ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿ ಮತದಾನ ಯಂತ್ರಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪ !

ಮುಖ್ಯಮಂತ್ರಿಗಳು ಸೇರಿದಂತೆ ತೃಣಮೂಲದ ಅನೇಕ ನಾಯಕರಿಂದ ಮತದಾನ ಯಂತ್ರಗಳನ್ನು ಇರಿಸಲಾಗಿರುವ ಭದ್ರತಾ ಕೊಠಡಿಯ ಹೊರಗೆ ಧರಣಿ ಸತ್ಯಾಗ್ರಹ

ಕೋಲಕಾತಾ (ಬಂಗಾಳ) – ಇಲ್ಲಿನ ಭವಾನಿಪುರ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿರುವ ಮತದಾನ ಯಂತ್ರಗಳಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ಅಧಿಕಾರಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಏಪ್ರಿಲ್ ೩೦ ರ ರಾತ್ರಿ ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರು ಮತ್ತು ಅನೇಕ ಕಾರ್ಯಕರ್ತರು ಖುದಿರಾಮ್ ಅನುಶೀಲನ ಕೇಂದ್ರದಲ್ಲಿರುವ ಭದ್ರತಾ ಕೊಠಡಿಯ (‘ಸ್ಟ್ರಾಂಗ್ ರೂಮ್’) ಹೊರಗೆ ಜಮಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಈ ಕೊಠಡಿಯಲ್ಲಿ ಮತದಾನ ಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲಾಗಿದೆ. ಈ ಸಮಯದಲ್ಲಿ ಸ್ವತಃ ಮುಖ್ಯಮಂತ್ರಿಗಳೂ ಸಹ ೪ ಗಂಟೆಗಳ ಕಾಲ ಅಲ್ಲಿಯೇ ಇದ್ದರು. ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಾ, ಯಾವುದೇ ಮುನ್ಸೂಚನೆ ನೀಡದೆ ಭದ್ರತಾ ಕೊಠಡಿಯನ್ನು ತೆರೆಯಲಾಗಿತ್ತು ಮತ್ತು ಆ ಪರಿಸರದಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳು ಉಪಸ್ಥಿತರಿದ್ದರು ಎಂದು ಹೇಳಿದೆ.

ಮತ ಎಣಿಕೆಯಲ್ಲಿನ ಅಕ್ರಮ ತಡೆಯಲು ನಾವು ಪ್ರಾಣವನ್ನೇ ನೀಡುತ್ತೇವೆ !(ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಈ ಸಮಯದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಾ, ಒಂದು ವೇಳೆ ಯಾರಾದರೂ ಮತದಾನ ಯಂತ್ರಗಳನ್ನು ಲೂಟಿ ಮಾಡಲು ಅಥವಾ ಮತ ಎಣಿಕೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸಿದರೆ, ಅದನ್ನು ತಡೆಯಲು ನಾವು ನಮ್ಮ ಪ್ರಾಣವನ್ನೇ ನೀಡುತ್ತೇವೆ ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ ತನ್ನ ‘ಎಕ್ಸ್’ ಖಾತೆಯಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ, ಈ ವಿಡಿಯೋದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಭಾಜಪ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮತಪೆಟ್ಟಿಗೆಗಳನ್ನು ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ ಎಂದು ವಾದಿಸಿತ್ತು.

ಚುನಾವಣಾ ಆಯೋಗದ ಸ್ಪಷ್ಟೀಕರಣ !

ಆದರೆ ಚುನಾವಣಾ ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಅಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಯು ಕೇವಲ ಅಂಚೆ ಮತಪತ್ರಗಳ (ಪೋಸ್ಟಲ್ ಬ್ಯಾಲೆಟ್) ಪರಿಶೀಲನೆಯಾಗಿತ್ತು ಎಂದು ಹೇಳಿದೆ. ಹಾಗೆಯೇ ಎಲ್ಲಾ ಮತದಾನ ಯಂತ್ರಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಒಂದೆಡೆ ೨೦೨೬ ರಲ್ಲಿ ೨೨೬ ಸ್ಥಾನಗಳಲ್ಲಿ ಜಯಗಳಿಸುವ ದಾವೆ ಮಾಡುತ್ತಿರುವ ಮಮತಾ ಬ್ಯಾನರ್ಜಿ ಅವರು, ಈಗ ಸ್ವಂತ ಕ್ಷೇತ್ರದಲ್ಲೇ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಾ ಅಲೆಯುತ್ತಿದ್ದಾರೆ. ನಾಳೆ ಒಂದು ವೇಳೆ ಅವರೇ ಸೋತರೆ ಮತ್ತು ‘ಇದರ ಹಿಂದೆ ಭಾಜಪದ ಗೌಡ‘ಬಂಗಾಲ’ (ಒಳಸಂಚು) ಇದೆ’ ಎಂದು ಅವರು ಆರೋಪಿಸಿದರೆ ಆಶ್ಚರ್ಯಪಡಬೇಕಿಲ್ಲ ! ವಾಸ್ತವವಾಗಿ ಆ ಸಾಧ್ಯತೆಯನ್ನು ನೋಡಿಯೇ ಈ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬ ಸಂಶಯವು ಯಾರ ಮನಸ್ಸಿನಲ್ಲಾದರೂ ಮೂಡಿದರೆ ಅದರಲ್ಲಿ ತಪ್ಪೇನೂ ಇಲ್ಲ !