ಹಿರಿಯ ಗಾಯಕಿ ಸುಮನ್ ಕಲ್ಯಾಣಪುರ ನಿಧನ

ಮುಂಬಯಿ – ತಮ್ಮ ಮಧುರ ಹಾಗೂ ಸುಶ್ರಾವ್ಯ ಧ್ವನಿಯ ಮೂಲಕ ರಸಿಕರ ಮನಸ್ಸನ್ನು ಆಳಿದ್ದ ಹಿರಿಯ ಗಾಯಕಿ ಸುಮನ್ ಕಲ್ಯಾಣಪುರ (89 ವರ್ಷ) ಅವರು ಮುಂಬಯಿನ ತಮ್ಮ ನಿವಾಸದಲ್ಲಿ ನಿಧನರಾದರು. ಮರಾಠಿ ಭಾವಗೀತೆ, ಭಕ್ತಿಗೀತೆ ಮತ್ತು ಹಿಂದಿ ಚಲನಚಿತ್ರ ಸಂಗೀತಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಲಾ ಕ್ಷೇತ್ರದಲ್ಲಿ ಅವರ ಅಪಾರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರವು 2023 ರಲ್ಲಿ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸುಮನ್ ಕಲ್ಯಾಣಪುರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸುಮನ್ ಕಲ್ಯಾಣಪುರ ಅವರು ಹಾಡಿದ ‘ಮನ್ ಮೋಹನ್ ಮನ್ ಮೇ ಹೋ ತುಮ್ಹೀ’ ಎಂಬ ಅಮರ ಗೀತೆಗೆ ಪ್ರತಿಷ್ಠಿತ ‘ತಾನಸೇನ್’ ಪ್ರಶಸ್ತಿ ಲಭಿಸಿತ್ತು. ಅವರು ಮರಾಠಿ ಮತ್ತು ಹಿಂದಿ ಮಾತ್ರವಲ್ಲದೆ ಬಂಗಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಕನ್ನಡ ಮತ್ತು ಭೋಜಪುರಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸಹಸ್ರಾರು ಹಾಡುಗಳನ್ನು ಹಾಡಿದ್ದಾರೆ. ಗಝಲ್, ಠುಮ್ರಿ ಮತ್ತು ಭಕ್ತಿಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು. ಮರಾಠಿ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಮೂಲ್ಯವಾಗಿದೆ. ‘ಜಿಥೇ ಸಾಗರಾ ಧರಣಿ ಮಿಳತೇ’, ‘ನಿಂಬೋಣಿಚ್ಯಾ ಝಾಡಾಮಾಗೇ ಚಂದ್ರ ಝೋಪಲಾ ಗ ಬಾಯಿ’, ‘ನಾವಿಕಾ ರೇ ವಾರಾ ವಾಹೇ ರೇ’, ‘ಕೇತಕಿಚ್ಯಾ ಬನೀ ತೇಥೇ ನಾಚಲಾ ಗ ಮೋರ್’, ‘ಉಠಾ ಉಠಾ ಚಿಯು ತಾಯಿ’ ಇವು ಅವರ ಪ್ರಸಿದ್ಧ ಹಾಡುಗಳಾಗಿವೆ. ಸುಮನ್ ಕಲ್ಯಾಣಪುರ ಅವರ ನಿಧನದಿಂದ ಸಂಗೀತ ಲೋಕದ ಅದ್ವಿತೀಯ ವ್ಯಕ್ತಿತ್ವವೊಂದು ಮರೆಯಾಗಿದೆ ಎಂದು ಸಂಗೀತ ಪ್ರಿಯರು ಖೇದ ವ್ಯಕ್ತಪಡಿಸಿದ್ದಾರೆ.