ಉತ್ತರ ಪ್ರದೇಶದ ಬಾಂದಾ ಅತ್ಯಂತ ಉಷ್ಣ ನಗರ: ೪೫.೬ ಡಿಗ್ರಿ ತಾಪಮಾನ ದಾಖಲು – Weather Update

ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಸಾಧ್ಯತೆ!

ನವ ದೆಹಲಿ/ಭೋಪಾಲ/ಜೈಪುರ/ಲಕ್ಷ್ಮಣಪುರಿ – ದೇಶದ ಹಲವು ನಗರಗಳು ಪ್ರಸ್ತುತ ಉಷ್ಣ ಅಲೆಯ ಹಿಡಿತದಲ್ಲಿ ಸಿಲುಕಿವೆ. ಬಹುತೇಕ ಭಾಗಗಳಲ್ಲಿ ತಾಪಮಾನವು ೪೦ ರಿಂದ ೪೬ ಡಿಗ್ರಿಗಳ ನಡುವೆ ಇದೆ. ಏಪ್ರಿಲ್ ೨೮ ರಂದು ಉತ್ತರ ಪ್ರದೇಶದ ಬಾಂದಾ ನಗರವು ದೇಶದ ಅತ್ಯಂತ ಉಷ್ಣ ನಗರವಾಗಿ ಹೊರಹೊಮ್ಮಿದೆ. ಅಲ್ಲಿ ೪೫.೬ ಡಿಗ್ರಿ ತಾಪಮಾನ ದಾಖಲಾಗಿದೆ. ಇದರ ಹೊರತಾಗಿ ಒಡಿಶಾದ ಝಾರ್ಸುಗುಡಾದಲ್ಲಿ ೪೫.೩ ಡಿಗ್ರಿ, ಮಹಾರಾಷ್ಟ್ರದ ಅಕೋಲಾ, ವರ್ಧಾ ಮತ್ತು ಅಮರಾವತಿಯಲ್ಲಿ ತಾಪಮಾನವು ೪೫ ಡಿಗ್ರಿಗಿಂತ ಅಧಿಕವಾಗಿತ್ತು.

ತೀವ್ರ ಉಷ್ಣತೆಯಿಂದಾಗಿ ರಾಜಸ್ಥಾನದ ಧೋಲ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲೊಂದರ ಸಾಮಾನ್ಯ ಬೋಗಿಯ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ‘ಬ್ರೇಕ್ ಪೆಡಲ್ ಅಸೆಂಬ್ಲಿ’ ಮೇಲೆ ಉಂಟಾದ ಪರಿಣಾಮದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇನ್ನು ಮಿಜೋರಾಮ್ ನ ಐಜ್ವಾಲ್, ಸೆರ್ಛಿಪ್ ಮತ್ತು ಲುಂಗ್ಲೇಯಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಸತತ ಎರಡನೇ ದಿನವೂ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮುಂದಿನ ಎರಡು ದಿನಗಳ ದೇಶದ ಹವಾಮಾನ ಮುನ್ಸೂಚನೆ:

೧. ಮುಂದಿನ ಎರಡು ದಿನಗಳಲ್ಲಿ ಛತ್ತೀಸಗಢ ಮತ್ತು ಜಾರ್ಖಂಡ ರಾಜ್ಯಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.

೨. ಉತ್ತರಾಖಂಡ, ಪಂಜಾಬ, ಹರಿಯಾಣ, ದೆಹಲಿ, ಮಧ್ಯಪ್ರದೇಶ, ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

೩. ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಗಂಟೆಗೆ ೩೦ ರಿಂದ ೪೦ ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.

೪. ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಉಷ್ಣ ಮತ್ತು ಆರ್ದ್ರ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.