ಪುರಿ(ಒಡಿಶಾ)ಯ ಜಗನ್ನಾಥ ಮಂದಿರದಲ್ಲಿನ ರತ್ನಭಂಡಾರದ ಆಭರಣಗಳು ಮತ್ತು ಅಮೂಲ್ಯ ವಸ್ತುಗಳ ಎಣಿಕೆ ಆರಂಭ !

ಪುರಿ (ಒಡಿಶಾ) – ಇಲ್ಲಿನ ಜಗತ್ಪ್ರಸಿದ್ಧ ಶ್ರೀ ಜಗನ್ನಾಥ ಮಂದಿರದ ರತ್ನಭಂಡಾರದಲ್ಲಿರುವ ಚಿನ್ನದ-ಬೆಳ್ಳಿಯ ಆಭರಣಗಳು, ಹಾಗೂ ಅಮೂಲ್ಯ ವಸ್ತುಗಳ ಎಣಿಕೆಯನ್ನು ಮಾರ್ಚ್ 25 ರಿಂದ ಆರಂಭಿಸಲಾಗಿದೆ. ನಿಖರತೆ ಮತ್ತು ಪಾರದರ್ಶಕತೆ ತರಲು ಈ ಪ್ರಕ್ರಿಯೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. 1978 ರ ನಂತರ ಮೊದಲ ಬಾರಿಗೆ ಭಗವಾನ ಜಗನ್ನಾಥನ ರತ್ನಭಂಡಾರವನ್ನು ಇಷ್ಟು ವ್ಯಾಪಕ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಪದ್ಧತಿಯಿಂದ ಮೌಲ್ಯಮಾಪನ ಮಾಡಲಾಗುತ್ತಿದೆ.

೧. ಜಗನ್ನಾಥ ಮಂದಿರ ಆಡಳಿತದ ಮುಖ್ಯ ಆಡಳಿತಾಧಿಕಾರಿಗಳಾದ ಡಾ. ಅರವಿಂದ ಕುಮಾರ ಪಾಢಿಯವರು, ಮೊದಲ ದಿನ ಸುಮಾರು 6 ಗಂಟೆಗಳ ಕಾಲ ‘ಗಣತಿ ಮಾನತಿ’ (ಎಣಿಕೆಯ) ಪ್ರಕ್ರಿಯೆ ನಡೆಯಿತು, ಇದರಲ್ಲಿ ‘ಚಲ ರತ್ನ ಭಂಡಾರ’ದಲ್ಲಿನ ಸುಮಾರು ಶೇ. 80 ರಷ್ಟು ಆಭರಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮಂದಿರ ಆಡಳಿತವು ಇದುವರೆಗೆ ರತ್ನಗಳ ಪ್ರಮಾಣ ಅಥವಾ ತೂಕವನ್ನು ಘೋಷಿಸಿಲ್ಲ. ಇನ್ನುಳಿದ ಶೇ. 20 ರಷ್ಟು ಆಭರಣಗಳ, ಹಾಗೂ ರತ್ನಭಂಡಾರದಲ್ಲಿನ ವಸ್ತುಗಳ ಎಣಿಕೆಯು ಬರುವ ದಿನಗಳಲ್ಲಿ ಮುಂದುವರಿಯಲಿದೆ.

೨. ಭಗವಾನ ಜಗನ್ನಾಥನ ದೈನಂದಿನ ಪೂಜಾವಿಧಿಯಲ್ಲಿ ಬಳಸಲಾಗುವ ಚಿನ್ನಾಭರಣಗಳ ಸಹಿತ ಇತರ ಅಮೂಲ್ಯ ವಸ್ತುಗಳ ವಿವರವಾದ ವರ್ಣನೆಯನ್ನು ಆಧುನಿಕ ಯಂತ್ರಗಳ ಸಹಾಯದಿಂದ ಮಾಡಲಾಗುತ್ತಿದೆ. ಈ ಸಮಯದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯನ್ನು ದಾಖಲಿಸುವುದರ ಜೊತೆಗೆ ಇದರಲ್ಲಿ ಅತ್ಯಾಧುನಿಕ ಸಾಧನಗಳನ್ನು ಬಳಸಲಾಗುತ್ತಿದೆ. ಮಂದಿರದ ಖಜಾನೆ ಮತ್ತು ಆಭರಣಗಳ ನಿಖರ ರಚನೆ ಹಾಗೂ ನೋಂದಣಿ ಮಾಡಲು ‘ತ್ರಿ-ಡಿ ಮ್ಯಾಪಿಂಗ್’ (ವಿಶೇಷ ಗಣಕೀಕೃತ ಪ್ರಣಾಲಿಕೆಯನ್ನು ಬಳಸಿ ವಸ್ತು, ಭೂಭಾಗ ಅಥವಾ ವಾತಾವರಣದ ಡಿಜಿಟಲ್ ಮತ್ತು ತ್ರಿಮಿತೀಯ ಚಿತ್ರಣವನ್ನು ತಯಾರಿಸುವ ಪ್ರಕ್ರಿಯೆ) ಮಾಡಲಾಗುತ್ತಿದೆ. ಹಾಗೆಯೇ ಸಂಪೂರ್ಣ ಪ್ರಕ್ರಿಯೆಯ ಉನ್ನತ ದರ್ಜೆಯ ಛಾಯಾಚಿತ್ರಣ ಮತ್ತು ಚಿತ್ರೀಕರಣ ಮಾಡಲಾಗುತ್ತಿದೆ.