ಹಿಂದೂ ಐಕ್ಯತೆಯಿಂದಲೇ ಬಂಗಾಳದಲ್ಲಿ ಭಾಜಪಕ್ಕೆ ಜಯ !

ಬಂಗಾಳ ಚುನಾವಣೆಯ ಕುರಿತು ರಾಜಕೀಯ ವಿಶ್ಲೇಷಕ ಪಿನಾಕಿ ಗಂಗೋಪಾಧ್ಯಾಯ ಅವರ ವಿಶ್ಲೇಷಣೆ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಅತ್ಯಂತ ಆಶ್ಚರ್ಯಕರವಾಗಿದೆ. ಇಲ್ಲಿನ ಜನರಲ್ಲಿ ಇಷ್ಟು ವರ್ಷಗಳ ಕಾಲ ಭಯ ಮನೆಮಾಡಿತ್ತು. ಭಾಜಪವು ಆ ಭಯವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಿದೆ. ಈ ಭಾಗಗಳಲ್ಲಿ ಹಿಂದೂ ಮತ ಬ್ಯಾಂಕ್ ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿದೆ. ವಿಶೇಷವಾಗಿ ಶೇ. ೫೦ ಕ್ಕಿಂತ ಹೆಚ್ಚು ಮುಸಲ್ಮಾನ ಜನಸಂಖ್ಯೆ ಇರುವ ಮುರ್ಷಿದಾಬಾದ್, ಮಾಲದಾ ಮತ್ತು ಉತ್ತರ ದಿನಾಜಪುರ ಭಾಗಗಳಲ್ಲಿ ಭಾಜಪವನ್ನು ರಾಜಕೀಯವಾಗಿ ಅಸ್ಪೃಶ್ಯವೆಂದು ಪರಿಗಣಿಸಲಾಗುತ್ತಿತ್ತು; ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ‘ಒಂದು ವೇಳೆ ಮುಸಲ್ಮಾನ ಜನಸಂಖ್ಯೆ ಹೆಚ್ಚಿದ್ದರೆ, ಭಾಜಪ ಗೆಲ್ಲಲು ಸಾಧ್ಯವಿಲ್ಲ’ ಎಂಬ ಸಮೀಕರಣವು ಈಗ ಅಳಿಸಿಹೋಗಿದೆ. ಭಾಜಪವು ಮುಸಲ್ಮಾನ ಬಹುಸಂಖ್ಯಾತ ಮತ್ತು ತೃಣಮೂಲ ಕಾಂಗ್ರೆಸ್ಸಿನ ಅನೇಕ ಭದ್ರಕೋಟೆಗಳನ್ನು ಭೇದಿಸಿದೆ ಎಂದು ಬಂಗಾಳದ ರಾಜಕೀಯ ವಿಶ್ಲೇಷಕರು ಮತ್ತು ಹಿಂದುತ್ವನಿಷ್ಠ ನಾಯಕರಾದ ಶ್ರೀ. ಪಿನಾಕಿ ಗಂಗೋಪಾಧ್ಯಾಯ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ತಮ್ಮ ನಿರೀಕ್ಷಣೆಯನ್ನು ತಿಳಿಸಿದ್ದಾರೆ.

ಮುಸಲ್ಮಾನರ ಮತಗಳ ವಿಭಜನೆ !

