ಮತ್ತೆ ಅಧಿಕಾರಕ್ಕೆ ಬಂದರೆ ಅಸ್ಸಾಂನಿಂದ ೨೪ ಗಂಟೆಗಳಲ್ಲಿ ‘ಮಿಯಾ ಮುಸ್ಲಿಮರನ್ನ್ನು’ ಹೊರಹಾಕುವ ಕಾನೂನು ತರುತ್ತೇವೆ – – Himanta Biswa Sarma

​ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಭರವಸೆ

ಗೌಹಾಟಿ (ಅಸ್ಸಾಂ) – ಬಿಜೆಪಿ ಸರಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಅಸ್ಸಾಂನಿಂದ ವಲಸಿಗರನ್ನು ಹೊರಹಾಕಲು ‘ಅಧಿನಿಯಮ, ೧೯೫೦’ ಜಾರಿಗೆ ತರಲಾಗುವುದು. (ಈ ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳಿಗೆ ೨೪ ಗಂಟೆಗಳಲ್ಲಿ ಅಕ್ರಮ ವಲಸಿಗರನ್ನು ತೆರವುಗೊಳಿಸುವ ಅಧಿಕಾರ ಸಿಗುತ್ತದೆ). ಹಾಗೆಯೇ ಬಾಂಗ್ಲಾದೇಶಿ ಮಿಯಾಗಳಿಂದ (ಮುಸ್ಲಿಮರಿಂದ) ಆಗಿರುವ ಅತಿಕ್ರಮಣದ ವಿರುದ್ಧದ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಮತ್ತು ಅವರಿಗೆ ಒಂದು ಇಂಚು ಭೂಮಿಯನ್ನೂ ಉಳಿಸಿಕೊಳ್ಳಲು ಬಿಡುವುದಿಲ್ಲ. ಮುಂದಿನ ೫ ವರ್ಷಗಳಲ್ಲಿ ನಾವು ಬಾಂಗ್ಲಾದೇಶಿ ಮಿಯಾಗಳ ಸೊಂಟ ಮುರಿಯುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭರವಸೆ ನೀಡಿದ್ದಾರೆ. ​ಮುಖ್ಯಮಂತ್ರಿ ಶರ್ಮಾ ಅವರ ‘ಮಿಯಾ ಮುಸ್ಲಿಂ’ ಎಂಬ ಪದಗಳ ಬಳಕೆಯನ್ನು ಕಾಂಗ್ರೆಸ್ ಟೀಕಿಸಿದೆ. ‘ಚುನಾವಣೆಯಲ್ಲಿ ಇಂತಹ ಭಾಷೆಯ ಬಳಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ,’ ಎಂದು ಕಾಂಗ್ರೆಸ್ ನ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ.

ಸಮಾನ ನಾಗರಿಕ ಸಂಹಿತೆ ಜಾರಿಗೆ ಘೋಷಣೆ !

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿದೆ. ಅಧಿಕಾರಕ್ಕೆ ಬಂದ ೩ ತಿಂಗಳೊಳಗೆ ಇದನ್ನು ಜಾರಿಗೆ ತರಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಆರನೇ ಅನುಸೂಚಿಯಡಿ ಬರುವ ಬುಡಕಟ್ಟು ಪ್ರದೇಶಗಳನ್ನು ಇದರಿಂದ ಹೊರಗಿಡಲಾಗುವುದು. ಸರಕಾರದ ಪ್ರಕಾರ, ಲವ್ ಜಿಹಾದ್ ಮತ್ತು ಭೂ ಜಿಹಾದ್ ಅನ್ನು ನಿಯಂತ್ರಿಸಲು ಈ ನಿರ್ಧಾರ ಅಗತ್ಯವಾಗಿದೆ.

​‘ಪ್ರವಾಹ ಮುಕ್ತ ಅಸ್ಸಾಂ’ನ ಪುನರುಚ್ಚಾರ !

ಮುಂದಿನ ೫ ವರ್ಷಗಳಲ್ಲಿ ಅಸ್ಸಾಂ ಅನ್ನು ಪ್ರವಾಹ ಮುಕ್ತಗೊಳಿಸುವುದಾಗಿ ಬಿಜೆಪಿ ಮತ್ತೆ ಭರವಸೆ ನೀಡಿದೆ. ಇದಕ್ಕಾಗಿ ಮೊದಲ ಎರಡು ವರ್ಷಗಳಲ್ಲಿ ೧೮,೦೦೦ ಕೋಟಿ ರೂಪಾಯಿ ವೆಚ್ಚ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.