಸಿಬಲ್ ಅವರು ತಮಗೆ ಭಾರತದಲ್ಲಿ ಇರಲು ನಾಚಿಕೆಯಾಗುತ್ತದೆ ಎಂದು ಹೇಳುತ್ತಾರೆ; ಆದರೆ 2021 ರ ಚುನಾವಣೆಯ ನಂತರ ನಡೆದ ಹಿಂಸಾಚಾರದಲ್ಲಿ ಭಾಜಪ ಮತ್ತು ಕಾಂಗ್ರೆಸ್ಸಿನ 300 ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾದಾಗ ಸಿಬಲ್ ಅವರು ಎಂದಿಗೂ ಬಾಯಿ ತೆರೆಯಲಿಲ್ಲ. ಇದಲ್ಲದೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಮೇಲಿನ ಬಲಾತ್ಕಾರ, ಹಾಗೆಯೇ ಸಂದೇಶಖಾಲಿಯಂತಹ ಪ್ರಕರಣಗಳಲ್ಲೂ ಸಿಬಲ್ ಮೌನವಾಗಿಯೇ ಉಳಿದರು. ಭಾಜಪ ಸರಕಾರದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಇರುವುದನ್ನು ಒಂದು ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು; ಆದರೆ ಭಾಜಪವನ್ನು ವಿರೋಧಿಸುವ ಭರದಲ್ಲಿ ಕೆಲವು ವಿರೋಧ ಪಕ್ಷದ ನಾಯಕರಲ್ಲಿ ದೇಶದ ಮೇಲೆಯೇ ದಾಳಿ ಮಾಡುವ ಪ್ರವೃತ್ತಿ ಏಕೆ ಕಂಡುಬರುತ್ತದೆ ? ಭಾರತದ ಮೇಲೆ ದ್ವೇಷ ಏಕೆ ?’ ಎಂದು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

  • ಬಂಗಾಳದಲ್ಲಿನ ಹಿಂದೂಗಳ ಮೇಲೆ ಕಳೆದ ಹಲವು ದಶಕಗಳಿಂದ ಮಿತಿಮೀರಿದ ದೌರ್ಜನ್ಯಗಳು ನಡೆದವು. ಆ ಸಮಯದಲ್ಲಿ ಕಪಿಲ್ ಸಿಬಲ್ ಅವರಿಗೆ ಎಂದಿಗೂ ನಾಚಿಕೆಯಾಗಲಿಲ್ಲವೇ ? ಬಂಗಾಳವು ಬಾಂಗ್ಲಾದೇಶವಾಗುವ ಹಾದಿಯಲ್ಲಿರುವಾಗ ಸಿಬಲ್ ಅವರಿಗೆ ಎಂದಿಗೂ ಯಾಕೆ ನಾಚಿಕೆಯಾಗಲಿಲ್ಲ ?
  • ಇಂತಹ ಹೇಳಿಕೆಗಳ ಮೂಲಕ ಭಾರತದ ಪ್ರತಿಷ್ಠೆಯನ್ನು ಮಲಿನಗೊಳಿಸಿ, ಸಿಬಲ್ ಅವರಂತಹ ರಾಜಕಾರಣಿಗಳು ಭಾರತದ್ವೇಷಿಗಳ ಕೈಗೆ ಸಿದ್ಧ ಆಯುಧವನ್ನು ನೀಡುತ್ತಾರೆ. ಇಂಥವರನ್ನು ‘ಅವರ ನಾಚಿಕೆ ಉಳಿದುಕೊಳ್ಳುವಂತಹ’ ದೇಶಕ್ಕೆ ಕಳುಹಿಸಿಕೊಡಬೇಕು !