ಶ್ರೀ ಪಿನಾಕಿ ಗಂಗೋಪಾಧ್ಯಾಯ

ಶ್ರೀ. ಗಂಗೋಪಾಧ್ಯಾಯ ಅವರು ಮಾತನಾಡುತ್ತಾ, ಭಾಜಪ ಕೇವಲ ಹಿಂದೂ ಅಭ್ಯರ್ಥಿಗಳಿಂದಾಗಿ ಗೆಲ್ಲಲಿಲ್ಲ. ಅದು ಗೆದ್ದಿದ್ದು ಏಕೆಂದರೆ ಈ ಮತಕ್ಷೇತ್ರಗಳ ಹಿಂದೂಗಳ ಮತಗಳು ಅಸಾಧಾರಣ ಶಿಸ್ತು ಮತ್ತು ಒಗ್ಗಟ್ಟಿನಿಂದ ಮತದಾನ ಮಾಡಿವೆ. ಮುಸಲ್ಮಾನರಿಗೆ ತೃಣಮೂಲ ಕಾಂಗ್ರೆಸ್ ಮೇಲೆ ಅಪನಂಬಿಕೆ ಇತ್ತು, ಇದರಿಂದಾಗಿ ಅವರ ನಿಷ್ಠೆಯು ತೃಣಮೂಲದ ಬದಲಿಗೆ ಇತರ ಮುಸಲ್ಮಾನ ಪಕ್ಷಗಳತ್ತ ಹೊರಳಿತು. ಉದಾಹರಣೆಗೆ ಮಾಕಪ, ಕಾಂಗ್ರೆಸ್, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಹುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ ಪಕ್ಷಗಳ ನಡುವೆ ಮುಸಲ್ಮಾನರ ಮತಗಳು ವಿಭಜನೆಯಾದವು. ಒಂದು ಕಡೆ ಮುಸಲ್ಮಾನ ಮತಗಳ ವಿಭಜನೆ ಮತ್ತು ಇನ್ನೊಂದು ಕಡೆ ಹಿಂದೂ ಮತಗಳ ಏಕೀಕರಣದಿಂದಾಗಿ ಭಾಜಪಕ್ಕೆ ವಿಜಯ ಲಭಿಸಿತು.

ಮಮತಾ ಬ್ಯಾನರ್ಜಿ ಸರಕಾರದಿಂದ ಭ್ರಮನಿರಸನ !

ಅವರು ಮಾತು ಮುಂದುವರೆಸುತ್ತಾ, ಈ ಎಲ್ಲದರ ಹಿಂದಿನ ಆಳವಾದ ಸಂದೇಶವೆಂದರೆ, ಈ ಕ್ಷೇತ್ರಗಳನ್ನು ಗೆಲ್ಲಲು ಭಾಜಪಕ್ಕೆ ತನ್ನ ಗುರುತನ್ನು ಮರೆಮಾಚುವ ಅಗತ್ಯವಿರಲಿಲ್ಲ. ಅವರು ತೋರಿಕೆಯನ್ನು ಮಾಡುವ ಅಗತ್ಯವೂ ಇರಲಿಲ್ಲ. ಅವರು ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು ಮತ್ತು ಆದರೂ ಗೆದ್ದರು; ಏಕೆಂದರೆ ಮತದಾರರು ಕಾನೂನು ಮತ್ತು ಸುವ್ಯವಸ್ಥೆ, ಭ್ರಷ್ಟಾಚಾರ, ನುಸುಳುವಿಕೆ, ಮಹಿಳೆಯರ ಸುರಕ್ಷತೆ, ಸ್ಥಳೀಯ ಭಯೋತ್ಪಾದನೆ ಮತ್ತು ಆಡಳಿತಾರೂಢರ ವಿಶ್ವಾಸಾರ್ಹತೆ ಸೇರಿದಂತೆ ಆಡಳಿತ ವಿರೋಧಿ ಅಂಶಗಳನ್ನು ಗಮನಿಸಿದರು. ಭ್ರಷ್ಟಾಚಾರದ ಅಸಂಖ್ಯಾತ ಪ್ರಕರಣಗಳು ಮತ್ತು ಮಮತಾ ಸರಕಾರವು ಈ ಭಾಗಗಳಲ್ಲಿ ನೀಡಿದ್ದ ಅಭಿವೃದ್ಧಿಯ ಭರವಸೆಗಳನ್ನು ಈಡೇರಿಸದ ಕಾರಣ, ಮುಸಲ್ಮಾನ ಮತಗಳು ತೃಣಮೂಲದಿಂದ ದೂರವಾಗಿ ಇತರ ಪಕ್ಷಗಳಲ್ಲಿ ವಿಭಜನೆಯಾದವು. ಇದೊಂದು ನಿಜವಾದ ರಾಜಕೀಯ ಭೂಕಂಪವಾಗಿದೆ. ಮುರ್ಷಿದಾಬಾದ್, ಮಾಲದಾ, ಉತ್ತರ ದಿನಾಜಪುರದಲ್ಲಿ ಭಾಜಪದ ವಿಜಯವು ಏನನ್ನು ತೋರಿಸಿಕೊಡುತ್ತದೆ ಎಂದರೆ, ಒಮ್ಮೆ ಹಿಂದೂ ಮತಗಳು ಒಗ್ಗೂಡಿ ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ, ತೃಣಮೂಲದ ಅತ್ಯಂತ ಶಕ್ತಿಯುತ ಕೋಟೆಗಳೂ ಸಹ ಕುಸಿಯಬಹುದು, ಎಂದಿದ್ದಾರೆ.