ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮಹಮ್ಮದ್ ಶಾರಿಕ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ

ಮಂಗಳೂರು – ಇಲ್ಲಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಮಹಮ್ಮದ್ ಶಾರಿಕ್‌ಗೆ ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಾರಿಕ್ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು, ತದನಂತರ ಈ ತೀರ್ಪನ್ನು ಪ್ರಕಟಿಸಲಾಗಿದೆ.

ಏನಿದು ಪ್ರಕರಣ?

ನವೆಂಬರ್ 19, 2022 ರಂದು ಮಂಗಳೂರಿನ ಕಂಕನಾಡಿ ಪ್ರದೇಶದಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಮಹಮ್ಮದ್ ಶಾರಿಕ್ ಪ್ರೆಶರ್ ಕುಕ್ಕರ್‌ನಲ್ಲಿ ಬಾಂಬ್ ಇಟ್ಟುಕೊಂಡು ಅದನ್ನು ದೇವಸ್ಥಾನವೊಂದರಲ್ಲಿ ಇರಿಸಲು ಹೋಗುತ್ತಿದ್ದನು; ಆದರೆ, ಟೈಮರ್‌ನ ತಪ್ಪಾದ ಸೆಟ್ಟಿಂಗ್‌ನಿಂದಾಗಿ (90 ನಿಮಿಷಗಳ ಬದಲಿಗೆ 9 ನಿಮಿಷಕ್ಕೆ ಸೆಟ್ ಆಗಿದ್ದರಿಂದ) ಬಾಂಬ್ ಹಾದಿಯಲ್ಲೇ ರಿಕ್ಷಾದಲ್ಲಿ ಸ್ಫೋಟಗೊಂಡಿತು. ಈ ಸ್ಫೋಟದಲ್ಲಿ ಶಾರಿಕ್ ಮತ್ತು ರಿಕ್ಷಾ ಚಾಲಕ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.

ತನಿಖೆಯ ವೇಳೆ, ಇಲ್ಲಿನ ಮಂಜುನಾಥ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವುದು ಶಾರಿಕ್‌ನ ಉದ್ದೇಶವಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಈತ ‘ಇಸ್ಲಾಮಿಕ್ ಸ್ಟೇಟ್’ನಿಂದ ಪ್ರೇರಿತವಾದ ಶಿವಮೊಗ್ಗ ಮಾಡ್ಯೂಲ್‌ನ (ಭಯೋತ್ಪಾದನಾ ಕೃತ್ಯಗಳ ಯೋಜನೆ ಮತ್ತು ಅನುಷ್ಠಾನಕ್ಕಾಗಿ ರಚಿಸಲಾದ ಸ್ಥಳೀಯ ತಂಡ) ಸಕ್ರಿಯ ಸದಸ್ಯನಾಗಿದ್ದನು. ಈತ ಈ ಹಿಂದೆಯೂ ಅನೇಕ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು.