ಸಂಪೂರ್ಣ ‘ವಂದೇ ಮಾತರಂ’ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾ! – Karnataka High Court

ಶಾಲೆಗಳಲ್ಲಿ ಸಂಪೂರ್ಣ ‘ವಂದೇ ಮಾತರಂ’ ಹಾಡುವುದು ಕಡ್ಡಾಯ: ಕೇಂದ್ರ ಸರಕಾರದ ನಿರ್ಧಾರ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್!

ಬೆಂಗಳೂರು – ಶಾಲೆಗಳಲ್ಲಿ ಪ್ರತಿದಿನ 6 ಚರಣಗಳನ್ನೊಳಗೊಂಡ ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡಬೇಕೆಂಬ ಕೇಂದ್ರ ಸರಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರ ಸರಕಾರದ ಈ ನಿರ್ಧಾರವು ಸಂವಿಧಾನ ವಿರೋಧಿ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.

ಬೆಂಗಳೂರಿನ ನ್ಯಾಯವಾದಿ ಸೋಮಶೇಖರ್ ಎಂಬುವವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ವಿಭೂ ಬಾಖ್ರೂ ಅವರ ನೇತೃತ್ವದ ಪೀಠದ ಮುಂದೆ ನಡೆಯಿತು. ಕೇಂದ್ರ ಸರಕಾರದ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ವಾದ ಮಂಡಿಸಿದರು. ಇದೇ ರೀತಿಯ ವಿನಂತಿಯನ್ನೊಳಗೊಂಡ ಅರ್ಜಿಯನ್ನು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೂಡ ವಜಾಗೊಳಿಸಿದೆ ಎಂಬ ಅಂಶವನ್ನು ಅವರು ಪೀಠದ ಗಮನಕ್ಕೆ ತಂದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಅಂತಿಮವಾಗಿ ಅರ್ಜಿಯನ್ನು ವಜಾಗೊಳಿಸಿದೆ.