ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ ! – ಕೇಂದ್ರ ಸರಕಾರ

ನವ ದೆಹಲಿ – ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ನೀಡಬೇಕೆಂದು ಹಾಗೂ ದೇಶವ್ಯಾಪಿ ಗೋಹತ್ಯೆ ನಿಷೇಧವನ್ನು ಜಾರಿಗೆ ತರಬೇಕೆಂದು ವಿವಿಧ ಸಂಘಟನೆಗಳು ಮತ್ತು ಸಂಸದರು ಆಗಾಗ ಮನವಿ ಮಾಡುಲಾಗುತ್ತಿದೆ. ನಾಗರೀಕರೂ ಅರ್ಜಿ ಮತ್ತು ಮನವಿಗಳನ್ನು ನೀಡುವ ಮೂಲಕ ಇಂತಹ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ; ಆದರೆ ಸದ್ಯಕ್ಕಂತೂ ಅಂತಹ ಯಾವುದೇ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟದ ಮುಂದೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘವಾಲರವರು ಸ್ಪಷ್ಟಪಡಿಸಿದ್ದಾರೆ.

1. ರಾಜ್ಯವಾರು ಪರಿಸ್ಥಿತಿಯನ್ನು ನೋಡಿದರೆ ಗೋಹತ್ಯೆಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳಲ್ಲಿ ವಿಭಿನ್ನ ಕಾನೂನುಗಳಿವೆ. ಸ್ಥಳೀಯ ಪರಿಸ್ಥಿತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ರಾಜ್ಯ ಸರಕಾರಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಮೇಘವಾಲ ಹೇಳಿದರು.

2. ಇತ್ತೀಚೆಗೆ ಬಂಗಾಳದ ಭಾಜಪ ಸರಕಾರವು ರಾಜ್ಯದ 1950 ರ ಕಾನೂನಿನ ಪ್ರಕಾರ ಪ್ರಾಣಿಗಳ ಹತ್ಯೆಯ ಮೇಲಿನ ನಿಯಮಗಳ ಅನುಷ್ಠಾನವನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಕ್ರಮಗಳನ್ನು ಕೈಗೊಂಡಿರುವುದನ್ನು ಅವರು ಉಲ್ಲೇಖಿಸಿದರು.

ಗೋಹತ್ಯೆ ನಿಷೇಧಿಸಲು ಕೇಂದ್ರ ಸರಕಾರದ ಇಚ್ಛಾಶಕ್ತಿ ಅಗತ್ಯ !

ಕಾನೂನಾತ್ಮಕವಾಗಿ ಗೋಹತ್ಯೆ ನಿಷೇಧ ಕಾಯ್ದೆಗೆ ಕೆಲವು ಅಡೆತಡೆಗಳಿವೆ. ಉದಾಹರಣೆಗೆ ‘ಗೋವಿನ ರಕ್ಷಣೆ ಎಂಬುದು ಕೇಂದ್ರದ ವಿಷಯವಲ್ಲ, ಬದಲಿಗೆ ಅದು ರಾಜ್ಯದ ವ್ಯಾಪ್ತಿಗೆ ಬರುತ್ತದೆ’, ‘ಸಂವಿಧಾನದ 48 ನೇ ವಿಧಿಯ ಪ್ರಕಾರ ಗೋರಕ್ಷಣೆ ಮಾಡಬೇಕು, ಇದು ಮಾರ್ಗದರ್ಶಕ ತತ್ವಗಳಲ್ಲಿ ಬರುತ್ತದೆ, ಅದು ಮೂಲಭೂತ ಹಕ್ಕಲ್ಲ’ ಇತ್ಯಾದಿ. ಆದಾಗ್ಯೂ, ಅಸಾಧ್ಯವೆಂದು ತೋರುತ್ತಿದ್ದ 370 ನೇ ವಿಧಿಯನ್ನು ರದ್ದುಗೊಳಿಸಬಲ್ಲ ಸರಕಾರವು, ಗೋಹತ್ಯೆಯ ಮೇಲೆ ರಾಷ್ಟ್ರವ್ಯಾಪಿ ನಿಷೇಧವನ್ನು ಖಂಡಿತವಾಗಿಯೂ ತರಬಲ್ಲದು ಎಂಬುದನ್ನು ಗಮನದಲ್ಲಿಡಬೇಕು.

ಸಂಪಾದಕೀಯ ನಿಲುವು

  • ಗೋಮಾತೆಯ ರಕ್ಷಣೆಗಾಗಿ ಕೇಂದ್ರ ಸರಕಾರವು ಪ್ರತ್ಯಕ್ಷವಾಗಿ ಏನು ಮಾಡುತ್ತಿದೆ ಎಂಬುದನ್ನೂ ಸರಕಾರವು ಸ್ಪಷ್ಟಪಡಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !
  • ಗೋಹತ್ಯೆ ನಿಷೇಧಿಸಲು ದೇಶಾದ್ಯಂತ ‘ಗೋಸಮ್ಮಾನ ಆಹ್ವಾನ ಅಭಿಯಾನ’ ಎಂಬ ಅತ್ಯಂತ ಪವಿತ್ರವಾದ ಚಳವಳಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸರಕಾರವು ಹಿಂದೂಗಳ ಭಾವನೆಗಳನ್ನು ಗೌರವಿಸುವ ಬದಲು ಈ ರೀತಿಯ ಹೇಳಿಕೆ ನೀಡುವುದು ಬೃಹತ್ ಹಿಂದೂ ಸಮಾಜಕ್ಕೆ ಅಪೇಕ್ಷಿತವಲ್ಲ !