ಚಲನಚಿತ್ರಗಳಲ್ಲಿ ದರೋಡೆಕೋರರನ್ನು ನಾಯಕರನ್ನಾಗಿ ತೋರಿಸಬೇಡಿ, ಪೀಳಿಗೆಗಳು ಹಾಳಾಗುತ್ತವೆ ! – ಯೋಗಿ ಆದಿತ್ಯನಾಥ್ – Yogi Adityanath

ರಾಷ್ಟ್ರವಾದದ ಸಂದೇಶ ನೀಡುವ ‘ಧುರಂಧರ್ ೨’ ಚಲನಚಿತ್ರವನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎಚ್ಚರಿಕೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ವಾರಣಾಸಿ (ಉತ್ತರ ಪ್ರದೇಶ) – ಚಲನಚಿತ್ರಗಳು ಕೇವಲ ಮನರಂಜನೆ ಅಲ್ಲ, ಅವು ಸಮಾಜಕ್ಕೆ ದಿಕ್ಕು ತೋರಿಸುವ ಮಾಧ್ಯಮಗಳಾಗಿವೆ. ಯುವ ಪೀಳಿಗೆಯ ಮುಂದೆ ಎಂತಹ ಚಲನಚಿತ್ರಗಳನ್ನು ಇಡುತ್ತೇವೆಯೋ, ಅಂತಹದ್ದೇ ಆದರ್ಶಗಳನ್ನು ಅವರು ಸ್ವೀಕರಿಸುತ್ತಾರೆ. ಆದ್ದರಿಂದಲೇ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ರಾಷ್ಟ್ರಕ್ಕೆ ಪ್ರೇರಣೆ ನೀಡುವಂತಹ ಚಲನಚಿತ್ರಗಳನ್ನು ನಿರ್ಮಿಸಬೇಕು. ಒಬ್ಬ ದರೋಡೆಕೋರನನ್ನು ನಾಯಕನನ್ನಾಗಿ ತೋರಿಸಿದರೆ, ಯುವ ಪೀಳಿಗೆ ಅವನನ್ನೇ ಆದರ್ಶವಾಗಿ ಪರಿಗಣಿಸುತ್ತದೆ. ದರೋಡೆಕೋರರನ್ನು ನಾಯಕರೆಂದು ಬಿಂಬಿಸಬೇಡಿ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದರು. ಅವರು ಇಲ್ಲಿ ಸಾಮ್ರಾಟ್ ವಿಕ್ರಮಾದಿತ್ಯ ಅವರ ಜೀವನ ಆಧಾರಿತ ಮಹಾನಾಟಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆ ಸಮಯದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಸಹ ಉಪಸ್ಥಿತರಿದ್ದರು.

ದೇಶವು ದರೋಡೆಕೋರರನ್ನು ತಿರಸ್ಕರಿಸಿದೆ!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಧುರಂಧರ್ ೨’ ಚಿತ್ರವನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡುತ್ತಾ, ಹೊಸ ಭಾರತದಲ್ಲಿ ‘ಡಕಾಯಿತರನ್ನು’ (ದರೋಡೆಕೋರರನ್ನು) ಸಮಾಜವು ತಿರಸ್ಕರಿಸಿದೆ ಎಂದು ಹೇಳಿದರು. ಪ್ರಸ್ತುತ ಓಡುತ್ತಿರುವ ಚಲನಚಿತ್ರಗಳಿಗೆ ಜನರು ನೀಡುತ್ತಿರುವ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಒಂದು ಕಾಲವಿತ್ತು, ಆಗ ಒಳ್ಳೆಯ ವ್ಯಕ್ತಿಗಳನ್ನು ಖಳನಾಯಕರನ್ನಾಗಿ ಮತ್ತು ಖಳನಾಯಕರನ್ನು ನಾಯಕರನ್ನಾಗಿ ತೋರಿಸಲಾಗುತ್ತಿತ್ತು. ಅದರ ಪರಿಣಾಮವಾಗಿ ಪೀಳಿಗೆಗಳು ಹಾಳಾದವು.

ಉಜ್ಜಯಿನಿ ಮತ್ತು ಕಾಶಿಯ ನಡುವಿನ ಸಂಬಂಧ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸುತ್ತಾ, ಭಾರತದ ಪರಂಪರೆಯಲ್ಲಿ ಸಹೋದರತ್ವದ ಆದರ್ಶವನ್ನು ತೋರಿಸಲು ರಾಮ-ಲಕ್ಷ್ಮಣ ಮತ್ತು ಕೃಷ್ಣ-ಬಲರಾಮರ ಜೋಡಿ ಇದೆ. ಅದೇ ರೀತಿ ನಾಥ ಸಂಪ್ರದಾಯದಲ್ಲಿ ಸಂತ ಭರ್ತೃಹರಿ ಮತ್ತು ಸಾಮ್ರಾಟ್ ವಿಕ್ರಮಾದಿತ್ಯ ಅವರ ಜೋಡಿಯನ್ನು ಪರಿಗಣಿಸಲಾಗುತ್ತದೆ. ಕಾಶಿಯಲ್ಲಿ ಗಂಗಾ ದಡದ ಆಚೆ ಸಂತ ಭರ್ತೃಹರಿ ಅವರ ಸಾಧನಾ ಸ್ಥಳವಿದ್ದರೆ, ಉಜ್ಜಯಿನಿಯು ಸಾಮ್ರಾಟ್ ವಿಕ್ರಮಾದಿತ್ಯರ ಕರ್ಮಭೂಮಿಯಾಗಿತ್ತು ಎಂದರು.